ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು ,ಫೆ.14 : ನಗರದ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಹಿರಿಯ ವಿಧ್ಯಾರ್ಥಿಗಳ ಸಂಘದ 5 ನೇ ವಾರ್ಷಿಕೋತ್ಸವ ಸಮಾರಂಭವು ಶುಕ್ರವಾರ ಸಂಜೆ ಕಾಲೇಜಿನ ಪ್ರಾಂಗಣದಲ್ಲಿ ಬಹಳ ಅದ್ಧೂರಿಯಾಗಿ ಜರಗಿತು. ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಹಿರಿಯ ವಿಧ್ಯಾರ್ಥಿಗಳ ಸಂಘ ಸಕ್ರಿಯವಾಗಿ ಕಳೆದ 4 ವರ್ಷಗಳಿಂದ ಯಶಸ್ವಿಯಾಗಿ ವಾರ್ಷಿಕ ದಿನವನ್ನು ಆಚರಿಸಿ 5 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಸುಸಂದರ್ಭದಲ್ಲಿ ಚಿರ ನೆನೆಪಿನಲ್ಲಿ ಉಳಿಯುವ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ತಮ್ಮ ಕರ್ತವ್ಯ ನಿಷ್ಠೆಯಿಂದ ದೇಶ ವಿದೇಶಗಳಲ್ಲಿ ಪ್ರಶಂಸೆಗೆ ಪಾತ್ರರಾಗಿರುವ ಕಾಲೇಜಿನ ಹಳೆ ವಿದ್ಯಾರ್ಥಿ ಡಾ. ಲೆನೊರ್ಡ್ ಮಾಚಡೋ ಅವರು ಸ್ವಾಮಿ ಶ್ರೀ ನಾರಾಯಣ ಗುರುಗಳ ಬಾವಚಿತ್ರದ ಮುಂದೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕಠಿಣ ಪರಿಶ್ರಮದಿಂದ ಓರ್ವ ಸಾಮಾನ್ಯ ವ್ಯಕ್ತಿ ಕೂಡ ಯಾವೂದೇ ಉನ್ನತ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರು ನಮ್ಮನ್ನು ಕಠಿಣವಾಗಿ ನಡೆಸುವುದರಿಂದ ಭವಿಷ್ಯದಲ್ಲಿ ನಮಗೆ ಮಹತ್ತರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿದ್ಯೆ ಕೊಡುವ ಶಿಕ್ಷಕರು ವಿದ್ಯೆಯೊಂದಿಗೆ, ಪಾಠ್ಯೇತರ ವಿಷಯಗಳಲ್ಲೂ ನಮ್ಮ ಮಾರ್ಗದರ್ಶಕರಾಗಿ ನಮ್ಮ ವ್ಯಕ್ತಿತ್ವ ಬೆಳವಣಿಗೆಗೆ ಅಗತ್ಯವಾಗುವ ರೀತಿಯಲ್ಲಿ ಒಂದೊಂದೆ ಮೆಟ್ಟಲು ಹತ್ತಿ ನಾವು ಸಮಾಜದಲ್ಲಿ ಎತ್ತರಕ್ಕೇರಲು ಸಹಕರಿಸುತ್ತಾರೆ. ಇಂಥ ಅವಕಾಶಗಳನ್ನು ನಾವು ಸದುಪಯೋಗಪಡಿಸಿಕೊಂಡು ಸತತ ಸಾಧನೆಯಿಂದ ನಮ್ಮ ಜೀವನವದ ಗುರಿ ತಲುಪುದರೊಂದಿಗೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದ ಡಾ. ಲೆನೊರ್ಡ್ ಮಾಚಡೋ ಅವರು ಹಿರಿಯ ವಿಧ್ಯಾರ್ಥಿಗಳ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.
ಶ್ರೀ ವೆಂಕಟೇಶ್ ಶಿವ ಭಕ್ತಿ ಯೋಗ ಸಂಘದ ಅಧ್ಯಕ್ಷಕರಾದ ಬಿ.ದೇವದಾಸ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದ ಮುಖ್ಯ ಅಥಿತಿಗಳಾಗಿ ಕಾಲೇಜಿನ ಹಳೆ ವಿಧ್ಯಾರ್ಥಿ ಮಂಗಳೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಪೇಮನಂದ ಶೆಟ್ಟಿ, ಕಾಲೇಜಿನ ಸಂಚಾಲಕ ಎಸ್. ಜಯವಿಕ್ರಮ, ಲೆಕ್ಕ ಪರಿಶೋಧಕ ಸಿ.ಎ ನಂದಗೋಪಾಲ್ ಶೆಣೈ, ಶ್ರೀ ವೆಂಕಟೇಶ ಶಿವಭಕ್ತಿಯೋಗ ಸಂಘದ ಕಾರ್ಯದರ್ಶಿ ಶ್ರೀ ವಸಂತ ಕಾರಂದೂರು, ಬಿಎಡ್ ವಿಭಾಗದ ಪ್ರಾಂಶುಪಾಲರಾದ ಶ್ರೀ ಉದಯ ಕುಮಾರ್, ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಕ್ಷಮಾ ಎನ್.ರಾವ್ ಹಳೇ ವಿದ್ಯಾರ್ಥಿ ಸಂಘದ ಸ್ಥಾಪಕ ಸದಸ್ಯ ಶ್ರೀ ರವೀಂದ್ರ ಮುಂತಾದವರು ಭಾಗವಹಿಸಿದ್ದರು .
