ಮಂಗಳೂರು, ಫೆ.07 : ನಗರದ ಉರ್ವಸ್ಟೋರ್ ಬಳಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ತುಳುಭವನ ಕಟ್ಟಡದ ನೆಲಮಹಡಿಗೆ ಬಿಸು ಪರ್ಬದ ಮೊದಲು ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡಮಿ ಕಟ್ಟಡ ಸ್ಥಳಾಂತರಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ತುಳುಭವನದ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದ ಅವರು, ರಂಗಮಂದಿರಕ್ಕೆ ಬೇಕಾದ ಧ್ವನಿ ಬೆಳಕಿನ ವ್ಯವಸ್ಥೆ ಕುರಿತು ಒಂದು ತಿಂಗಳೊಳಗೆ ಕಲಾವಿದರು ಹಾಗೂ ತಜ್ಞರ ಜೊತೆ ಸಮಾಲೋಚನೆ ನಡೆಸಿ ಯೋಜನೆ ರೂಪಿಸುವಂತೆ ನಿರ್ದೇಶಿಸಿದರು.
4.90 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ತುಳು ಭವನ ಕಾಮಗಾರಿಗೆ ಸರಕಾರ ಈಗಾಗಲೇ 4 ಕೋ.ರೂ. ಬಿಡುಗಡೆಗೊಳಿಸಿದೆ. ತಳ ಅಂತಸ್ತಿನ ಕಾಮಗಾರಿ ಈಗಾಗಲೇ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಅಕಾಡಮಿ ಕಚೇರಿಯನ್ನು ಸ್ಥಳಾಂತರಿಸಲಾಗುವುದು ಎಂದು ಅವರು ತಿಳಿಸಿದರು.
ತುಳುಭವನ ವಿಶಾಲವಾಗಿರುವುದರಿಂದ ತುಳು ಅಕಾಡಮಿಯ ಜೊತೆಯಲ್ಲೇ ಕೊಂಕಣಿ ಮತ್ತು ಬ್ಯಾರಿ ಸಾಹಿತ್ಯ ಅಕಾಡಮಿಗಳ ಚಟುವಟಿಕೆಗಳಿಗೂ ಅವಕಾಶ ನೀಡುವ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಸಲಹೆ ನೀಡಿದರು.
2012ರಂದು ಆರಂಭಗೊಂಡಿದ್ದ ತುಳು ಭವನ ಕಾಮಗಾರಿ ಆಗಸ್ಟ್ನಲ್ಲಿ ಪೂರ್ಣಗೊಳ್ಳಬೇಕಿದ್ದರೂ ವಿಳಂಬವಾಗಿರುವ ಬಗ್ಗೆ ಎಂಜಿನಿಯರ್ ಹಾಗೂ ಅಧಿಕಾರಿಗಳನ್ನು ವಿಚಾರಿಸಿದ ಜಿಲ್ಲಾಧಿಕಾರಿ, ಮುಂದಿನ ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು. ತುಳು ಅಕಾಡಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಮಾತನಾಡಿ, ಪ್ರಸ್ತುತ ಮನಪಾದಲ್ಲಿ ಕಾರ್ಯಾಚರಿಸುತ್ತಿರುವ ಅಕಾಡಮಿ ಕಚೇರಿಗೆ ಮಾಸಿಕ 30,000 ರೂ. ಬಾಡಿಗೆ ನೀಡಲಾಗುತ್ತಿದೆ. ಇದೀಗ ಸ್ವಂತ ಕಟ್ಟಡಕ್ಕೆ ಕಚೇರಿ ಸ್ಥಳಾಂತರದಿಂದ ಈಗ ಪಾವತಿಸಲಾಗುತ್ತಿರುವ ಬಾಡಿಗೆಯಿಂದ ಮುಕ್ತಿ ಪಡೆಯಬಹುದು ಎಂದರು.
ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಮಾತನಾಡಿ, ಕಟ್ಟಡ ಕಾಮಗಾರಿ ಹೊರತುಪಡಿಸಿ ರಂಗಮಂದಿರದ ಧ್ವನಿ ಬೆಳಕು, ಪೀಠೋಪಕರಣ, ಇಂಟೀರಿಯರ್ಸ್ ಸಹಿತ ಇತರೆ ಖರ್ಚುವೆಚ್ಚಕ್ಕೆ ಇನ್ನೂ ಒಂದು ಕೋಟಿ ರೂ. ಅಗತ್ಯವಿದೆ ಎಂದರು. ಅಕಾಡಮಿಯ ಸದಸ್ಯರಾದ ಜಯಶೀಲಾ, ಡಿ.ಎಂ.ಕುಲಾಲ್, ಎಂಜಿನಿಯರ್ಗಳಾದ ಹರೀಶ್ ಮತ್ತು ರಾಜೇಶ್ ಉಪಸ್ಥಿತರಿದ್ದರು.