ಕನ್ನಡ ವಾರ್ತೆಗಳು

ಆಟೊರಿಕ್ಷಾ ಕನಿಷ್ಠ ಪ್ರಯಾಣ ದರ 20ರೂ.ಗಳಿಗೆ ಇಳಿಕೆ ಮಾಡದಿದ್ದರೆ ಪ್ರತಿಭಟನೆ : ಫೋರಂ ಫೋರ್ ಜಸ್ಟಿಸ್ ಎಚ್ಚರಿಕೆ.

Pinterest LinkedIn Tumblr

auto_2150679g

ಮಂಗಳೂರು,ಫೆ.06  : ಪೆಟ್ರೋಲ್ ದರ ಈಗಾಗಲೇ ಕಡಿಮೆಯಾಗಿದ್ದು, ಸಾರಿಗೆ ಪ್ರಾಧಿಕಾರ ನಿರ್ಧರಿಸಿರುವಂತೆ ಆಟೊರಿಕ್ಷಾ ಕನಿಷ್ಠ ಪ್ರಯಾಣ ದರವನ್ನು 20ರೂ.ಗಳಿಗೆ ಇಳಿಕೆ ಮಾಡದಿದ್ದರೆ ಪ್ರತಿಭಟನೆ ನಡೆಸುತ್ತೇವೆ. ಮಾತ್ರವಲ್ಲ ಹೊಸ ಪರ್ಮಿಟ್ ನೀಡಿದರೆ ಕನಿಷ್ಠ ದರ 15ರೂಗೆ ರಿಕ್ಷಾ ಓಡಿಸಲು ವ್ಯವಸ್ಥೆ ಮಾಡುತ್ತೇವೆ ಎಂದು ಫೋರಂ ಫೋರ್ ಜಸ್ಟಿಸ್ ಸಂಘಟನೆ ಹೇಳಿದೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಕಾರ್ಯಾಧ್ಯಕ್ಷ ದಯಾನಾಥ ಕೋಟ್ಯಾನ್, ರಿಕ್ಷಾ ಸಂಘಟನೆಯವರು ಬೆಲೆ ಇಳಿಸದೆ, ಉದ್ಧಟತನ ಮುಂದುವರಿಸಿದರೆ ಜಿಲ್ಲಾಡಳಿತ ಪೊಲೀಸ್ ರಕ್ಷಣೆಯೊಂದಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಜನರಲ್ಲಿ ಕನಿಷ್ಠ 20ರೂ.ಮಾತ್ರ ನೀಡಿ ಎಂದು ಜನಜಾಗೃತಿ ಮೂಡಿಸುವ ಹಾಗೂ ಜಿಲ್ಲಾಧಿಕಾರಿಗಳ ಕ್ರಮವನ್ನು ಸಮರ್ಥಿಸಿ ಎಸ್‌ಎಂಎಸ್ ಚಳವಳಿ ಆರಂಭಿಸಿದ್ದೇವೆ ಎಂದರು.

ಹೊಸ ಪರ್ಮಿಟ್‌ಗಳಿಗೆ ಅವಕಾಶ ನೀಡುವ ಮೂಲಕ 15 ರೂ.ಗಳಿಗೆ ರಿಕ್ಷಾ ಓಡಿಸಲು ಸಿದ್ಧವಿರುವ ಬಡಪಾಯಿಗಳಿಗೆ ಅವಕಾಶ ಮಾಡಿಕೊಡಬೇಕು. 15 ರೂ.ಗಳಲ್ಲಿ ರಿಕ್ಷಾ ಓಡಿಸಲು ಈಗಾಗಲೇ ಹಲವಾರು ಮಂದಿ ಮುಂದೆ ಬಂದಿದ್ದಾರೆ ಎಂದು ಅವರು ಹೇಳಿದರು.