ಸಂಘದ ಉಪಾಧ್ಯಕ್ಷರಾದ ಶ್ರೀ ನಂದಗೋಪಾಲ್ ಶೆಣೈ ಅವರ ನಿಧಿಯಿಂದ ಪ್ರತಿ ವರ್ಷವೂ ಕಾಲೇಜಿನ ಬಡ ಆರ್ಹ ಮಕ್ಕಳಿಗೆ ವಿಧ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು, ಈ ಬಾರಿ ಸುಮಾರು 10 ವಿಧ್ಯಾರ್ಥಿಗಳಿಗೆ ರೂ. 1 ಲಕ್ಷ 20 ಸಾವಿರ ವಿಧ್ಯಾರ್ಥಿ ವೇತನವನ್ನು ಶ್ರೀ ನಂದಗೋಪಾಲ್ ಶೆಣೈ ಅವರು ವಿತರಿಸಿದರು.
ಗೌರವ – ಸನ್ಮಾನ
ಕಾರ್ಯಕ್ರಮದಲ್ಲಿ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಡಾ ನರಸಿಂಹ ಮೂರ್ತಿ, ಡಾ. ಜಯಪ್ರಕಾಶ್ ರಾವ್, ಕಾಲೇಜಿನ ಮಾಜಿ ವಿಧ್ಯಾರ್ಥಿ (ಹಳೆ ವಿಧ್ಯಾರ್ಥಿ) ಗಳಾದ ಶ್ರೀಮತಿ ಯೋಗ್ಯ ರೈ, ಸದಾಶಿವ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಮಾತ್ರವಲ್ಲದೇ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಕಲಿತು ಇದೀಗ ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದಂತಹ ಡಾ. ಲೆನೊರ್ಡ್ ಮಾಚಡೋ ಹಾಗೂ ಪೇಮನಂದ ಶೆಟ್ಟಿ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಕಳೆದ ಐದು ವರ್ಷಗಳಿಂದ ಸಂಘದ ಅಧ್ಯಕ್ಷರಾಗಿದ್ದುಕೊಂಡು ಸಂಘವನ್ನು ಸತತ ಐದು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ ಶ್ರೀ ನವೀನ್ ಚಂದ್ರ.ಬಿ ಹಾಗೂ ಸಂಘದ ಕಾರ್ಯದರ್ಶಿ ಶ್ರೀಮತಿ ಜಯಶ್ರೀ ಅವರನ್ನು ಸಂಘದ ಇತರ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು. ಉಪಾಧ್ಯಕ್ಷ ಸುನೀಲ್ ದತ್ತ್ ಪೈ ಅವರು ಸನ್ಮಾನ ಪತ್ರ ಓದಿದರು.
ಕ್ರೀಡಾ ಕೂಟ – ಬಹುಮಾನ ವಿತರಣೆ :
ಸಂಘದ ವತಿಯಿಂದ ನಡೆದಂತಹ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನವನ್ನು ವಿತರಿಸಿದರು.
