ಮಂಗಳೂರು, ಡಿ.31 : ಸಂಘ ಪರಿವಾರ ಹಾಗೂ ಬಂಡವಾಳಶಾಹಿಗಳ ಹಿಡಿತ ದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತನ್ನ ಎಡಬಿಡಂಗಿ ನೀತಿಯಿಂದ ದೇಶದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಂಸದೆ ಹಾಗೂ ಸಿಪಿಎಂ ಕೇಂದ್ರ ಸಮಿ ತಿಯ ಸದಸ್ಯೆ ಶ್ರೀಮತಿ ಟೀಚರ್ ಆರೋಪಿಸಿದರು. ಸಿಪಿಎಂ ದ.ಕ.ಜಿಲ್ಲಾ 21ನೆ ಸಮ್ಮೇ ಳನದ ಅಂಗವಾಗಿ ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಈ ದೇಶವನ್ನು ಆಳಿದ ಕಾಂಗ್ರೆಸ್ ಮತ್ತು ಬಿಜೆಪಿ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಎರಡೂ ಪಕ್ಷಗಳು ತನ್ನ ಆಡಳಿತಾವಧಿಯಲ್ಲಿ ಕಾರ್ಪೊರೇಟರ್ ಸಂಸ್ಥೆಗಳಿಗೆ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯಲು ಅವಕಾಶ ಮಾಡಿಕೊಟ್ಟು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದ ಅವರು, ಯುಪಿಎ ಸರಕಾರದ ಆಧಾರ್ ಕಾರ್ಡನ್ನು ವಿರೋಧಿಸುತ್ತಿದ್ದ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅದನ್ನೇ ಮುಂದುವರಿಸಿಕೊಂಡಿದೆ. ಅಷ್ಟೇ ಅಲ್ಲ, ಉದ್ಯೋಗ ಖಾತ್ರಿ ಯೋಜನೆಯನ್ನು ಕೈ ಬಿಡುವ ಸಿದ್ಧತೆ ನಡೆಸಿದೆ. ಹೊಸ ಹೊಸ ಘೋಷಣೆಗಳ ಮೂಲಕ ದೇಶದ ಜನ ರನ್ನು ಮರುಳುಗೊಳಿಸುತ್ತಿದೆ. ಆದರೆ, ಇದರ ವಿರುದ್ಧ ಧ್ವನಿ ಎತ್ತಬೇಕಾಗಿದ್ದ ಕಾಂಗ್ರೆಸ್ ವೌನ ತಾಳಿದೆ’ ಎಂದರು.
ಆಡಳಿತ ನಡೆಸುವ ಪಕ್ಷ ದೇಶದಲ್ಲಿ ಶಾಂತಿ ಸುವ್ಯವಸ್ಥೆಗೆ ಆದ್ಯತೆ ನೀಡುತ್ತಿದೆ. ಆದರೆ, ಸಂಘ ಪರಿವಾರದ ಪೋಷಣೆಯಲ್ಲಿ ಬೆಳೆದ ಬಿಜೆಪಿ ಸಂಸದರು ಕೋಮು ವಿಷ ಬೀಜ ಬಿತ್ತುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಗಾಂಧೀಜಿಯನ್ನು ಹತ್ಯೆಗೈದ ಗೋಡ್ಸೆ ಹೆಸರಿನಲ್ಲಿ ದೇವಾಲಯ ಮತ್ತು ಪ್ರತಿಮೆ ನಿರ್ಮಾಣ ಮಾಡುವ ಪ್ರಯತ್ನ ನಡೆಸಲಾಗುತ್ತದೆ. ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಅಶಾಂತಿ ಸೃಷ್ಟಿಸುವ ಶಕ್ತಿಗಳ ವಿರುದ್ಧ ಎಡಪಕ್ಷಗಳ ಕಾರ್ಯಕರ್ತರು ಸಂಘಟಿತ ಹೋರಾಟ ಮಾಡಬೇಕಾಗಿದೆ ಎಂದು ಶ್ರೀಮತಿ ಟೀಚರ್ ಕರೆ ನೀಡಿದರು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಆರ್.ಶ್ರೀಯಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇನ್ನೋರ್ವ ಸದಸ್ಯ ವಿಜೆಕೆ ನಾಯರ್ ಮುಖ್ಯ ಭಾಷಣ ಮಾಡಿದರು. ವೇದಿಕೆಯಲ್ಲಿ ಪಕ್ಷದ ಮುಖಂಡರಾದ ಜೆ.ಬಾಲಕೃಷ್ಣ ಶೆಟ್ಟಿ, ವಸಂತ ಆಚಾರಿ, ಕೃಷ್ಣಪ್ಪ ಕೊಂಚಾಡಿ, ಯಾದವ ಶೆಟ್ಟಿ, ಯು.ಬಿ. ಲೋಕಯ್ಯ, ಬಿ.ಎಂ.ಭಟ್, ಕೃಷ್ಣಪ್ಪ ಸಾಲ್ಯಾನ್, ಸದಾಶಿವ ದಾಸ್, ಪದ್ಮಾವತಿ ಶೆಟ್ಟಿ, ಶಿವಕುಮಾರ್, ರಮಣಿ ಮೂಡುಬಿದಿರೆ, ಹರಿದಾಸ್ ಬೆಳ್ತಂಗಡಿ, ಪಿ.ಕೆ.ಸತೀಶನ್, ರಾಮಣ್ಣ ವಿಟ್ಲ, ಜಯಂತಿ ಬಿ. ಶೆಟ್ಟಿ, ವಾಸುದೇವ ಉಚ್ಚಿಲ್, ಮುನೀರ್ ಕಾಟಿಪಳ್ಳ, ಜಯಂತ ನಾಯಕ್, ಯೋಗೀಶ್ ಜಪ್ಪಿನಮೊಗರು, ರಾಬರ್ಟ್ ಡಿಸೋಜ ಸುಳ್ಯ ಮೊದಲಾದವರು ಉಪಸ್ಥಿತರಿದ್ದರು.
ಸುನೀಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.