ಕಳೆದ ಕೆಲವು ತಿಂಗಳುಗಳಲ್ಲಿ ಎಲ್ಲ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಲೀಟರ್‌ಗೆ ಸುಮಾರು 16 ರೂ.ಗಳಷ್ಟು ಇಳಿದಿದೆ. ಅಲ್ಲದೆ ಇದೀಗ ಮತ್ತೆ 2.42 ರೂ.ಗಳಷ್ಟು ಕಡಿಮೆಯಾಗಿದೆ. ಪೆಟ್ರೋಲ್ ಮತ್ತು ಗ್ಯಾಸ್ ಬೆಲೆಯಲ್ಲಿ ಭಾರಿ ಕಡಿತವಾದರೂ ಅಟೊ ರಿಕ್ಷಾ ಪ್ರಯಾಣದರ ಇಳಿಸಲು ನಿರಾಕರಿಸುತ್ತಿರುವ ರಿಕ್ಷಾ ಚಾಲಕರ ಮತ್ತು ಮಾಲೀಕರ ವಿರುದ್ಧ ಸರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ನಿರ್ಧರಿಸಿದ ಕನಿಷ್ಠ ಪ್ರಯಾಣದರವನ್ನು ಜಾರಿಗೊಳಿಸಲು ಜಿಲ್ಲಾಡಳಿತಕ್ಕೆ ಬೆಂಬಲ ನೀಡುವ ಬದಲು ರಿಕ್ಷಾ ಸಂಘಟನೆಗಳ ಬೆಂಬಲಕ್ಕೆ ನಿಂತಿರುವುದು ಹಾಸ್ಯಾಸ್ಪದ ಎಂದು ಅವರು, ಜಿಲ್ಲೆಯ ಪ್ರಮುಖ ರಾಜಕೀಯ ನಾಯಕರು ಇದು ತಮಗೆ ಸಂಬಂಧಿಸಿದ ವಿಷಯವಲ್ಲ ಎಂಬ ಧೋರಣೆಯನ್ನು ತಳೆದಿದ್ದಾರೆ. ಮುಂದಿನ ಒಂದು ವಾರದೊಳಗಾಗಿ ಕನಿಷ್ಠ ದರ 20 ರೂ.ಗಳಿಗೆ ರಿಕ್ಷಾ ಚಾಲಕರು ಸಮ್ಮತಿ ಸೂಚಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯ ಶಾಸಕರ ಮನೆ ಮುಂದೆಯೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಅಸಮರ್ಪಕ ಘನತ್ಯಾಜ್ಯ ವಿಲೇವಾರಿ: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ವರ್ಷಕ್ಕೆ 17 ಕೋಟಿ ರೂ. ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಗುತ್ತಿಗೆಯನ್ನು ನೀಡಲಾಗಿದೆ. ಇದಕ್ಕೆಲ್ಲ ಪರಿಹಾರ ಕಾಣಬೇಕಾದರೆ ತಕ್ಷಣ ವಾರ್ಡ್ ಸಮಿತಿ ರಚಿಸಬೇಕು ಎಂದು ದಯಾನಾಥ ಕೋಟ್ಯಾನ್ ಹೇಳಿದರು.

ತ್ಯಾಜ್ಯ ವಿಲೇವಾರಿ, ರಸ್ತೆ ಕಾಮಗಾರಿ ಮುಂತಾದ ಕೆಲಸಗಳ ಸಮರ್ಪಕ ಮೇಲುಸ್ತುವಾರಿಗಾಗಿ ಎಲ್ಲ ವಾರ್ಡ್‌ಗಳಲ್ಲಿ ತತ್‌ಕ್ಷಣ ವಾರ್ಡ್ ಸಮಿತಿ ರಚನೆಯಾಗಬೇಕು ಎಂದು ಅವರು ಆಗ್ರಹಿಸಿದರು.

ಸಂಘಟನೆಯ ಉಪಾಧ್ಯಕ್ಷ ವಾಸುದೇವ ಬೋಳೂರು, ಕೋಶಾಧಿಕಾರಿ ಬಿ. ಆರ್. ಸದಾಶಿವ ಉಪಸ್ಥಿತರಿದ್ದರು.

Write A Comment