ಸಂಘದ ಅಧ್ಯಕ್ಷ ನವೀನ್ ಚಂದ್ರ.ಬಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಈ ಕಾಲೇಜಿನಲ್ಲಿ ಕಲಿತು ಸಮಾಜದ ಬೇರೆ ಬೇರೆ ಸ್ತರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರಲ್ಲಿ ಅರ್ಹರನ್ನು ಸಂಪರ್ಕಿಸಿ ಅವರನ್ನು ಸನ್ಮಾನಿಸಿ ಗುರುತಿಸುವಂತಹ ಮಹತ್ತರ ಕಾರ್ಯವನ್ನು ಸಂಘವು ಮಾಡುತ್ತ್ತಾಬಂದಿದೆ. ಮಾತ್ರವಲ್ಲದೇ ಕಾಲೇಜಿನಲ್ಲಿ ನಿವೃತ್ತ ಉಪನ್ಯಾಸಕರಾಗಿದ್ದವರನ್ನು ಮತ್ತೆ ಎಲ್ಲರ ಸಮ್ಮುಖದಲ್ಲಿ ಸನ್ಮಾನಿಸುವಂತಹ ಉತ್ತಮ ಕಾರ್ಯವೂ ಕೂಡಾ ವರುಷಗಳಿಂದ ಸಂಘದ ವತಿಯಿಂದ ನಡೆಸಿಕೊಂಡು ಬರುತ್ತಿದ್ದೇವೆ. ಪ್ರತೀ ವರ್ಷ ಕ್ರೀಡಾಕೂಟ ಆಯೋಜಿಸುವ ಮೂಲಕ ಎಲ್ಲರನ್ನೂ ಒಂದೇ ಕಡೆ ಒಟ್ಟು ಸೇರಿಸುವ ಹಾಗೂ ಹೊಸ ಹೊಸ ಯೋಜನೆಗಳನ್ನು ರೂಪಿಸುವ ಕಾರ್ಯವನ್ನು ಸಂಘ ಮಾಡುತ್ತಿದೆ. ಒಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಂಘವು ಉತ್ತಮ ಚಟುವಟಿಕೆಗಳ ಮೂಲಕ ಸಾಮಾಜಿಕ ಚಿಂತನೆಗಳೊಂದಿಗೆ ಮುಂದಡಿ ಇಡುತ್ತಿದೆ ಎಂದು ನವೀನ್ಚಂದ್ರ ಅವರು ಈ ಸಂದರ್ಭದಲ್ಲಿ ಹೇಳಿದರು.
ಕಳೆದ ಶೈಕ್ಷಣಿಕ ವರ್ಷ ಹಾಗೂ ಈ ವರ್ಷ ಸಂಘದ ವತಿಯಿಂದ ಕಾಲೇಜಿನ ವಿಧ್ಯಾರ್ಥಿಗಳಿಗೆ ನಾಯಕತ್ವ ತರಬೇತಿ, ವ್ಯಕ್ತಿತ್ವ ವಿಕಸನ ಶಿಬಿರ, ಇನ್ನಿತರ ಚಟುವಟಿಕೆಗಳನ್ನು ನಡೆಸಿಕೊಂಡು ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗೆ ಸಂಘ ಬದ್ಧವಾಗಿದೆ. ಮಾತ್ರವಲ್ಲದೇ ಸಂಘದ ಉಪಾಧ್ಯಕ್ಷರಾದ ಶ್ರೀ ನಂದಗೋಪಾಲ್ ಶೆಣೈ ಅವರು ತಮ್ಮ ನಿಧಿಯಿಂದ ಪ್ರತಿ ವರ್ಷವೂ ಕಾಲೇಜಿನ ಬಡ ಆರ್ಹ ಮಕ್ಕಳಿಗೆ ವಿಧ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿದ್ದಾರೆ, ಈ ಬಾರಿ ಕೂಡ ಸುಮಾರು 10 ವಿಧ್ಯಾರ್ಥಿಗಳಿಗೆ ರೂ. 1 ಲಕ್ಷ 20 ಸಾವಿರ ವಿಧ್ಯಾರ್ಥಿ ವೇತನವನ್ನು ನೀಡಲು ಶ್ರೀ ನಂದಗೋಪಾಲ್ ಶೆಣೈ ಅವರು ಮುಂದೆ ಬಂದಿದ್ದಾರೆ. ಶ್ರೀಯುತ್ತರು ನಮ್ಮ ಸಂಘದ ಎಲ್ಲಾ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತು ನಮ್ಮನುಉ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಅವರಿಗೆ ನಮ್ಮ ಸಂಘ ಅಭಾರಿಯಾಗಿದೆ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಶ್ರೀಮತಿ ಜಯಶ್ರೀ ಅವರು ಸಂಘದ ಕಾರ್ಯಚಟುವಟಿಕೆಗಳ ವರದಿ ವಾಚನ ಮಾಡಿದರು. ಸುನೀಲ್ ಪಲ್ಲ ಮಜಲ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಸುನೀಲ್ ದತ್ತ್ ಪೈ ವಂದನಾರ್ಪಣೆಗೈದರು.
ಸಂಘದ ನಿರ್ದೇಶಕ ಡಾ.ಗಂಗಾಧರ್ ಬಿ., ಸಲಹೆಗಾರ ಶ್ರೀ ಲೋಕನಾಥ್ ಬಿ., ಕೋಶಾಧಿಕಾರಿ ಶ್ರೀ ಧನಂಜಯ ನಾಯಕ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಇದೇ ಸಂದರ್ಭದಲ್ಲಿ ಡಾ. ಲೆನೊರ್ಡ್ ಮಾಚಡೋ ಅವರು ಪೊಲೀಯೋ ಹನಿಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.
1 Comment
Dear Harish,
we the office bearers of our Alumni association heartly thank you for covering the whole function bcoz of this our news bceome global news. At the same time we really missed you in the function. Every body was waiting to hear your beatifull voice. Finally we all sang “chalthe chalthe” dedicating this song to our beautifull freind.
god bless you.
sunil dath pai