ಕುಂದಾಪುರ: ಇತ್ತೀಚೆಗೆ ನಡೆದ ಅನುಮಾನಾಸ್ಪದ ಸಾವೊಂದು ಮರಳು ಕಾರ್ಮಿಕರಿಂದ ನಡೆದ ವ್ಯವಸ್ಥಿತ ಹತ್ಯೆ ಎನ್ನುವ ಪ್ರಕರಣದ ಬೆನ್ನಿಗೇ ತಿರುಗಿ ಬಿದ್ದ ಕೊಂಕಣ ಖಾರ್ವಿ ಸಮಾಜ ಬಾಂಧವರು ಮರಳು ದಂಧೆ ಸ್ಥಗಿತಕ್ಕಾಗಿ ಉಡುಪಿ ಜಿಲ್ಲಾಧಿಕಾರಿಗಳಿಗೆ ನೀಡಿದ ದೂರು ಅರ್ಜಿಯನ್ನು ಪರಿಗಣಿಸಿದ ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್ ಅವರು ಕುಂದಾಪುರದ ಖಾರ್ವಿಕೇರಿಯ ಪಂಚಗಂಗಾವಳಿ ನದೀ ತೀರದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಮರಳು ಎತ್ತುವ ಧಕ್ಕೆಗಳನ್ನು ತೆರವುಗೊಳಿಸಲು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸೋಮವಾರ ರಾಜಸ್ವ ನಿರೀಕ್ಷಕರು, ಕುಂದಾಪುರ ಪೊಲೀಸರು ಹಾಗೂ ಪುರಸಭೆಯ ಅಧಿಕಾರಿಗಳ ಸಮಕ್ಷಮ ತೀರದಲ್ಲಿರುವ ಐದು ಧಕ್ಕೆಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ಕಳೆದ ಕೆಲವು ವರ್ಷಗಳಿಂದ ಮರಳೆತ್ತುವ ಪ್ರಕ್ರಿಯೆ ಎಲ್ಲೆಡೆ ಅನಧಿಕೃತವಾಗಿ ನಡೆಯುತ್ತಿದ್ದು, ಗಂಗಾವಳಿ ತೀರದಲ್ಲಿಯೂ ಮರಳುಗಾರಿಕೆ ನಡೆಯುತ್ತಿತ್ತು. ಈ ಬಗ್ಗೆ ಹಲವು ಬಾರಿ ತಾಲೂಕು ಕಚೇರಿ ಮುಂದೆ, ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ಮತ್ತೆ ಕೊಂಕಣ ಖಾರ್ವಿ ಸಮಾಜದವರು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದರು.
ತೆರವು ಕಾರ್ಯಾಚರಣೆಯಲ್ಲಿ ರಾಜಸ್ವ ನಿರೀಕ್ಷಕ ತಿಮ್ಮಪ್ಪ ಶೆಟ್ಟಿಗಾರ್, ಗ್ರಾಮಕರಣಿಕ ಭರತ್ ಕುಮಾರ್, ಕುಂದಾಪುರ ಪೊಲೀಸ್ ಉಪನಿರೀಕ್ಷಕ ನಾಸಿರ್ ಹುಸೇನ್, ಪೊಲೀಸ್ ಸಿಬ್ಬಂದಿಗಳಾದ ರಾಜು ಮೊಗವೀರ, ಲೋಕೇಶ್ ಮೊದಲಾದವರು ಇದ್ದರು.