ಮಂಗಳೂರು.ಫೆ.06 : ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿನ ಆವರಣದಲ್ಲಿ ಎರಡು ದಿನ ನಡೆಯಲಿರುವ ಅಂತರ್ ಕಾಲೇಜು ಸಂಗೀತ ಮತ್ತು ಯುವಜನೋತ್ಸವ ಕಾರ್ಯಕ್ರಮವನ್ನು ಗುರುವಾರ ಸಂಸದ ನಳಿನ್ ಕುಮಾರ್ ಕಟೀಲು ಅವರು ಉದ್ಘಾಟಿಸಿ ಶಿಕ್ಷಣ ಸಂಸ್ಥೆ ಎಂಬುವುದು ಒಂದು ಪವಿತ್ರ ಸ್ಥಳ. ಈ ಸ್ಥಳಗಳಲ್ಲಿ ಅಂತರ್ ಕಾಲೇಜು ವಿದ್ಯಾರ್ಥಿಗಳ ಸ್ಪರ್ಧೆಯ ಮೂಲಕ ಭಾರತೀಯ ಸಂಸ್ಕೃತಿ, ಕಲೆಗೆ ಪ್ರಾಶಸ್ತ್ಯ ನೀಡುವ ಕಾರ್ಯ ನಡೆಯಬೇಕು. ಈ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಅವಕಾಶ ಒದಗಿಸಬೇಕು ಎಂದು ಅವರು ಹೇಳಿದರು.
ಇಲ್ಲಿ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಬೆಳಕಿಗೆ ತರುವ ಕಾರ್ಯ ಕೂಡ ಅತ್ಯಂತ ಪ್ರಜ್ಞಾಪೂರ್ವಕವಾಗಿ ನಡೆಯಬೇಕು. ವಿದ್ಯಾರ್ಥಿ ಜೀವನ ಮುಗಿದ ಬಳಿಕ ನಾವು ಕಲಿತ ಸಂಸ್ಥೆಯನ್ನು ಮರೆಯದೆ ಹೊಸ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಅವರು ಹೇಳಿದರು.
ನಿವೃತ್ತ ಪ್ರಾಂಶುಪಾಲ ಡಾ| ಸತ್ಯನಾರಾಯಣ ಮಲ್ಲಿಪಟ್ಣ ಮಾತನಾಡಿ, ಹಳೆ ವಿದ್ಯಾರ್ಥಿ ಸಂಘ ಕೇವಲ ಕಾಲೇಜಿಗೆ ಮಾತ್ರ ಸೀಮಿತವಾಗದೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಸ್ಪರ್ಧೆ ಆಯೋಜಿಸುತ್ತಿರುವುದು ಪ್ರಥಮ ಎಂದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ| ಸುಂದರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ರಮೇಶ್ ಕುಮಾರ್, ಪೊಲೀಸ್ ನಿವೃತ್ತ ಅಧಿಧಿಕಾರಿ ದಾಮೋದರ್ ನಿಡ್ವಾಳ್ ಮುಖ್ಯ ಅತಿಥಿಯಾಗಿದ್ದರು.
ಕಬಡ್ಡಿ ಪಂದ್ಯಾಟವನ್ನು ಹಳೆ ವಿದ್ಯಾರ್ಥಿ ಭಾಸ್ಕರ ರೈ, ವಾಲಿಬಾಲ್ ಪಂದ್ಯಾಟವನ್ನು ಹಳೆ ವಿದ್ಯಾರ್ಥಿ ನಿವೃತ್ತ ಸೈನಿಕ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ತ್ರೋಬಾಲ್ ಪಂದ್ಯಾಟವನ್ನು ಪ್ರಾಂಶುಪಾಲ ಪ್ರೊ| ಸುನಂದ ಯು. ಉದ್ಘಾಟಿಸಿದರು.
ಪ್ರಧಾನ ಕಾರ್ಯದರ್ಶಿ ಬಿ. ಧರ್ಮಣ ನಾಯಕ್, ಖಜಾಂಚಿ ಶ್ರೀನಿವಾಸ ನಾೖಕ್, ಉಪಾಧ್ಯಕ್ಷ ಶುಭೋದಯ ಕೂಡ್ಲು, ವಿಶ್ವನಾಥ ಆರ್. ಪುತ್ರನ್, ಜತೆ ಕಾರ್ಯದರ್ಶಿಗಳಾದ ಆರ್. ಲೋಹಿದಾಸ್, ಬಿ. ಪ್ರಕಾಶ್ ಪೈ ಮೊದಲಾದವರು ಉಪಸ್ಥಿತರಿದ್ದರು.
ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.