ಮಂಗಳೂರು,ಫೆ.10 : ‘ನಿಗಮ, ಮಂಡಳಿ, ಅಕಾಡೆಮಿ ಅಧ್ಯಕ್ಷರ ನೇಮಕ ಮಾಡುವಾಗ ಕಾಂಗ್ರೆಸ್ ಪಕ್ಷಕ್ಕಾಗಿ ಹಲವಾರು ವರ್ಷದಿಂದ ಕಾರ್ಯಕರ್ತರಾಗಿ ದುಡಿದವರನ್ನು ಗಮನಿಸಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮುಂದೆ ಕಾಂಗ್ರೆಸ್ ಮುಖಂಡರ ಸಹಿತ ಕಾರ್ಯಕರ್ತರು ತಮ್ಮ ಅಳಲು ತೋಡಿಕೊಂಡರು.
ಕಾಂಗ್ರೆಸ್ ವಕ್ತಾರ ಕಳ್ಳಿಗೆ ತಾರನಾಥ ಶೆಟ್ಟಿ ಮಾತನಾಡಿ, ಬಿಎಂಟಿಸಿಯ ಅಧ್ಯಕ್ಷರನ್ನಾಗಿ ನಾಭಿರಾಜ ಜೈನ್ ಎಂಬವರನ್ನು ದಕ್ಷಿಣ ಕನ್ನಡ ಜಿಲ್ಲೆಯ ವಿವೇಚನೆಯಲ್ಲಿ ನೇಮಿಸಿರುವುದು ಆಕ್ಷೇಪಾರ್ಹ. ನಾಭಿರಾಜ ಜೈನ್ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಸದಸ್ಯರಲ್ಲ ಎಂದರು. ಅಕಾಡೆಮಿ, ನಿಗಮಗಳಿಗೆ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ನೇಮಿಸು ವುದು ಪಕ್ಷ ಸಂಘಟನೆ ದೃಷ್ಟಿಯಿಂದ ಬಹಳ ಸಹಕಾರಿ ಮಾತ್ರವಲ್ಲದೆ ಮುಂದಿನ ಪಂಚಾಯಿತಿ ಚುನಾವಣೆಗೆ ಪರಿಣಾಮಕಾರಿ ಎಂದರು. ಮೂಡಾ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್ ಮಾತನಾಡಿ, ಜೈನ ಸಮುದಾಯಕ್ಕೆ ಒಂದು ಸ್ಥಾನ ನೀಡಿ ಪಕ್ಷಕ್ಕಾಗಿ ದುಡಿದವರನ್ನು ಮೂಲೆಗುಂಪು ಮಾಡಲಾಗಿದೆ ಎಂದರು.
ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಮಾತನಾಡಿ, ಪಕ್ಷ ಅಧಿಕಾರಕ್ಕೆ ಬಂದು 1.8 ವರ್ಷ ವಾದರೂ ಇನ್ನೂ ಕೂಡಾ ಮುಜರಾಯಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ನೇಮಕವಾಗಿಲ್ಲ. ಜಿಲ್ಲೆಯ ರೈತರು, ಮೀನು ಗಾರರು, ಜನ ಸಾಮಾ ನ್ಯರ ಹಿತ ದೃಷ್ಟಿಯಿಂದ ನೇತ್ರಾವತಿ ನದಿ ತಿರುವು ಯೋಜನೆಯನ್ನು ರಾಜ್ಯ ಸರಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಪ್ರಚೋದನಕಾರಿ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸುವ ಭರವಸೆ ನೀಡಿದ್ದರೂ, ಸರಕಾರ ಇನ್ನೂ ಕೂಡಾ ಕ್ರಮ ಕೈಗೊಳ್ಳಲಿಲ್ಲ. ಯುವ ಕಾಂಗ್ರೆಸ್ನ್ನು ಕೇವಲ ಚುನಾವಣೆ ಸಂದರ್ಭ ಬಂಟಿಂಗ್ ಹಾಕಲು ಬಳಸಿ ಕೊಳ್ಳಲಾಗುತ್ತಿದೆ.