ಮಂಗಳೂರು, ಜ.26: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಡಿಸಿಪಿ ವಿಷ್ಣುವರ್ಧನ್ ಅಧ್ಯಕ್ಷತೆಯಲ್ಲಿ ರವಿವಾರ ಜರಗಿದ ಮಾಸಿಕ ಎಸ್ಸಿ-ಎಸ್ಟಿ ಸಭೆಯಲ್ಲಿ ಆಯುಕ್ತಾಲಯ ವ್ಯಾಪ್ತಿಯ ದಲಿತ ಸಮುದಾಯದವರು ತಮ್ಮ ಅಹವಾಲುಗಳನ್ನು ತೋಡಿಕೊಂಡರು.
ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಯುವತಿಯೊಬ್ಬಳ ಮೇಲೆ ಅಲ್ಲಿನ ವೈದ್ಯರೊಬ್ಬರು ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಜರಗಿಸಿಲ್ಲ ಎಂದು ದಲಿತ ಮುಖಂಡ ನಾರಾಯಣ ಪುಂಚಮೆ ಅಸಮಾಧಾನ ವ್ಯಕ್ತಪಡಿಸಿದರು.ಇದಕ್ಕೆ ಉತ್ತರಿಸಿದ ಸಹಾಯಕ ಆಯುಕ್ತ ತಿಲಕಚಂದ್ರ ‘ಜ.11ರಂದು ಈ ಘಟನೆ ನಡೆದಿದೆ ಎಂದು ಯುವತಿ ಜ.23ಕ್ಕೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಲಾಗಿದ್ದು, ತನಿಖೆ ನಡೆಸಿ ಕ್ರಮ ಜರಗಿಸಲಾಗುವುದು’ ಎಂದರು.
ತನ್ನ ಮನೆಯ ನೀರಿನ ಟ್ಯಾಂಕ್ಗೆ ಮಾಂಸದ ತ್ಯಾಜ್ಯ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಕಳೆದೊಂದು ವರ್ಷದಿಂದ ಮೇಲಿಂದ ಮೇಲೆ ಮನವಿ ಸಲ್ಲಿಸುತ್ತಾ ಬಂದ ಕೊಣಾಜೆಯ ಸುಮಿತ್ರಾ ರವಿವಾರ ನಡೆದ ಸಭೆಯಲ್ಲೂ ವಿಷಯ ಪ್ರಸ್ತಾಪಿಸಿ ವಸ್ತುಶ: ಅತ್ತು ಬಿಟ್ಟರು. ತಾವು ಇನ್ನೊಮ್ಮೆ ಲಿಖಿತ ದೂರು ನೀಡಿದರೆ ಸೂಕ್ತ ಕ್ರಮ ಜರಗಿಸುವೆ ಎಂದು ಡಿಸಿಪಿ ವಿಷ್ಣುವರ್ಧನ್ ಮಾಡಿದ ಮನವಿಗೆ ಸ್ಪಂದಿಸಿದ ಸುಮಿತ್ರಾ ಕೊನೆಗೂ ಲಿಖಿತ ಮನವಿ ಸಲ್ಲಿಸಿದರು.
ಸರಕಾರಿ ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಯಲ್ಲಿ ರೋಗಿಗಳು ಮೃತಪಟ್ಟ ತಕ್ಷಣ ವಾರಸುದಾರರಿಗೆ ಕಾಲಾವಕಾಶ ಕೊಡದೆ ಮೃತದೇಹಗಳನ್ನು ಶವಾಗಾರದಲ್ಲಿಡಲಾಗುತ್ತದೆ. ಆ ಬಳಿಕ ಅಲ್ಲಿಂದ ಶವವನ್ನು ತೆಗೆದುಕೊಂಡು ಹೋಗಲು ತುಂಬಾ ಪ್ರಯಾಸ ಪಡಬೇಕಾಗುತ್ತದೆ. ಅನಕ್ಷರಸ್ಥರಿಗೆ ಇದರಿಂದ ತುಂಬಾ ತೊಂದರೆಯಾಗುತ್ತಿದ್ದು, ಈ ಬಗ್ಗೆ ಕ್ರಮ ಜರಗಿಸಬೇಕು ಎಂದು ಶಿವಪ್ಪ ಅಟ್ಟೋಳೆ ಒತ್ತಾಯಿಸಿದರು. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಮಾಸಿಕ ಎಸ್ಸಿ-ಎಸ್ಟಿ ಸಭೆ ಸಮಯಕ್ಕೆ ಸರಿಯಾಗಿ ನಡೆಯುತ್ತಿಲ್ಲ. ನಡೆದರೂ ಆ ಸಭೆಯನ್ನು ದಲಿತೇತರರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಕೇಶ್ ಆರೋಪಿಸಿದರು. ಆದರೆ ಈ ಆರೋಪವನ್ನು ಗ್ರಾಮಾಂತರ ಠಾಣಾ ನಿರೀಕ್ಷಕರು ನಿರಾಕರಿಸಿದರು.
ಈ ಎಲ್ಲಾ ಮನವಿಗಳನ್ನು ಆಲಿಸಿದ ಡಿಸಿಪಿ ವಿಷ್ಣುವರ್ಧನ್ ಸೂಕ್ತ ಕ್ರಮ ಜರಗಿಸುವ ಭರವಸೆ ನೀಡಿದರು.