ಮಂಗಳೂರು, ಡಿ.27: ಅಲ್ಪಸಂಖ್ಯಾತರು ಈಗಲೂ ತಮಗೆ ಸಂವಿಧಾನದತ್ತವಾಗಿ ದೊರಕಿರುವ ಹಕ್ಕು ಪಡೆಯುವ ಸಾಮರ್ಥ್ಯ ಪ್ರದರ್ಶಿಸಲಾಗದಷ್ಟು ಹಿಂದುಳಿದಿದ್ದಾರೆ. ಶಿಕ್ಷಣದ ಕೊರತೆ ಇದಕ್ಕೆ ಕಾರಣ. ಶಿಕ್ಷಣದಿಂದ ಮಾತ್ರ ಅರಿವು ಮತ್ತು ಜಾಗೃತಿ ಸಾಧ್ಯ ಎಂದು ಮಾಜಿ ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯ ಅಲ್ಹಾಜ್ ಕೆ.ರಹ್ಮಾನ್ ಖಾನ್ ತಿಳಿಸಿದ್ದಾರೆ. ಕೃಷ್ಣಾಪುರದ ಅಲ್ ಬದ್ರಿಯಾ ಎಜ್ಯುಕೇಶನಲ್ ಅಸೋಸಿಯೇಷನ್ ಅಧೀನದ ಅಲ್ ಬದ್ರಿಯಾ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಉದ್ಘಾಟಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮುಸ್ಲಿಮರು ಹಿಂದುಳಿದಿದ್ದರೆ ಅದಕ್ಕೆ ಸಮುದಾಯವೇ ಹೊಣೆ. ಲೌಕಿಕ ಶಿಕ್ಷಣಕ್ಕೆ ಆದ್ಯತೆ ನೀಡ ಬೇಕಾಗಿದೆ. ಧಾರ್ಮಿಕ ನಾಯಕರು ಸಮುದಾಯಕ್ಕೆ ಸರಿಯಾದ ತಿಳುವಳಿಕೆ ನೀಡುವ ಹೊಣೆಗಾರಿಕೆ ಹೊರಬೇಕಿದೆ ಎಂದು ಸಲಹೆ ನೀಡಿದರು. ನೂತನ ಆಡಳಿತ ಕಚೇರಿ ಹಾಗೂ ಕಂಪ್ಯೂಟರ್ ಪ್ರಯೋಗಾಲಯ ಹಾಗೂ ನೂತನ ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿದ ಸಂಸದ ಆಸ್ಕರ್ ಫೆರ್ನಾಂಡಿಸ್, ಅಲ್ ಬದ್ರಿಯಾ ಶಿಕ್ಷಣ ಸಂಸ್ಥೆಯು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಮಾದರಿಯಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಅಲ್ಪ ಸಂಖ್ಯಾತರು ಸರಕಾರಿ ಹುದ್ದೆಗಳಲ್ಲಿ ಸೇರಬೇಕು. ಇದರಿಂದ ಸಮುದಾಯದ ಸೇವೆ ಮಾಡಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು. ಮ್ಯಾಕ್ ಗ್ರೂಪ್ ಆಫ್ ಕಂಪೆನೀಸ್ನ ಅಧ್ಯಕ್ಷ ಕುಂಬ್ಳೆ ಮುಹಮ್ಮದ್ ಅರಬಿ, ವಲ್ಡ್ ವೈಡ್ ಶಿಪ್ಪಿಂಗ್ ಸಂಸ್ಥೆಯ ಆಡಳಿತ ನಿರ್ದೇಶಕ ಎ.ಮುಹಿಯುದ್ದೀನ್, ಇ.ಕೆ.ಇಬ್ರಾಹೀಂ ಮುಸ್ಲಿಯಾರ್, ಕಾರ್ಪೊರೇಟರ್ಗಳಾದ ತಿಲಕ್ರಾಜ್, ಅಯಾಝ್ ಅಹ್ಮದ್, ಗುಣಶೇಖರ ಶೆಟ್ಟಿ, ಶಿಕ್ಷಣ ಸಂಸ್ಥೆಯ ಸಂಚಾಲಕ ಬಿ.ಎ.ನಝೀರ್, ಪ್ರಾಂಶುಪಾಲೆ ರೊಹರಾ ಅಬ್ಬಾಸ್ ಉಪಸ್ಥಿತರಿದ್ದು, ಶುಭ ಹಾರೈಸಿದರು.
ಶಾಸಕ ಬಿ.ಎ.ಮೊಯ್ದಿನ್ ಬಾವ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಹಾಜಿ ಬಿ.ಎಂ.ಮುಮ್ತಾಝ್ ಅಲಿ ಸ್ವಾಗತಿಸಿದರು. ಉಪ ಪ್ರಾಂಶುಪಾಲೆ ಗುಣವತಿ ವಂದಿಸಿದರು. ಮುಹಮ್ಮದ್ ಅಲಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಕೋಸ್ಟಲ್ ಕನ್ಸ್ಟ್ರಕ್ಷನ್ನ ಹುಸೈನ್ ಬಾವ ಹಾಗೂ ಕಟ್ಟಡ ಗುತ್ತಿಗೆದಾರ ಹಾಜಿ ಟಿ.ಎಂ.ಶರೀಫ್ರನ್ನು ಅಲ್ ಬದ್ರಿಯಾ ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಇದೇ ವೇಳೆ ಸ್ಥಳೀಯ ನಾಗರಿಕ ಹಿತರಕ್ಷಣಾ ಸಮಿತಿಯ ವತಿಯಿಂದ ಮುಮ್ತಾಝ್ ಅಲಿಯವರನ್ನು ಸನ್ಮಾನಿಸಲಾಯಿತು.