ಉಪ್ಪಿನಂಗಡಿ, ಡಿ.27: ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ರಸ್ತೆಯಿಂದ 20 ಅಡಿ ಆಳದ ನದಿಯ ಬದಿಗೆ ಉರುಳಿ ಬಿದ್ದು ಸುಮಾರು 24 ಮಂದಿ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಸಮೀಪದ ಹಳೆಗೇಟು ಎಂಬಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಬಸ್ ಪ್ರಯಾಣಿಕರಾದ ಪ್ರಕಾಶ್(64), ವಿಶ್ವಾಸ್(29), ಸರೋಜಮ್ಮ(60), ಸ್ಮಿತಾ (37), ರತ್ನಮ್ಮ್ಮಾ(58), ರಘುನಾಥ ನಾಯಕ್ (54), ವಿನೋದ್ ಕುಮಾರ್ (32), ಬೆನಿಡಿಕ್ಟ್ ಡಿಸೋಜ (64), ಬಾಬಣ್ಣ ನಾಯಕ್ (83), ಜಾನೆಟ್ ಮರಿಯಾ ಮಜಾದೋ (30), ಸುನಿಲ್ ಮಜಾದೋ (45), ಸ್ವೇಪಾನಿಯಾ ಮಜಾದೋ (8), ಸ್ಟೀವ್ ಮಜಾದೋ (5), ಮುರಳೀಧರ್ (65), ಯಮುನಾ (61) ಎಂಬವರಿಗೆ ಗಾಯಗಳಾಗಿದು, ಇವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಇಲ್ಲಿನ ಹಳೆಗೇಟು ಸುಬ್ರಹ್ಮಣ್ಯ ಕ್ರಾಸ್ ಬಳಿಯಲ್ಲಿ ಬೆಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸು ಓವರ್ಟೇಕ್ ಮಾಡುವ ಭರದಲ್ಲಿ ಚಾಲಕ ನಿಯಂತ್ರಣ ತಪ್ಪಿಸುಮಾರು 20 ಅಡಿ ಆಳದ ನೇತ್ರಾವತಿ ನದಿಯ ದಡಕ್ಕೆ ಉರುಳಿದೆ. ಬಸ್ ಉರುಳುತ್ತಿದ್ದ ಸಂದರ್ಭದಲ್ಲಿ ಇದರ ಚಕ್ರಗಳ ಸಂಪರ್ಕ ತುಂಡಾಗಿ ಚಕ್ರಗಳು ಕಳಚಿಕೊಂಡಿವೆ.
ಗಾಯಾಳು ಪ್ರಯಾಣಿಕರನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯ ನಿವಾಸಿಗಳಾದ ರಶೀದ್ ಝಕರಿಯಾ, ಶಬೀರ್ ಕೆಂಪಿ, ಸಲೀಂ ಉಪ್ಪಿನಂಗಡಿ, ಜನಾರ್ದನ ನಟ್ಟಿಬೈಲು ಮತ್ತಿತರರು ಸಹ ಕರಿಸಿದರು. ಗಾಯಾಳುಗಳನ್ನು ನಾಲ್ಕು 108 ರಕ್ಷಾ ಕವಚದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಪುತ್ತೂರು ಸಂಚಾರಿ ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ..