ಮಂಗಳೂರು, ಜ.29: ರಿಕ್ಷಾ ದರ ಇಳಿಕೆಯನ್ನು ವಿರೋಧಿಸಿ ನಗರದಲ್ಲಿ ನಾನಾ ರಿಕ್ಷಾ ಸಂಘಟನೆಗಳ ನೇತೃತ್ವದಲ್ಲಿ ರಿಕ್ಷಾ ಚಾಲಕರು ರಿಕ್ಷಾ ಪ್ರಯಾಣವನ್ನು ಸ್ಥಗಿತಗೊಳಿಸಿ ಬಂದ್ ಆಚರಿಸಿದರು. ಸಿಐಟಿಯು ನೇತೃತ್ವದ ರಿಕ್ಷಾ ಚಾಲಕರ ಸಂಘಟನೆ ಮತ್ತು ರಿಕ್ಷಾ ಚಾಲಕರ ಹೋರಾಟ ಸಮಿತಿಯು ಜ.27ರ ಮಧ್ಯೆ ರಾತ್ರಿಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದರೆ, ಮಂಗಳೂರು ತಾಲೂಕು ಆಟೊ ರಿಕ್ಷಾ ಚಾಲಕರ ಸಂಘ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿತ್ತು. ಸಿಐಟಿಯು ರಿಕ್ಷಾ ಚಾಲಕರ ಸಂಘದ ಅನ್ಸಾರ್ ಮಾತನಾಡಿ, ರಿಕ್ಷಾ ಪ್ರಯಾಣ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದಿದ್ದಾರೆ.
ಸಾರ್ವಜನಿಕರ ಸ್ಪಂದನೆ ಅಗತ್ಯ: ಜಿಲ್ಲಾಧಿಕಾರಿ
ಇಂಧನ ದರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಆಟೊ ಪ್ರಯಾಣ ದರವನ್ನು ಜಿಲ್ಲಾಡಳಿತ ಇಳಿಕೆ ಮಾಡಿದ್ದು, ಸಾರ್ವಜನಿಕರ ಸ್ಪಂದನೆ ಅಗತ್ಯವಾಗಿದೆ. ಆಟೊ ರಿಕ್ಷಾ ಚಾಲಕರು ಪ್ರಯಾಣ ದರ ಇಳಿಕೆ ಮಾಡದ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದ್ದಾರೆ. ಈವರೆಗೆ ಸಾರ್ವಜನಿಕರು ಆಟೊ ಪ್ರಯಾಣ ದರ ಇಳಿಕೆ ಮಾಡಿಲ್ಲ ಎಂಬುದಾಗಿ ಹೇಳುತ್ತಿದ್ದಾರೆಯೇ ಹೊರತು ಅಧಿಕೃತವಾಗಿ ದೂರು ನೀಡದ ಕಾರಣ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದವರು ಹೇಳಿದ್ದಾರೆ.
ಎಲ್ಪಿಜಿ ದರದಲ್ಲಿ ಶೇ.50ರಷ್ಟು ಕಡಿಮೆಯಾಗಿದ್ದು, ಆಟೊ ಪ್ರಯಾಣ ದರದಲ್ಲಿ ಕೇವಲ ಶೇ.20 ಹಾಗೂ ಕಿ.ಮೀ.ನಲ್ಲಿ ಕೇವಲ ಶೇ.7ರಷ್ಟು ಮಾತ್ರ ಕಡಿಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈಗಾಗಲೇ ರಿಕ್ಷಾ ಚಾಲಕರ ಸಂಘದೊಂದಿಗೆ ಚರ್ಚೆ ನಡೆಸಲಾಗಿದ್ದು, ಒಂದೇ ಮಾತೃ ಸಂಘಟನೆಯ ಎರಡು ಸಂಘಗಳು ದ್ವಂದ್ವ ನೀತಿ ಅನುಸರಿಸುತ್ತಿವೆ. ಒಂದು ಸಂಘಟನೆ ದರ ಇಳಿಕೆಗೆ ಪ್ರೋತ್ಸಾಹಿಸಿದರೆ, ಇನ್ನೊಂದು ಸಂಘಟನೆ ರಿಕ್ಷಾ ಚಾಲಕರ ಪರವಾಗಿ ಧ್ವನಿ ಎತ್ತುತ್ತಿದೆ ಎಂದವರು ಹೇಳಿದರು.