ಮಂಗಳೂರು,ಫೆ.17: ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ಮೀಸಲಾದ ದೇಶದ ಪ್ರತಿಷ್ಠಿತ ಕಾರ್ ರೇಸಿಂಗ್ ಸ್ಪರ್ಧೆ ‘ಬಾಹಾ ಎಸ್.ಎ.ಇ. 2015’ ರ ಅಂಗವಾಗಿ ಬೆಂಜನಪದವು ಕೆನರಾ ಇಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ ಅಸ್ತ್ರ ‘ ಎನ್ನುವ ವಿಶಿಷ್ಟ ಚತುಶ್ಚಕ್ರ ವಾಹನವೊಂದನ್ನು ರೂಪಿಸಿದೆ.
ಭಾರತದ ‘ಸೊಸೈಟಿ ಆಫ್ ಅಟೋಮೋಟಿವ್ ಇಂಜಿನೀಯರ್ಸ್’ (ಎಸ್.ಎ.ಇ ಇಂಡಿಯಾ) ವತಿಯಿಂದ 2007ರಿಂದ ನಡೆಯುತ್ತಿರುವ ಎರಡು ಹಂತಗಳ ಈ ಆಫ್ ರೋಡ್ ರೇಸಿಂಗ್ ಸ್ಪರ್ಧೆಯಲ್ಲಿ ಎರಡನೇ ಬಾರಿಗೆ ಸ್ಪರ್ಧಿಸಿಸುತ್ತಿರುವ ಕೆನರಾ ಇಂಜಿನೀಯರಿಂಗ್ ಕಾಲೇಜಿನ ತಂಡವು ಗುಜರಾತ್ ನಡೆದ ಮೊದಲ ಹಂತದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲೇ ಅತ್ಯುತ್ತಮ ಸಾಧನೆಯೊಂದಿಗೆ ಮುಂದಿನ ಹಂತಕ್ಕೆ ಅರ್ಹತೆ ಪಡೆದಿತ್ತು. ಇದೀಗ ಅಂತಿಮ ಹಂತದ ಸ್ಪರ್ಧೆಯು ಮಧ್ಯ ಪ್ರದೇಶದ ಪಿತಾಂಪುರದಲ್ಲಿ ಫೆ 19ರಿಂದ ಆರಂಭಗೊಂಡಿದ್ದು ಫೆ.22ರವರೆಗೆ ನಡೆಯಲಿದೆ.
ಕೆನರಾ ಇಂಜಿನೀಯರಿಂಗ್ ಕಾಲೇಜಿನ ಅಂತಿಮ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿ ಸುದೇಶ್ ಶೆಟ್ಟಿ ನೇತೃತ್ವದ 22 ವಿಧ್ಯಾರ್ಥಿಗಳ ಸಿ.ಇ.ಸಿ. ಮೋಟರ್ ಸ್ಫೋಟ್ಸ್ ತಂಡ ಅಲ್ಪಾವಧಿಯಲ್ಲಿ 4 ಲಕ್ಷ ರೂ ವೆಚ್ಚದಲ್ಲಿ ನ್ನಿರ್ಮಿಸಿದ ‘ಅಸ್ತ್ರ’ ರೇಸಿಂಗ್ ಕಾರ್ ಅಂತಾರಾಷ್ಟ್ರೀಯ ಮಟ್ಟದ ಬಾಹಾ ಕಾರ್ ವಿನ್ಯಾಸವನ್ನೇ ಹೊಂದಿರುವುದು, ಉತ್ತಮ ಪಿಕ್ಅಪ್ಗಾಗಿ 25 ಇಂಚಿನ ಟೈರ್, 60 ಕೆ.ಜಿ ತೂಗುವ ಹಗುರ ಚೇಸಿ, ಟಿಗ್ ವೆಲ್ಡ್ ಜಾಂಟ್ಸ್, ಗಂಟೆಗೆ 55 ಕಿ.ಮೀ ವೇಗ,ಕೇವಲ 250 ಕೆ.ಜಿ ಭಾರ , ರಿವರ್ಸ್ ಸಹಿತ 5 ಗೇರ್ಗಳು… ಹೀಗೆ ಬಹಳಷ್ಟು ವಿಶೇಷತೆಗಳಿಂದ ಕೂಡಿದೆ. ಯಾವುದೇ ಉಬ್ಬು ತಗ್ಗು,ಗುಡ್ಡ, ಎತ್ತರ ಪ್ರದೇಶವನ್ನು ಸರಾಗವಾಗಿ ಏರಿ ಇಳಿಯುವ ‘ಅಸ್ತ್ರ’ದ ಕಾರ್ಯವೈಖರಿಯನ್ನು ಕಾಣುವುದೇ ಒಂದು ಸೊಬಗಾಗಿದೆ.
ಇದೀಗ ಅಂತಿಮ ಹಂತದಲ್ಲಿ 120ರಷ್ಟಿರುವ ರೇಸಿಂಗ್ ಕಾರುಗಳಲ್ಲಿ ‘ಅಸ್ತ್ರ’ ಕೂಡಾ ಒಂದಾಗಿದೆ.ಕರ್ನಾಟಕದಿಂದ ಸ್ಪರ್ಧಿಸುತ್ತಿರುವ ಒಟ್ಟು 9 ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇವಲ 4 ಇಂಜಿನಿಯರಿಂಗ್ ಕಾಲೇಜಿನ ತಂಡಗಳು ಸ್ಪರ್ಧೆಯಲ್ಲಿವೆ.
ತಾಂತ್ರಿಕ ಸವಾಲುಗಳನ್ನು ಮೆಟ್ಟಿ ನಿಂತು ಸ್ಪರ್ಧಾತ್ಮಕ ಮನೋಭಾವದಿಂದ ರೇಸಿಂಗ್ ಕಾರ್ ರೂಪಿಸುವಲ್ಲಿ ಇಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ವೈಯಕ್ತಿಕ ಬುದ್ಧಿಮತ್ತೆಯ ಜತೆಗೆ ಟೀಂವರ್ಕ್ ಕೂಡಾ ಮಹತ್ವದ್ದಾಗಿದೆ. ಒಟ್ಟು ಹತ್ತು ಹಂತಗಳ ಕಠಿಣ ಸ್ಪರ್ಧೆಯಲ್ಲಿ ಸಂಘಟಕರ ಷರತ್ತುಗಳನ್ನೆಲ್ಲ ಪಾಲಿಸಿ ರೂಪಿಸಿದ ಈ ರೇಸ್ ಕಾರ್ ಕಾಲೇಜಿನ ಆವರಣದಲ್ಲಿ ಏರಿಳಿತದ ಪ್ರದೇಶದಲ್ಲಿ ಮೆಟ್ಟಿಲುಗಳನ್ನೇರುವ ಸಾಹಸದಲ್ಲಿ ನೆರೆದವರ ಪ್ರಶಂಸೆಯೊಂದಿಗೆ ಟ್ರಯಲ್ ನಡೆಸಿದೆ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ಡಾ.ಗಣೇಶ್ ಭಟ್ ಸಹಿತ ಎಲ್ಲರ ಶುಭಹಾರೈಕೆಗಳೊಂದಿಗೆ ಸ್ಪರ್ಧೆಗೆ ಹೊರಟು ನಿಂತಿರುವ ಅಸ್ತ್ರದ ಸಾಧನೆಯ ಬಗ್ಗೆ ಇದೀಗ ಕುತೂಹಲ ಹೆಚ್ಚಿದೆ.