ಮಂಗಳೂರು,ಜ.06 : ನಗರದ ಉದ್ಯಮಿ ರಾಜೇಶ ಪ್ರಭು ಎಂಬವರ ಮೊರ್ಗನ್ ಗೆಟ್ನಲ್ಲಿರುವ ನಿವಾಸದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ರಾಜೇಶ್ ಪ್ರಭು ಅವರು ಮುಂಬೈಗೆ ಸರಕು ಸಾಗಿಸುವ ಉದ್ಯಮ ನಡೆಸುತ್ತಿದ್ದು, ಈ ಘಟನೆಯ ಹಿಂದೆ ಮುಂಬೈ ಮಾರ್ಗದ ಖಾಸಗಿ ಬಸ್ ಮಾಲಕರ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಇಂದು ಮುಂಜಾನೆ 3:40ರ ಸುಮಾರಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಮನೆಯ ಡೈನಿಂಗ್ ಹಾಲ್ ಮತ್ತು ಸಿಟ್ಟಿಂಗ್ ಹಾಲ್ನಲ್ಲಿ ಗ್ಲಾಸ್ಗಳಿಗೆ ಹಾನಿಯಾಗಿದೆ. ಮನೆಯಲ್ಲಿ ಮತ್ತು ಮನೆ ಅಂಗಳದಲ್ಲಿ ಕಲ್ಲುಗಳ ರಾಶಿಯೇ ಬಿದ್ದಿದೆ.
ಘಟನೆ ನಡೆದ ಕೆಲವೇ ಸಮಯದಲ್ಲಿ ರಾಜೇಶ್ ಪ್ರಭುರವರು ಎಸಿಪಿ ಪವನ್ ನೆಜ್ಜೂರನ್ನು ಸಂಪರ್ಕಿಸಿದ್ದರು. ಕ್ಷಣದಲ್ಲಿಯೇ ರಾಜೇಶರ ಮನೆಗೆ ಪೊಲೀಸ್ ರಕ್ಷಣಾ ವ್ಯವಸ್ಥೆ ಮಾಡಲಾಗಿದೆ. ಮನೆಯ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಸರುವುದರಿಂದ ದುಷ್ಕರ್ಮಿಗಳ ಚಲನವಲನ ಸಿಸಿ ಕ್ಯಾಮರಾದಲ್ಲಿ ದಾಖಲಾಗಿರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಕಳೆದ ಮೂರು ದಿನಗಳಿಂದ ಮುಂಬೈ-ಮಂಗಳೂರು ಮಧ್ಯ ಖಾಸಗಿ ಬಸ್ ಓಡಾಟ ಸ್ಥಗಿತಗೊಂಡಿದೆ. ಬಸ್ ಮಾಲಕರ ಕುಮ್ಮಕ್ಕಿನಿಂದ ತಮ್ಮ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂದು ಬಸ್ ಚಾಲಕರು ಸಂಚಾರ ಸ್ಥಗಿತಗೊಳಿಸಿದ್ದರು.
ಬಸ್ ಚಾಲಕರಿಗೆ ರಾಜೇಶ್ ಪ್ರಭುರವರು ಬೆಂಬಲ ನೀಡುತ್ತಿದ್ದಾರೆ. ಚಾಲಕರಿಗೆ ಬೆಂಬಲಿಸದಿರುವಂತೆ ಬಸ್ ಮಾಲಕರು ರಾಜೇಶ ಪ್ರಭುರವರರಲ್ಲಿ ಹಲವು ಬಾರಿ ಮನವಿ ಮಾಡಿದ್ದರು. ಈ ಬಗ್ಗೆ ಹಲವು ಸುತ್ತಿನ ಮಾತುಕತೆಗಳೂ ನಡೆದಿದ್ದವು. ಮುಂಬೈ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡ ಬಳಿಕ ತನಗೆ ಪದೆ ಪದೇ ಬೆದರಿಕೆ ಕರೆಗಳು ಬರುತ್ತಿದ್ದವು. ಹೀಗೆ ಕರೆ ಮಾಡುತ್ತಿದ್ದವರೇ ಕಲ್ಲು ತೂರಾಟ ನಡೆಸಿ ಬೆದರಿಸಿರಬಹುದು ಎಂಬ ಶಂಕೆಯನ್ನು ರಾಜೇಶ್ ಪ್ರಭುರವರು ಆರೋಪಿಸಿದ್ದಾರೆ.
ಈ ಹಿಂದೆ ಮುಂಬೈಗೆ ಓಡಾಟದ ಬಸ್ಗಳನ್ನು ಹೊಂದಿದ್ದ ರಾಜೇಶ್ ಪ್ರಭುರವರು ಬಸ್ ವ್ಯವಹಾರ ನಿಲ್ಲಿಸಿ ಟ್ರಾನ್ಸ್ಪೋರ್ಟ್ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಜೇಶ್ ಪ್ರಭುರವರಿಗೆ ಈ ಹಿಂದೆ ಭೂಗತ ಪಾತಕಿಯೋರ್ವರಿಂದ ಬೆದರಿಕೆ ಕರೆಗಳು ಬಂದಿದ್ದವು ಎಂಬ ಮಾಹಿ ಕೂಡ ಬೆಳಕಿಗೆ ಬಂದಿದೆ.