ಬಂಟ್ವಾಳ, ಜ.22: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಉಳ್ಳಾಲ ಇದರ ನೇತೃತ್ವದಲ್ಲಿ ಎರಡು ದಿನಗಳ “ವೀರರಾಣಿ ಅಬ್ಬಕ್ಕ ಉತ್ಸವ-2015” ಜನವರಿ 24 ಮತ್ತು 25 ರಂದು ಬಂಟ್ವಾಳ ತಾಲೂಕಿನ ತುಂಬೆ ಬಿ.ಎ.ಪದವಿ ಪೂರ್ವ ಕಾಲೇಜು ಮೈದಾನದ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ನಡೆಯಲಿದೆ ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು.
ಬುಧವಾರ ರಾತ್ರಿ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಶನಿವಾರ ಅಪರಾಹ್ನ 2 ಗಂಟೆಗೆ ಜಾನಪದ ದಿಬ್ಬಣದೊಂದಿಗೆ ವೀರರಾಣಿ ಅಬ್ಬಕ್ಕ ಉತ್ಸವಕ್ಕೆ ಚಾಲನೆ ದೊರಕಲಿದ್ದು, ಜಿಪಂ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ ಮೆರವಣಿಗೆ ಉದ್ಘಾಟಿಸುವರು. ಆರೋಗ್ಯ ಸಚಿವ ಯು.ಟಿ.ಖಾದರ್ ಅಬ್ಬಕ್ಕ ಧ್ವಜಾರೋಹಣ ನೆರವೇರಿಸುವರು ಎಂದರು.
ಸಂಜೆ 5 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕ ಚಲನಚಿತ್ರ ಮಂಡಳಿಯ ನಿಕಟಪೂರ್ವ ಅಧ್ಯಕ್ಷೆ, ವಿಧಾನ ಪರಿಷತ್ ಸದಸೈ ಡಾ.ಜಯಮಾಲಾ “2015ರ ವೀರರಾಣಿ ಅಬ್ಬಕ್ಕ ಉತ್ಸವ” ವನ್ನು ವಿಧ್ಯುಕ್ತವಾಗಿ ಉದ್ಘಾಟಿಸಲಿರುವರು. ಮಾಜಿ ಮುಖ್ಯಮಂತ್ರಿ, ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಲೇಖಕಿ ಡಾ.ಸಂಧ್ಯಾ ರೆಡ್ಡಿ ವಿವಿಧ ಗೋಷ್ಠಿಗಳನ್ನು ಉದ್ಘಾಟಿಸುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಎಂ.ಬ್ರಹ್ಮಾವರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿರುವರು ಎಂದು ತಿಳಿಸಿದರು.
ವಿಚಾರಗೋಷ್ಠಿ: ಉತ್ಸವದ ಎರಡನೆ ದಿನವಾದ ರವಿವಾರ ವಿವಿಧ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಬೆಳಗ್ಗೆ 10:30ರಿಂದ ನಡೆಯುವ ಮಹಿಳಾ ಸಬಲೀಕರಣ ವಿಷಯದ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಉಡುಪಿ ಶ್ರೀ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ.ಮಾಧವಿ ಎಸ್.ಭಂಡಾರಿ ವಹಿಸುವರು.
ಬೆಂಗಳೂರಿನ ಡಾ.ಎಂ.ಎಸ್.ಆಶಾದೇವಿ ‘ಸಾಹಿತ್ಯಿಕ ಸಬಲೀಕರಣ’, ಮಂಗಳೂರಿನ ಡಾ.ಎ.ಶಶಿಕಲಾ ‘ಶೈಕ್ಷಣಿಕ ಸಬಲೀಕರಣ’ ಹಾಗೂ ಜ್ಯೋತಿ ಚೇಳ್ಯಾರು ‘ಸಾಮಾ ಜಿಕ ಸಬಲೀಕರಣ’ದ ಕುರಿತಾಗಿ ಉಪನ್ಯಾಸ ನೀಡುವರು. ಸುಧಾರಾಣಿ ಮೂಡಬಿದಿರೆ, ಮುಮ್ತಾಝ್ ಬೇಗಂ ಕಾಪು ಹಾಗೂ ಕು.ರೇಖಾ ಪ್ರತಿಕ್ರಿಯೆ ನೀಡುವರು.ಸಂಜೆ 4ರಿಂದ ಸವಿತಾ ನಾಗಭೂಷಣ ಶಿವಮೊಗ್ಗ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಬಹುಭಾಷಾ ಕವಿಗೋಷ್ಠಿಯಲ್ಲಿ ವಿವಿಧ ಭಾಷೆಗಳ ಕವಿಗಳು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಸಮಾರೋಪ:
ರವಿವಾರ ಸಂಜೆ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಹಿತಿ – ಸಂಶೋಧಕಿ ಡಾ.ಇಂದಿರಾ ಹೆಗ್ಡೆಯವರಿಗೆ “ವೀರರಾಣಿ ಅಬ್ಬಕ್ಕ ಪ್ರಶಸ್ತಿ” ಹಾಗೂ ರಂಗನಟಿ ವಿನ್ನಿ ಫೆರ್ನಾಂಡೀಸ್ ಅವರಿಗೆ “ರಾಣಿ ಅಬ್ಬಕ್ಕ ಪುರಸ್ಕಾರ” ಪ್ರದಾನ ಮಾಡುವರು. ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ “ರಾಣಿ ಅಬ್ಬಕ್ಕ ಸ್ವಾಭಿಮಾನ ಸಂದೇಶ” ನೀಡುವರು. ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಸಮಾರೋಪ ಭಾಷಣ ಮಾಡಲಿರುವರು.
ಸಚಿವರಾದ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಕೆ.ಅಭಯಚಂದ್ರ ಜೈನ್ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಖಾದರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಜಯರಾಮ ಶೆಟ್ಟಿ, ಕಾರ್ಯಾಧ್ಯಕ್ಷ ದಿನಕರ್ ಉಳ್ಳಾಲ್, ನೋಡೆಲ್ ಅಧಿಕಾರಿ ಚಂದ್ರಹಾಸ ರೈ.ಬಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ರೈ ಕುಕ್ಕುವಳ್ಳಿ, ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಕೋಶಾಧಿಕಾರಿ ಆನಂದ ಕೆ. ಅಸೈಗೋಳಿ ಹಾಗೂ ಸಮಿತಿಯ ಮಹಿಳಾ ಪಧಾಧಿಕಾರಿಗಳು ಉಪಸ್ಥಿತರಿದ್ದರು.