ಮಂಗಳೂರು, ಫೆ.17: ಎಚ್1ಎನ್1 ಬಗ್ಗೆ ಸಾರ್ವಜನಿಕರು ಗೊಂದಲಪಡುವ ಅಗತ್ಯವಿಲ್ಲ. ರೋಗ ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಿ ಸೂಕ್ತ ಚಿಕಿತ್ಸೆಗೆ ಮುಂದಾಗಬೇಕು ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಕರೆ ನೀಡಿದ್ದಾರೆ.
ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜನವರಿಯಿಂದ ಇದು ವರೆಗೆ ಒಟ್ಟು 1,057 ಶಂಕಿತ ರೋಗಿಗಳ ಗಂಟಲಿನ ಸ್ರಾವದ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ 285 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದ್ದು, 173 ಮಂದಿ ಗುಣಮುಖರಾಗಿದ್ದಾರೆ. 15 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 74 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಈ ರೋಗಕ್ಕೆ ಸಂಬಂಧಿಸಿ ಜನವರಿಯಲ್ಲಿ 8 ಹಾಗೂ ಫೆಬ್ರವರಿಯಲ್ಲಿ 9 ಮಂದಿ ಸೇರಿದಂತೆ ಒಟ್ಟು 18 ಮಂದಿ ಮೃತಪಟ್ಟಿದ್ದಾರೆ ಎಂದು ವಿವರ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಸರಕಾರಿ ಆಸ್ಪತ್ರೆಗಳಿಗೆ ರೋಗ ಲಕ್ಷಣಗಳೊಂದಿಗೆ ಬರುವ ರೋಗಿಗೆ ತಕ್ಷಣದಿಂದ ಚಿಕಿತ್ಸೆ ಪ್ರಾರಂಭಿಸಲಾಗುತ್ತದೆ. ರಾಜ್ಯದಲ್ಲಿ ರೋಗಕ್ಕೆ ಸಂಬಂಧಿಸಿ ಸಾಕಷ್ಟು ಪ್ರಮಾಣದಲ್ಲಿ ಔಷಧಿ ಲಭ್ಯ ವಿದೆ. ಖಾಸಗಿ ಡೀಲರ್ಗಳು ಹಾಗೂ ಖಾಸಗಿ ಆಸ್ಪತ್ರೆಗಳಿಗೂ ಔಷಧವನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಔಷಧಿ ಲಭ್ಯವಿರುವ ಡೀಲರ್ಗಳ ವಿವರಗಳನ್ನು ಆರೋಗ್ಯ ಇಲಾಖೆಯ ವೆಬ್ಸೈಟ್ನಲ್ಲಿ ಈಗಾಗಲೇ ಪ್ರಕಟಿಸಲಾಗಿದೆ ಎಂದು ಅವರು ಹೇಳಿದರು. 2009ರಿಂದಲೇ ಈ ಸಾಂಕ್ರಾಮಿಕ ರೋಗ ಪತ್ತೆಯಾಗಿದ್ದು, 2010ರಲ್ಲೂ ಭಾರೀ ಸುದ್ದಿ ಮಾಡಿದ್ದ ಈ ಸೋಂಕು ಕಳೆದ ವರ್ಷ ಕಡಿಮೆಯಾಗಿತ್ತು. ಮತ್ತೆ ಈ ಬಾರಿ ರಾಜಸ್ತಾನ, ಆಂಧ್ರಪ್ರದೇಶ, ಅಸ್ಸಾಂ ಮೊದಲಾದ ರಾಜ್ಯಗಳಲ್ಲಿ ಉಲ್ಬಣ ಗೊಂಡ ಹಿನ್ನೆಲೆಯಲ್ಲಿ ಜನವರಿಯಿಂದ ರಾಜ್ಯದಲ್ಲೂ ಕಾಣಿಸಿಕೊಂಡಿದೆ. ಇದು ವಾತಾವರಣದ ಉಷ್ಣತೆ ಯನ್ನು ಹೊಂದಿಕೊಂಡು ಉಲ್ಬಣವಾಗುವ ಹಾಗೂ ಹರಡುವ ರೋಗವಾಗಿದೆ. ಪ್ರತಿವರ್ಷ ಸಾಂಕ್ರಾಮಿಕ ರೋಗಗಳ ಬಗ್ಗೆ ಮುಂಜಾಗೃತಾ ಕ್ರಮಗಳನ್ನು ಇಲಾಖೆ ವತಿಯಿಂದ ನಡೆಸ ಲಾಗುತ್ತದೆ. ಇಲಾಖೆ ಆರಂಭದಲ್ಲಿ ರೋಗದ ಬಗ್ಗೆ ಯಾವುದೇ ರೀತಿಯಲ್ಲಿ ನಿಲಕ್ಷ ತೋರಿಲ್ಲ ಎಂದು ಸುದ್ದಿಗಾರರ ಪ್ರಶ್ನೆ ಯೊಂದಕ್ಕೆ ಪ್ರತಿಕ್ರಿಯಿಸಿದರು.
