ಕಾರ್ಕಳ: ಕಾರ್ಕಳ ಬೆಟ್ಟದಿ ನಿಂದ ಬಂದ ಮಂದಸ್ಮಿತ ಶ್ರೀ ಬಾಹುಬಲಿಗೆ 21ನೇ ಶತಮಾನದ 2ನೇ ಮಹಾಮಜ್ಜನ ಸಂಭ್ರಮದ ಅಂಗವಾಗಿ ಮೊದಲ ದಿನವಾದ ಬುಧವಾರ 108 ಕಲಶಾಭಿಷೇಕ ನಡೆಯಿತು. ಇರುಳ ತಂಗಾಳಿ ಬೆಳಕಿನ ನಡುವೆ ಶ್ರಾವಕರಿಂದ ಭಕ್ತಿ ಗಾಯನದೊಂದಿಗೆ ರಾತ್ರಿ 8.15ಕ್ಕೆ ಜಲಾಭಿಷೇಕದೊಂದಿಗೆ ಮಹಾಮಸ್ತಕಾಭಿಷೇಕ ಆರಂಭವಾಯಿತು.
ಇದಕ್ಕೆ ಮೊದಲು ಗಾನಶಾಲೆ ಬಳಿಯಿಂದ ಬ್ಯಾಂಡ್, ಚೆಂಡೆ, ವಾದ್ಯ ಸಹಿತವಾದ ಮೆರವಣಿಗೆಯಲ್ಲಿ ಕಾರ್ಕಳ ಜೈನ ಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಸಹಿತ ಗಣ್ಯರನ್ನು ಬಾಹುಬಲಿ ಬೆಟ್ಟಕ್ಕೆ ಕರೆತರಲಾಯಿತು. ಜೈ ಬಾಹುಬಲಿ ಭಗವಾನ್ ಕೀ’ ಘೋಷಣೆಯೊಂದಿಗೆ ಭಕ್ತರು ಪುಳಕಿತರಾದರು.
ಬಾಹುಬಲಿ ಬೆಟ್ಟ ಸಂಪರ್ಕ ರಸ್ತೆ, ಕಟ್ಟಡ, ಮರಗಳಲ್ಲೆಲ್ಲ ವಿದ್ಯುತ್ ಬೆಳಕಿನ ಝಗಮಗ. ಅಹಿಂಸೆಯ ತತ್ವ ಸಾರುವ ಧರ್ಮಛತ್ರದಡಿ ನಡೆದ ಮಹಾಮಜ್ಜನವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ತಲೆ, ಹೆಗಲಿನಿಂದ ಮಾಡಿದ ಅಭಿಷೇಕ ಧಾರೆಧಾರೆಯಾಗಿ ಪಾದಕ್ಕಿಳಿಯಿತು. 42 ಅಡಿಯ ಅಜಾನುಬಾಹುವಿನ ತಲೆಯಲ್ಲಿ 64 ಗುಂಗುರು ಕೂದಲುಗಳಿದ್ದು, ಇದು ಜ್ಞಾನದ ಸಂಕೇತ. ವಿವಿಧ ಅಭಿಷೇಕಗಳ ಹೊರತಾಗಿಯೂ ಬಾಹುಬಲಿ ಮಾತ್ರ ನಿರ್ವಿಕಾರ ಭಾವದಿಂದ ನಿಂತಿದ್ದ. ಒಂದು ಅಭಿಷೇಕದಿಂದ ಇನ್ನೊಂದು ಅಭಿಷೇಕದ ಮಧ್ಯೆ ಕೆಂಪು ಮತ್ತು ಹಸಿರು ಬಾವುಟವನ್ನು ತೋರಿದಾಗ ಶುದ್ಧೋದಕ ಅಭಿಷೇಕ ನಡೆಯಿತು.
ಪಾದಮೂಲದಲ್ಲಿರುವ ಬಾಹುಬಲಿ ಬಿಂಬಕ್ಕೂ ಸರದಿಯಲ್ಲಿ ಅಭಿಷೇಕ ನಡೆಯಿತು. ಇಕ್ಷ್ವಾಕು ವಂಶಸ್ಥ ಬಾಹುಬಲಿಗೆ ಎಳನೀರು ಬಳಿಕ ಇಕ್ಷು(ಕಬ್ಬಿನ ರಸ ಅಭಿಷೇಕ ನಡೆದರೆ, ಹಾಲಿನ ಅಭಿಷೇಕದಲ್ಲಂತೂ ಬಾಹುಬಲಿ ಸುಂದರವಾಗಿ ಕಂಗೊಳಿಸಿದ 10ರ ಕಲ್ಕ ಚೂರ್ಣ (ಅಕ್ಕಿ ಹಿಟ್ಟು), ಅರಿಶಿನ, ವನಸ್ಪತಿ ಕಶಾಯ, ಗಂಧ, ಶ್ರೀಗಂಧ, ಅಶ್ವಗಂಧ ಹಾಗೂ ಪುಷ್ಪಾಭಿಷೇಕ ನಡೆಯಿತು.