ಮಂಗಳೂರು,ಫೆ.03 : ರೈತರು ಗೇರು ಬೆಳೆಯೊಂದಿಗೆ ಮಿಶ್ರ ಬೆಳೆಗಳಾದ ಪಪ್ಪಾಯ, ಮಾವು, ಹಲಸು,ಸೀಬೆ,ಕೊಕ್ಕೋ,ಇತರೆ ಹಣ್ಣಿನ ಬೆಳೆಗಳನ್ನು ಬೆಳೆದಲ್ಲಿ ನಿರಂತರ ಆಧಾಯಗಳಿಸಬಹುದೆಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಸಿ.ವಾಸುದೇವಪ್ಪ ಅವರು ರೈತರಿಗೆ ಸಲಹೆ ನೀಡಿದ್ದಾರೆ.
ಅವರು ಮಂಗಳವಾರ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಉಳ್ಳಾಲ ಮಂಗಳೂರು ಹಾಗೂ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಉಳ್ಳಾಲ ಕೃಷಿ ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಿದ್ದ “ಗೇರು ಕೃಷಿ ಮೇಳ-2015” ಉದ್ಘಾಟಿಸಿ ಮಾತನಾಡಿದರು.
ಹನಿ ನೀರಾವರಿ ಪದ್ದತಿಯಿಂದ ರೈತರು ಗೇರು ಕೃಷಿಯಲ್ಲಿ ದ್ವಿಗುಣ ಇಳುವರಿಯನ್ನು ಪಡೆಯಬಹುದೆಂದು, ತಿಳಿಸಿ ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಯುವಕರ ಪಡೆಯನ್ನು ಕಟ್ಟಿ ಇಲ್ಲಿರುವ ಬರಡು ಭೂಮಿಯನ್ನು ಫಲವತ್ತ ಭೂಮಿಯಾಗಿ ಪರಿವರ್ತಿಸುವ ಯೋಜನೆಯೊಂದನ್ನು ಮುಂದಿನ ದಿನಗಳಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ. ಪಿ. ನಾರಾಯಣಸ್ವಾಮಿ ವಹಿಸಿದ್ದರು. ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ಕುಂಪಲ, ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷರಾದ ಎಸ್ ಡಿ. ಸಂಪತ್ ಸಾಮ್ರಾಜ್ಯ, ಉಳ್ಳಾಲ ಪುರಸಭೆ ಅಧ್ಯಕ್ಷರಾದ ಗಿರಿಜಾ ಬಾಯಿ,ಕೃಷಿ ಜಂಟಿ ನಿರ್ದೇಶಕರಾದ ಡಾ|| ಹೆಚ್.ಕೆಂಪೇಗೌಡ, ತೋಟಗಾರಿಕೆ ಇಲಾಖೆ, ಉಪನಿರ್ದೇಶಕರಾದ ಯೋಗೇಶ್ ಮುಂತಾದವರು ಭಾಗವಹಿಸಿದ್ದರು.