ಕನ್ನಡ ವಾರ್ತೆಗಳು

ಆಮ್ ಆದ್ಮಿ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಗೆ ದಿಲ್ಲಿ ಹೈಕೋರ್ಟ್ ನೋಟಿಸ್.

Pinterest LinkedIn Tumblr

aravina_krjiwala_photo

ಹೊಸದಿಲ್ಲಿ,ಫೆ.03 : ನಾಮಪತ್ರದಲ್ಲಿ ಸುಳ್ಳು ವಿಳಾಸ ದಾಖಲಿಸಿರುವ ಆರೋಪದ ಮೇಲೆ ಆಮ್ ಆದ್ಮಿ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಅವರಿಗೆ ದಿಲ್ಲಿ ಹೈಕೋರ್ಟ್ ನೋಟಿಸ್ ಕೊಟ್ಟಿದೆ. ಕೇಜ್ರಿವಾಲ್ ಅವರು ಉತ್ತರಪ್ರದೇಶ ನಿವಾಸಿಯಾಗಿದ್ದರೂ, ದಿಲ್ಲಿಯ ಬಿ ಕೆ ಕಾಲನಿ ನಿವಾಸಿ ಎಂದು ಸುಳ್ಳು ಪ್ರಮಾಣ ಪತ್ರ ಕೊಟ್ಟಿದ್ದಾರೆ. ಆದರೆ ಇದಕ್ಕೆ ಸಾಕ್ಷ್ಯ ಕೊಟ್ಟಿಲ್ಲ ಎಂದು ಕೇಜ್ರಿವಾಲ್ ಪ್ರತಿಸ್ಪರ್ಧಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕಿರಣ್ ವಾಲಿಯಾ ದೂರು ದಾಖಲಿಸಿದ್ದರು. ಫೆ.4ರಂದು ಪ್ರಕರಣ ವಿಚಾರಣೆಗೆ ಬರಲಿದೆ.

ಹಾಗೆಯೇ, ಬಿಜೆಪಿ, ಕಾಂಗ್ರೆಸ್‌ನಿಂದ ಮತದಾರರು ಹಣ ಪಡೆದುಕೊಂಡು ಆಪ್‌ಗೇ ಮತ ಹಾಕಿ ಎಂದಿದ್ದ ಕೇಜ್ರಿವಾಲ್ ವಿರುದ್ಧ ದಿಲ್ಲಿಯ ಕೋರ್ಟ್‌ವೊಂದರಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ವಿಚಾರಣೆ ಮಂಗಳವಾರ ನಡೆಯಲಿದೆ.

ನಾಲ್ಕು ಬೇನಾಮಿ ಕಂಪನಿಗಳಿಂದ ಆಪ್ ಅಕ್ರಮವಾಗಿ 2 ಕೋಟಿ ರೂ. ಹಣ ಸಂಗ್ರಹಿಸಿದೆ ಎಂದು ಪಕ್ಷದಿಂದ ಇತ್ತೀಚೆಗಷ್ಟೇ ವಿಭಜನೆಗೊಂಡಿದ್ದ ‘ಆವಾಮ್’ ಎನ್ನುವ ಸ್ವಯಂಸೇವಕರ ಗುಂಪು ಸೋಮವಾರ ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಆಪ್, ”ನಾವು ಏನನ್ನೂ ಮುಚ್ಚಿಟ್ಟಿಲ್ಲ, ಎಲ್ಲ ತನಿಖೆಗೂ ಪಕ್ಷ ಸಿದ್ಧ,” ಎಂದಿದೆ.

ಈ ಮಧ್ಯೆ, ಕಳೆದ ವರ್ಷದ ಗಣರಾಜ್ಯೋತ್ಸವದ ವೇಳೆ ಕೇಜ್ರಿವಾಲ್ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಜಾಹಿರಾತಿನಲ್ಲಿ ಕೇಜ್ರಿವಾಲ್ ಗೋತ್ರವೇ ‘ಉಪದ್ರವಿ’ ಎಂದು ಬಿಜೆಪಿ ಹೀಗಳೆದಿದೆ. ಇದರ ವಿರುದ್ಧ ಆಪ್, ಚುನಾವಣೆ ಆಯೋಗಕ್ಕೆ ದೂರು ಕೊಟ್ಟಿದೆ. ಆದರೆ, ರಾಜಕೀಯ ಹೇಳಿಕೆಯನ್ನು ಜಾತಿ ನಿಂದೆ ಎಂದು ಆರೋಪಿಸಿ ಆ ಜಾತಿಯ ಮತಗಳನ್ನು ಬುಟ್ಟಿಗೆ ಬೀಳಿಸಿಕೊಳ್ಳಲು ಆಪ್ ಯತ್ನಿಸುತ್ತಿದೆ ಎಂದು ಬಿಜೆಪಿ ಪ್ರತಿ ದೂರು ಕೊಟ್ಟಿದೆ.

ರಾಜೀನಾಮೆ ಪ್ರಹಸನ: ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಅವರ ಚುನಾವಣೆಗಳ ಕಾರ್ಯಕ್ರಮಗಳ ನಿರ್ವಾಹಕ ನರೇಂದ್ರ ಟಂಡನ್ ರಾಜೀನಾಮೆ ನೀಡಿ, ಬಳಿಕ ವಾಪಸ್ ಪಡೆದಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ ಟಂಡನ್, ಬೇಡಿ ಅವರದು ಸರ್ವಾಧಿಕಾರಿ ಮನಸ್ಥಿತಿ ಎಂದು ದೂರಿದ್ದರು. ಇದಕ್ಕೆ ಬೇಡಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Write A Comment