ಮಂಗಳೂರು.ಜ,09 : ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಸಂಸ್ಥೆ ಅಂಕಿ ಅಂಶಗಳ ಪ್ರಕಾರ ಒಂದು ಲಕ್ಷ ಜನಸಂಖ್ಯೆಯಲ್ಲಿ 203 ಜನ ಕ್ಷಯರೋಗದಿಂದ ನರಳುತ್ತಿದ್ದಾರೆ. ಆದರೆ ಜಿಲ್ಲೆಯ ಅಂಕಿ ಅಂಶ ನೋಡಿದರೆ 1 ಲಕ್ಷಕ್ಕೆ 100 ಜನ ಕ್ಷಯ ರೋಗ ಪೀಡಿತರು ಪತ್ತೆಯಾಗುತ್ತಿದ್ದು, ಉಳಿದವರ ನಿಖರ ಮಾಹಿತಿಯನ್ನು ಕಲೆ ಹಾಕುವಂತೆ ಇಲಾಖೆಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸೂಚಿಸಿದ್ದಾರೆ.
ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ರಾವ್ ಅವರು ಮಾತನಾಡಿ ಜಿಲ್ಲೆಯಲ್ಲಿ ಕ್ಷಯರೋಗ ಪೀಡಿತರು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾದವರ ಅಂಕಿ ಅಂಶಗಳು ಮಾತ್ರ ದೊರಕುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರ ಮಾಹಿತಿ ಲಭ್ಯವಾಗುತ್ತಿಲ್ಲ.ಇನ್ನು ಕೆಲವು ರೋಗಿಗಳು ತಮಗೆ ಕ್ಷಯ ರೋಗ ಇದ್ದರೂ ಈ ಬಗ್ಗೆ ಹೇಳಿಕೊಳ್ಳಲು ಸಂಕೋಚ ಪಡುತ್ತಿದ್ದಾರೆ ಎಂದು ಸ್ಪಷ್ಟ ಪಡಿಸಿದರು.
ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 2012 ರಲ್ಲಿ 19,593 ಕಫ ಪರೀಕ್ಷೆ ಮಾಡಲಾಗಿ 1460 ಮಂದಿಗೆ ಕ್ಷಯರೋಗ ಇರುವುದು ಕಂಡು ಬಂದಿದೆ. ಇದೇ ರೀತಿ 2014 ರಸೆಪ್ಟೆಂಬರ್ ವರೆಗೆ 14,729 ಮಂದಿ ಕಫ ಪರೀಕ್ಷಿಸಿದ್ದು 1061 ಜನರಿಗೆ ಕ್ಷಯರೋಗ ಪತ್ತೆಯಾಗಿದೆ ಯೆಂದು ಟ್ಯೂಬರ್ಕ್ಯೂಲೆಸಿಸ್ ಅಸೋಸಿಯೇಷನ್ನ ಕಿಶೋರ್ ಅಂಕಿ ಅಂಶ ನೀಡಿದರು.