ಉಳ್ಳಾಲ, ಫೆ.3: ವಿಷಾಹಾರ ಸೇವನೆಯಿಂದ ದೇರಳಕಟ್ಟೆ ಅಲ್ಪಸಂಖ್ಯಾತರ ಬಾಲಕಿಯರ ಮೊರಾರ್ಜಿ ವಸತಿ ಶಾಲೆಯ 22 ವಿದ್ಯಾರ್ಥಿನಿಯರು ಅಸ್ವಸ್ಥರಾದ ಘಟನೆ ಸೋಮವಾರ ಮಧ್ಯಾಹ್ನ ವೇಳೆ ನಡೆದಿದೆ. ಈ ಸಂಬಂಧ ವಸತಿ ಶಾಲೆಯ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ಐವರನ್ನು ವಜಾಗೊಳಿಸಲಾಗಿದೆ.
ವಿದ್ಯಾರ್ಥಿನಿಯರಾದ ಅಜ್ಮಿಯಾ, ನಫೀಯತ್, ಫಾಯಿಝಾ, ಶಹನಾಝ್, ಕುಬ್ರಾ, ಅಲ್ಫಿಯಾ, ಆಮಿನಾ, ಆಸಿಫಾ, ಆರಿಫಾ, ಕಾವ್ಯಾ, ಅಫ್ರೀನಾ, ಅಕ್ಷಿತಾ, ತಾಹಿರಾ, ಶಹನಾಝ್, ರಕ್ಷಾ, ನಿಶ್ಮಿತಾ ಕೆ., ತಾಹಿರಾ, ರಂಸೀನಾ, ಹರ್ಷಿಣಿ, ಭವೀನಾ, ಆಯಿಶಾ ಅಸ್ವಸ್ಥಗೊಂಡಿದ್ದರು. ಇವರೆಲ್ಲರನ್ನೂ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ.
ಮಧ್ಯಾಹ್ನದ ಊಟ ಸೇವಿಸಿದ ವಿದ್ಯಾರ್ಥಿನಿಯರ ಪೈಕಿ ಮೊದಲು 10 ಮಂದಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಸ್ವಲ್ಪ ಹೊತ್ತಿನಲ್ಲಿ ಅವರು ವಾಂತಿ ಕೂಡಾ ಮಾಡಲಾರಂಭಿಸಿದರು. ಇದರ ಬೆನ್ನಿಗೆ ಇನ್ನಷ್ಟು ವಿದ್ಯಾರ್ಥಿಗಳು ಅಸ್ವಸ್ಥ್ಥರಾದರೆನ್ನಲಾಗಿದೆ. ಕೂಡಲೇ ಶಿಕ್ಷಕಿಯರು ಅಲ್ಪಸಂಖ್ಯಾತ ಇಲಾ ಖಾಧಿಕಾರಿಯವರಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳ ನಿರ್ದೇಶನ ದಂತೆ ಸ್ಥಳಕ್ಕೆ ಯೆನೆಪೊಯ ಆಸ್ಪತ್ರೆಯ ವೈದ್ಯರು ಭೇಟಿ ನೀಡಿ ವಿದ್ಯಾರ್ಥಿಗಳನ್ನು ಪರೀಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ವಿಷಾಹಾರ ಸೇವನೆಯಿಂದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ವಾರ್ಡನ್ ಬದಲಾವಣೆ, ಅಡುಗೆಯವರು ವಜಾ : ‘‘ಅಡುಗೆಯವರ ಕಾರ್ಯನಿರ್ವಣೆಯ ಬಗ್ಗೆ ವಸತಿ ನಿಲಯ ವಿದ್ಯಾರ್ಥಿನಿಯರು ಈ ಹಿಂದೆಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೇಳೆ ಅಡುಗೆಯವರಿಗೆ ಎಚ್ಚರಿಕೆ ನೀಡಲಾಗಿತ್ತು. ಇದರ ಹೊರತಾಗಿಯೂ ಬಗ್ಗೆ ಅಡುಗೆಯ ವರಲ್ಲಿ ಯಾವುದೇ ಬದಲಾವಣೆ ಆಗದಿರುವ ಬಗ್ಗೆ ದೂರುಗಳು ಬಂದಿದ್ದವು. ಇಂದು ಮತ್ತೆ ವಿದ್ಯಾರ್ಥಿನಿಯರು ಅವರ ಬಗ್ಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐವರು ಅಡುಗೆಯವರನ್ನು ವಜಾಗೊಳಿಸಲಾಗಿದೆ. ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ವಿದ್ಯಾರ್ಥಿನಿಯರು ವಾರ್ಡನ್ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವುದರಿಂದ ಅವರನ್ನೂ ಬದಲಿಸಿ ಬೇರೆಯವರನ್ನು ನೇಮಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಸಾಬೀರ್ ಅಹ್ಮದ್ ಮುಲ್ಲಾ ತಿಳಿಸಿದ್ದಾರೆ.
ಖಾದರ್ ನಿರ್ದೇಶನ:
ವಿದ್ಯಾರ್ಥಿನಿಯರು ವಿಷ ಆಹಾರ ಸೇವನೆಯಿಂದ ಅಸ್ವಸ್ಥರಾದ ವಿಷಯ ತಿಳಿದ ಸಚಿವ ಯು.ಟಿ.ಖಾದರ್ ಬೆಂಗಳೂರಿನಿಂದ ದ.ಕ. ಜಿಲ್ಲಾ ಆರೋಗ್ಯಾ ಧಿಕಾರಿಗೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಘಟನಾ ಸ್ಥಳಕ್ಕೆ ಹೋಗಿ ಪರಿಶೀಲಿಸುವಂತೆ ನಿರ್ದೇಶನ ನೀಡಿದ್ದಾರೆ.