ಕೆ.ಎನ್. ಟೇಲರ್ ಚಿಕಿತ್ಸೆ ಭರಿಸಲು ನಿರ್ಧಾರ: ತುಳು ಸಾಹಿತ್ಯ, ತುಳು ನಾಟಕ, ಸಿನೆಮಾಗಳನ್ನು ಟಿಕೆಟ್ ನೀಡಿ ನೋಡುವಂತಹ ವಾತಾವರಣ ಸೃಷ್ಟಿಸಿರುವ ತುಳು ನಾಡಿನ ರಾಜ್ಕುಮಾರ್ ಖ್ಯಾತಿಯ ಕೆ.ಎನ್.ಟೇಲರ್ ಪ್ರಸ್ತುತ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದು, ಅವರನ್ನು ಭೇಟಿ ಯಾಗಿದ್ದೇನೆ. ಅವರ ಚಿಕಿತ್ಸೆಯ ಹೊರೆ ಕುಟುಂಬದವರಿಗೆ ಆಗದಂತೆ ಗಮನಹರಿಸಲಾಗುವುದು ಎಂದು ಸಚಿವ ಹೇಳಿದರು. ಕೆ.ಎನ್.ಟೇಲರ್ರ ಅನಾರೋಗ್ಯದ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದವರು ಹೇಳಿದರು.
ರಾಜ್ಯದಲ್ಲಿ 10 ಪ್ರಯೋಗಾಲಯ : ಎಚ್1ಎನ್1 ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳ ತಪಾ ಸಣೆಗೆ ಸಂಬಂಧಿಸಿ ಉತ್ತರ ಕರ್ನಾಟಕ ಹಾಗೂ ರಾಜ್ಯದ ವಿವಿಧ ಕಡೆಗಳಲ್ಲಿ ಪ್ರಯೋಗಾಲಯದ ಕೊರತೆ ಇರುವುದರಿಂದ 7ರಿಂದ 10 ಕಡೆ ಗಳಲ್ಲಿ ಪ್ರಯೋಗಾಲಯಗಳನ್ನು ಆರಂಭಿಸಲಾಗುವುದು. ಪ್ರಸ್ತುತ ರಾಜ್ಯದಲ್ಲಿ ಮಣಿಪಾಲ, ಶಿವಮೊಗ್ಗ, ಬೆಂಗಳೂರು ಸೇರಿ ದಂತೆ ಐದು ಕಡೆಗಳಲ್ಲಿ ಇದೆ ಎಂದು ಸಚಿವ ಯು.ಟಿ.ಖಾದರ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರವಾಗಿ ನುಡಿದರು.
ಗುತ್ತಿಗೆದಾರ ಎಂಬಿಬಿಎಸ್ ವೈದ್ಯರಿಗೆ ಏಕರೂಪದ ವೇತನ ಜಾರಿ:
ಗುತ್ತಿಗೆದಾರ ಎಂಬಿಬಿಎಸ್ ವೈದ್ಯರಿಗೆ ಮೂಲ ವೇತನವಾಗಿ ಈಗಿರುವ 26,000 ರೂ.ಗಳನ್ನು 40,000 ರೂ.ಗಳಿಗೆ ಏರಿಕೆ ಮಾಡಲಾಗಿದೆ. 25 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುವ ಎಂಬಿಬಿಎಸ್ ವೈದ್ಯರಿಗೆ ಹೆಚ್ಚುವರಿಯಾಗಿ 2 ಸಾವಿರ ರೂ.ಗೆ ನೀಡಲಾಗುವುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.
ಮೆಡಿಕಲ್ ಕಾಲೇಜು ಹಾಗೂ ಆರೋಗ್ಯ ಇಲಾಖಾ ಕಾಲೇಜುಗಳ ವೈದ್ಯರ ವೇತನ ಅಂತರವನ್ನು ಬಹುತೇಕ ವಾಗಿ ಕಡಿಮೆಗೊಳಿಸಲಾಗುತ್ತಿದೆ. ಕೆಪಿಎಸ್ ಅಥವಾ ನೇರ ನಿಯಮಗಳ ಮೂಲಕ ನೇಮಕಾತಿಗೆ ಒಪ್ಪಿಗೆ ಪಡೆಯಲಾಗಿದ್ದು, ಈ ವರ್ಷ ಎರಡು ಬಾರಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಮುಂದಿನ ವರ್ಷ ದಿಂದ ಪ್ರತಿ ವರ್ಷ ನೇಮಕಾತಿ ಮಾಡಲು ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ವೈದ್ಯಾಧಿಕಾರಿ ಡಾ.ರಾಜೇಶ್, ಕಾಂಗ್ರೆಸ್ ನಾಯಕರಾದ ಟಿ.ಕೆ.ಸುಧೀರ್, ಸದಾಶಿವ ಉಳ್ಳಾಲ್, ಮೆಲ್ವಿನ್ ಮತ್ತಿತರರು ಉಪಸ್ಥಿತರಿದ್ದರು.