ಮಂಗಳೂರು, ಡಿ.26 : ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಶಕ್ತಿನಗರದ ವಿಶೇಷ ಮಕ್ಕಳ ವಸತಿಯುತ ಶಾಲೆಯಾದ ಸಾನ್ನಿಧ್ಯ ಶಿಕ್ಷಣ ಸಂಸ್ಥೆಯಲ್ಲಿ ತಲೆಯ ಮೇಲೆ ಸಾಂತಾಕ್ಲಾಸ್ ಹ್ಯಾಟ್ ಹಾಕಿಕೊಂಡು ಕ್ರಿಸ್ಮಸ್ ಹಬ್ಬದ ಸಂಭ್ರಮವನ್ನು ಸಾರುವ ಸಂಗೀತಕ್ಕೆ ಹೆಜ್ಜೆ ಹಾಕುತ್ತಾ ಮಕ್ಕಳು ಕುಣಿದು ಕುಪ್ಪಳಿಸಿದರು. ಸಾಂತಾಕ್ಲಾಸ್ಗಳಿಂದ ಚಾಕಲೇಟ್ ಪಡೆದ ಮಕ್ಕಳು ಅದರ ರುಚಿ ಸವಿಯುತ್ತಾ, ಬಳಿಕ ಘಮಘಮಿಸುವ ಕ್ರಿಸ್ಮಸ್ ವಿಶೇಷ ಭೋಜನವನ್ನು ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಆಯೋಜಿಸಲಾಗಿತ್ತು .
ಕ್ರಿಸ್ಮಸ್ ಸಂಭ್ರಮಾಚರಣೆಯಲ್ಲಿ ಮೇಯರ್ ಮಹಾಬಲ ಮಾರ್ಲ, ಉಪ ಮೇಯರ್ ಕವಿತಾ ವಾಸು, ಕಾರ್ಪೊರೇಟರ್ಗಳಾದ ಅಖಿಲಾ, ಕೇಶವ್, ಅಬ್ದುಲ್ ಅಝೀಝ್, ಶಶಿರಾಜ್ ಅಂಬಟ್, ಸುಧೀರ್ ಟಿ.ಕೆ., ಡೆನ್ನಿಸ್ ಡಿಸಿಲ್ವಾ ಮೊದಲಾದವರು ವಿಶೇಷ ಮಕ್ಕಳ ಜೊತೆಗೆ ಕುಣಿದು, ಕ್ರಿಸ್ಮಸ್ ಸಂಭ್ರಮವನ್ನು ಹಂಚಿಕೊಂಡರು.
ಈ ಸಂದರ್ಭ ಕ್ರಿಸ್ಮಸ್ ಸಂದೇಶ ನೀಡಿದ ಶಾಸಕ ಜೆ.ಆರ್.ಲೋಬೊ, ಕ್ರಿಸ್ಮಸ್ ಎಲ್ಲಾ ಜಾತಿ ಧರ್ಮಗಳವರ ಹಬ್ಬವಾಗಿದ್ದು, ಧರ್ಮ ಜಾತಿಗಳ ಕಾರಣದಿಂದ ಸಮಾಜವನ್ನು ಒಡೆಯುವ ವ್ಯವಸ್ಥೆಯ ನಡುವೆ ಯೇಸುವಿನ ಸಂದೇಶದಂತೆ ಮನಸ್ಸನ್ನು ಬೆಸೆಯುವ ಕೆಲಸ ಮಾಡಬೇಕಾಗಿದೆ ಎಂದರು. ದೀನದಲಿತರು, ಕಷ್ಟದಲ್ಲಿರು ವವರು, ಮುಗ್ಧ ಜನರು, ಬಡವರಿಗೆ ತೀರಾ ಹತ್ತಿರವಾಗಿದ್ದ ಯೇಸು ಕ್ರಿಸ್ತನ ಜನ್ಮ ದಿನವನ್ನು ಮುಗ್ಧ ಜನರ ಜೊತೆ ಆಚರಿಸುವುದರಲ್ಲಿ ಅರ್ಥವಿದೆ ಎಂಬ ಉದ್ದೇಶದಿಂದ ಯಾವುದೇ ಆಡಂಬರವಿಲ್ಲದೆ, ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಸಾನ್ನಿಧ್ಯ ಸೇರಿದಂತೆ ಜೆಪ್ಪುವಿನ ಪ್ರಶಾಂತ ನಿಲಯ, ಕಾನ್ವೆಂಟ್, ಮಾರ್ನಮಿಕಟ್ಟೆಯ ಪ್ರಜ್ಞಾ ಕೇಂದ್ರ, ಜಪ್ಪಿನಮೊಗರಿನ ಪ್ರಜ್ಞಾ ಕೇಂದ್ರ, ಪಂಪ್ವೆಲ್ನ ಸಂವೇದನಾ ಏಡ್ಸ್ ರೋಗಿಗಳ ಆಶ್ರಯ ಸಂಸ್ಥೆ, ಬಿಜೈಯ ಪ್ರಜ್ಞಾ ಕೇಂದ್ರ ಹಾಗೂ ಕೊಟ್ಟಾರದ ಏಡ್ಸ್ ರೋಗಿಗಳ ಆಶ್ರಯ ಸಂಸ್ಥೆಯ ಒಟ್ಟು ಸುಮಾರು 800ರಷ್ಟು ಮಂದಿಯ ಜೊತೆ ಕ್ರಿಸ್ಮಸ್ ಹಬ್ಬವನ್ನು ಆಚರಿಸುತ್ತಿರುವುದಾಗಿ ಲೋಬೋ ತಿಳಿಸಿದರು.