ಕುಂದಾಪುರ: ಶ್ರೀ ಕ್ಷೇತ್ರ ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ದೇವರ ವರ್ಷಾವಧಿಯ ಮಕರ ಸಂಕ್ರಮಣ ಉತ್ಸವವು ಜನವರಿ 14ರಂದು ವಿಜೃಂಭಣೆಯಿಂದ ನಡೆಯಿತು.
ಜನವರಿ 14ರಂದು ಬೆಳಿಗ್ಗೆ 9 ಗಂಟೆಗೆ ಗುರುಮಾಚಿದೇವ ವಿವಿದೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ವಕೀಲ ಹೆಚ್. ಆನಂದ ಮಡಿವಾಳ ದೇವಳಕ್ಕೆ ಕೊಡಮಾಡಿದ ಕಾಣಿಕೆ ಹುಂಡಿಯನ್ನು ದೇವಸ್ಥಾನದ ಅನುವಂಶಿಕ ಮೊಕ್ತೇಸರ ಸಿ. ಸೀತಾರಾಮ ಶೆಟ್ಟಿಯವರಿಗೆ ಹಸ್ತಾಂತರ ಮಾಡಿದರು. ಈ ಸಂದರ್ಭ ಜಿ. ಶಂಕರ್ ಪ್ರತಿಷ್ಟಾನದ ಅಧ್ಯಕ್ಷ ಡಾ. ಈ. ಶಂಕರ್, ಕೃಷ್ಣಮೂರ್ತಿ ಮಂಜರು, ಚಿತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಂದ್ರ ಶೆಟ್ಟಿ, ರಘುರಾಮ ಶೆಟ್ಟಿ ಚಿತ್ತೂರು ಗುಡಿಕೇರಿ, ಅಕೌಂಟೆಂಟ್ ನಾರಾಯಣ ಶೆಟ್ಟಿ, ನಿವೃತ್ತ ಶಿಕ್ಷಕ ಶಂಕರ ಶೆಟ್ಟಿ, ದಿನಕರ ಶೆಟ್ಟಿ, ನಿತ್ಯಾಂದ ಶೆಟ್ಟಿ, ವಕೀಲ ಸರ್ವೋತ್ತಮ ಶೆಟ್ಟಿ, ಕುಸುಮಾಕರ ಶೆಟ್ಟಿ, ಸದಾಶಿವ ಶೆಟ್ಟಿ ಉಪಸ್ಥಿತರಿದ್ದರು.
ಮಧ್ಯಾಹ್ನ 12 ಗಂಟೆಗೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಹಾಮಂಗಳಾರತಿ, ರಾತ್ರಿ 10.30ಕ್ಕೆ ಕೆಂಡ ಸೇವೆ ಉತ್ಸವ ನಡೆಯಿತು. ಸಾವಿರಾರು ಭಕ್ತರು ವಿವಿಧೆಡೆಗಳಿಂದ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ರಾತ್ರಿ 9 ಗಂಟೆಗೆ ಮುಂಬೈ ಉದ್ಯಮಿ, ನಾಯ್ಕನ ಕಟ್ಟೆಯ ಸತೀಶ್ ಶೆಟ್ಟಿ ಕೊಡುಗೆ ಮಾಡಿದ ಮಹಾ ಅನ್ನದಾನ ಕಾರ್ಯಕ್ರಮವೂ ನಡೆಯಿತು.
ಜನವರಿ 15ರಂದು ಬೆಳಿಗ್ಗೆ 9.30 ಕ್ಕೆ ಮಹಾ ಮಂಗಳಾರತಿಯ ನಂತರ ಮಂಡಲ ಸೇವೆ, ಜನವರಿ 16ರಂದು ಬೆಳಿಗ್ಗೆ ಮಹಾಮಂಗಳಾರತಿ ನಂತರ ಮಂಡಲ ಸೇವೆ ನಡೆಯಲಿದೆ. ಅದೇ ದಿನ ರಾತ್ರಿ 10 ಗಂಟೆಗೆ ಕಡಬು ನೈವೇದ್ಯ, ಮಹಾಮಂಗಳಾರತಿ, ರಾತ್ರಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮೇಳದವರಿಂದ ಕಯ್ಷಗಾನ ಸೇವೆಯಾಟ ಜರುಗಲಿರುವುದು. ಜನವರಿ 15ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ ಹನ್ನೆರಡು ಗಂಟೆಯವರೆಗೆ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲ್ನಾಥ್ ಅವರಿಂದ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ ನಡೆಯಲಿದೆ