ಮಂಗಳೂರು, ಜ.14 : ಮಂಗಳೂರು ನೆಪ್ರೊ ಯುರೋಲಜಿ ಟ್ರಸ್ಟ್ ವತಿಯಿಂದ ಮಾ.12ರವರೆಗೆ ದ.ಕ. ಜಿಲ್ಲಾದ್ಯಂತ ನಡೆಯುವ ಕಿಡ್ನಿ ಆರೋಗ್ಯ ಅಭಿಯಾನಕ್ಕೆ ಮಂಗಳವಾರ ಸಂಸದ ನಳಿನ್ ಕುಮಾರ್ ಕಟೀಲ್ರವರು ಮೇಯರ್ ಮಹಾಬಲ ಮಾರ್ಲರಿಗೆ ‘ಶುದ್ಧ ನೀರು’ ಕುಡಿಸುವ ಮೂಲಕ ಜ್ಯೋತಿ ವೃತ್ತದ ಬಳಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಜಗತ್ತು ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಕೂಡ ಆರೋಗ್ಯಕ್ಕೆ ಸಂಬಂಧಿಸಿ ಹೃದ್ರೋಗ, ಕಿಡ್ನಿ, ಕ್ಯಾನ್ಸರ್ ರೋಗ ಸಮಸ್ಯೆಯಾಗಿ ಕಾಡುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸುವುದರೊಂದಿಗೆ ಜನಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಯರ್ ಮಹಾಬಲ ಮಾರ್ಲ, ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಇದರ ಯಶಸ್ವಿಗೆ ಪಾಲಿಕೆಯು ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಡಾ.ಮಯೂರ್ ಪ್ರಭು, ಮುಹಮ್ಮದ್ ಫಾರೂಕ್ ಶುಭ ಹಾರೈಸಿದರು. ಅಭಿಯಾನದ ಸ್ವಾಗತ ಸಮಿತಿಯ ಅಧ್ಯಕ್ಷ ಎಸ್.ಗಣೇಶ್ ರಾವ್ ಸ್ವಾಗತಿಸಿದರು. ಮಂಗಳೂರು ನೆಪ್ರೊ ಯುರೋಲಜಿ ಟ್ರಸ್ಟ್ ಅಧ್ಯಕ್ಷ ಡಾ. ಮುಹಮ್ಮದ್ ಸಲೀಂ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಉಮರ್ ಯು.ಎಚ್. ಕಾರ್ಯಕ್ರಮ ನಿರೂಪಿಸಿದರು.
ಜಮೀಯ್ಯತುಲ್ ಫಲಾಹ್ ಜಿಲ್ಲಾಧ್ಯಕ್ಷ ಹಾಗೂ ಸ್ವಾಗತ ಸಮಿತಿಯ ಉಪಾಧ್ಯಕ್ಷ ಸಾದುದ್ದೀನ್ ಎಂ.ಸಾಲಿಹ್, ಸಂಘಟನಾ ಕಾರ್ಯದರ್ಶಿ ಸಂಜಯ ಪ್ರಭು, ಸಈದ್ ಸುಲ್ತಾನ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷ ರಿಯಾಝ್ ಕಣ್ಣೂರು, ಯುವ ವಾಹಿನಿಯ ಕಿಶೋರ್ ಕೆ. ಬಿಜೈ, ಯಶವಂತ ಪೂಜಾರಿ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು. ಜ್ಯೋತಿ ವೃತ್ತದಿಂದ ಹೊರಟ ಜಾಥಾದಲ್ಲಿ ಪಾಲ್ಗೊಂಡ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು, ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ರಸ್ತೆ ಆಸುಪಾಸಿನ ಅಂಗಡಿ ಮುಂಗಟ್ಟುಗಳು, ಸಾರ್ವಜನಿಕರಿಗೆ ಅಭಿಯಾನದ ಕರಪತ್ರ ಹಾಗೂ ಒಂದು ಬಾಟಲಿ ಶುದ್ಧ ಕುಡಿಯುವ ನೀರನ್ನು ಹಂಚಿದರಲ್ಲದೆ, ‘ಕರಪತ್ರ ಓದಿರಿ-ನೀರು ಕುಡಿಯಿರಿ’ ಎಂದು ಭಿನ್ನವಿಸಿಕೊಂಡರು.
ಎರಡು ತಿಂಗಳ ಕಾಲ ಜರಗುವ ಅಭಿಯಾನದಲ್ಲಿ ಜಿಲ್ಲಾದ್ಯಂತ ಜನ ಜಾಗೃತಿ ಜಾಥಾ, ಮನೆ ಮನೆ ಸಮೀಕ್ಷೆ, ಸಂಚಾರಿ ವಾಹನದ ಮೂಲಕ ಜನಸಾಮಾನ್ಯರ ಕಿಡ್ನಿ ಆರೋಗ್ಯ ತಪಾಸಣೆ, ಆಯ್ದ ಪ್ರದೇಶಗಳಲ್ಲಿ ಕಿರು ಚಿತ್ರ ಪ್ರದರ್ಶನ, ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಚಟುವಟಿಕೆಗಳು, ಡಯಾಲಿಸಿಸ್ ಹಂತದಲ್ಲಿರುವ ಮತ್ತು ಕಿಡ್ನಿ ಕಸಿ ಮಾಡಿಸಿರುವ ರೋಗಿಗಳ ಸ್ನೇಹ ಕೂಟ ನಡೆಯಲಿದೆ.