ಮಂಗಳೂರು,ಜ.24 : ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ಮತ್ತು ಪಣಂಬೂರು ಮಧ್ಯೆ ನಿತ್ಯ ವಾಹನ ದಟ್ಟಣೆಯಿಂದಾಗಿ ಸಾರ್ವಜನಿಕರ ದೈನಂದಿನ ಜೀವನಕ್ಕೆ ತೊಂದರೆಯುಂಟಾ ಗುತ್ತಿದ್ದುದನ್ನು ಮನಗಂಡು ಸಮಸ್ಯೆಗೆ ಕಾರಣವಾಗಿರುವ ನವಮಂಗಳೂರು ಬಂದರು ಸರಕು ಸಾಗಣೆಯ ಘನ ವಾಹನಗಳ ಅಡ್ಡಾದಿಡ್ಡಿ ಚಾಲನೆಗಳನ್ನು ನಿಯಂತ್ರಿಸಲು ಆದ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ನವಮಂಗಳೂರು ಬಂದರು ಮಂಡಳಿಯ ಆಡಳಿತಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಸೂಚಿಸಿದರು.
ಅವರು ಸ್ಥಳೀಯರ ದೂರಿನ ಮೇರೆಗೆ ನವಮಂಗಳೂರು ಬಂದರಿಗೆ ಭೇಟಿ ನೀಡಿ ನವಮಂಗಳೂರು ಬಂದರಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.ಬಂದರಿನ ಒಳಗಡೆ ಪ್ರಸ್ತುತ ಇರುವ ವೇ ಬ್ರಿಡ್ಜ್ ನಿಸ್ತೇಜಗೊಂಡಿದ್ದು ಘನ ವಾಹನಗಳು ಬೈಕಂಪಾಡಿ ಪ್ರದೇಶಕ್ಕೆ ಬರುವುದರಿಂದ ರಾ.ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತದೆ ಎಂದೂ, ಬಂದರಿನ ಒಳಗಡೆ ಇರುವ 2 ವೇ ಬಿಡ್ಜ್ಗಳನ್ನು ಮಾರ್ಚ್ ಅಂತ್ಯದೊಳಗಾಗಿ ನವೀಕರಣಗೊಳಿಸುವುದಾಗಿಯೂ ಉತ್ತರಿಸಿದ ನವಮಂಗಳೂರು ಬಂದರು ಮಂಡಳಿಯ ಅಧ್ಯಕ್ಷ ಸಿ.ಸಿ ಫರಿದಾ, ನವ ಮಂಗಳೂರು ಬಂದರಿನ ಆಡಳಿತ ಕಚೇರಿಯ ಬಳಿ ರಾ.ಹೆದ್ದಾರಿಗೆ ಮೇಲ್ಸೇತುವೆ ನಿರ್ಮಾ ಣಕ್ಕೆ ನಿಧಿ ನೀಡಲು ಬದ್ದ ಎಂದರು.