ಬೆಳ್ತಂಗಡಿ,ಫೆ.14 : ಕಸ್ತೂರಿರಂಗನ್ ವರದಿ ಕುರಿತಂತೆ ಜನರಲ್ಲಿ ಆತಂಕ ಇದೆ. ಸುಪ್ರೀಂ ಕೋರ್ಟ್ ಆದೇಶದಂತೆ ಪುನರ್ ವರದಿ ಸಲ್ಲಿಸಲು ಕೇಂದ್ರ ಸರಕಾರ 5 ತಿಂಗಳ ಸಮಯವಕಾಶ ಕೇಳಿದ್ದು ಅಲ್ಲಲ್ಲಿ ಗ್ರಾಮ ಸಭೆಗಳನ್ನು ಮಾಡಿ ಜನರ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುವಂತೆ ರಾಜ್ಯ ಸರಕಾರಗಳಿಗೆ 3 ತಿಂಗಳ ಅವಧಿ ನೀಡಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ, ಪುದುವೆಟ್ಟು, ಧರ್ಮಸ್ಥಳ ಮೊದಲಾದ ಭಾಗಗಳಿಗೆ ಭೇಟಿ ನೀಡಿದ ಜನರ ಅಹವಾಲುಗಳನ್ನು ಸ್ವೀಕರಿಸಿ, ಕಾಯರ್ತಡ್ಕ ಸರಕಾರಿ ಹಿ. ಪ್ರಾ ಶಾಲೆಯ ಸಭಾಂಗಣದಲ್ಲಿ ನಡೆದ ಜನ ಸ್ಪಂದನಾ ಸಭೆಯಲ್ಲಿ ಮಾತನಾಡಿದರು.
ಯೋಜನೆಯ ಬಗ್ಗೆ ಆತಂಕ ಬೇಡ. ಯೋಜನೆಯನ್ನು ಜನರಿಗೆ ತೊಂದರೆ ಯಾಗದಂತೆ ಅನುಷ್ಟಾನಿಸಲಾಗುವುದು. ಈ ನಿಟ್ಟಿನಲ್ಲಿ ಕ್ಷೇತ್ರಗಳ ಅವಲೋಕನ ಮತ್ತು ಅಧ್ಯಯನ. ಬಳಿಕ ಜನರ ಸಮಸ್ಯೆಗಳ ಬಗ್ಗೆ ಸ್ಪಂದಿಸುವುದಕ್ಕಾಗಿ ಮುಂದಿನ ದಿನಗಳಲ್ಲಿ ಅಧಿಕಾರಿಗಳನ್ನೂ ಕರೆದುಕೊಂಡು ಗ್ರಾಮಗಳಿಗೆ ಭೇಟಿ ನೀಡಲಾಗುವುದು ಎಂದರು.
25 ಕ್ಕೂ ಅಧಿಕ ಬೇಡಿಕೆಗಳ ಮನವಿ ಸಲ್ಲಿಕೆ: ಕಾಯರ್ತಡ್ಕ ಶಾಲಾ ನಿವೇಶನಕ್ಕೆ ಆರ್ಟಿಸಿ ಆಗಿಲ್ಲ ಎಂದು ಸಂಸದರ ಗಮನ ಸೆಳೆದರು. ಆರ್ಟಿಸಿ ಬಗ್ಗೆ ತಹಸೀಲ್ದಾರರಿಗೆ ಸೂಚನೆ ನೀಡುವುದಾಗಿ ಹೇಳಿದರು. ನೆರಿಯ ಹೊಳೆಗೆ ಪುದುವೆಟ್ಟು ಎಂಬಲ್ಲಿ ಸೇತುವೆ, ಮೇಲಿನಡ್ಕ- ಕಾಪಿನಡ್ಕ ರಸ್ತೆಗೆ ಡಾಮರೀಕರಣ ಸೇರಿದಂತೆ ಪ್ರಮುಖ ರಸ್ತೆಗಳ ದುರಸ್ತಿ ಸೇರಿದಂತೆ ಹಲವಾರು ಮನವಿಗಳನ್ನು ಸಲ್ಲಿಸಲಾಯಿತು.
ಈಗಾಗಲೇ ಜನರ ಬೇಡಿಕೆಯಂತೆ ಕುದ್ರಾಯ ಎಂಬಲ್ಲಿ ರಸ್ತೆಯ ಎತ್ತರವನ್ನು ತಗ್ಗಿಸುವ ಕಾಮಗಾರಿ ನಡೆಯುತ್ತಿದ್ದು ಅದಕ್ಕೆ ಈಗ ಇಟ್ಟಿರುವ ಎರಡು ಲಕ್ಷ ಅನುದಾನ ಸಾಕಾಗುವುದಿಲ್ಲ ಎಂದು ಮನಗಂಡು ಇನ್ನೂ 10 ಲಕ್ಷ ರೂ. ಅನುದಾನ ನೀಡುವುದಾಗಿ ಅವರು ಪ್ರಕಟಿಸಿದರು. ಧರ್ಮಸ್ಥಳ ಸಹಕಾರಿ ಸಂಘಕ್ಕೆ, ಪುದುವೆಟ್ಟುವಿನಲ್ಲಿ ಕಷಿಕ ಶ್ರೀಪತಿ ಹೆಬ್ಬಾರ್ ಅವರ ಮನೆಗೆ ಭೇಟಿ, ಅನಾರೋಗ್ಯಕ್ಕೊಳಗಾಗಿದ್ದ ಕಳೆಂಜ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಬಾಲಕಷ್ಣ ಅವರ ಮನೆಗೂ ಭೇಟಿ ನೀಡಿ ಸಾಂತ್ವನ ಹೇಳಿದರು.