ಮಂಗಳೂರು, ಡಿ.16: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2014ನೆ ಸಾಲಿನ ಗೌರವ ಪ್ರಶಸ್ತಿ ಮತ್ತು ಪುರಸ್ಕಾರ ಪಟ್ಟಿಯನ್ನು ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ಗೌರವ ಪ್ರಶಸ್ತಿಗೆ ಬ್ಯಾರಿ ಭಾಷಾ ಸಂಶೋಧನಾ ಕ್ಷೇತ್ರದಲ್ಲಿ ಸಾಧನೆಗೈದ ಪ್ರೊ.ಬಿ.ಎಂ.ಇಚ್ಲಂಗೋಡು ಮತ್ತು ಬ್ಯಾರಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಬಿ.ಎ.ಸಂಶುದ್ದೀನ್ ಮಡಿಕೇರಿ ಹಾಗೂ ಕಲೆ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಮುಹಮ್ಮದ್ ಬ್ಯಾರಿ ಎಡಪದವು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 10 ಸಾವಿರ ರೂ.ನಗದು, ಫಲಕ, ಸ್ಮರಣಿಕೆ, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
2014ರ ಪುರಸ್ಕಾರಕ್ಕೆ ಮರಿಯಮ್ ಇಸ್ಮಾಯೀಲ್ (ಸಾಹಿತ್ಯ), ಅಝಲ ಅಯ್ಯೂಬ್ (ಸಮಾಜ ಸೇವೆ), ಇಸ್ಮಾಯೀಲ್ ಆಜಾದ್ ಮೂಡಿಗೆರೆ (ಸಾಹಿತ್ಯ), ಉಮರ್ ಫಾರೂಕ್ ಬಿಕ್ಕೋಡು (ಸಾಹಿತ್ಯ), ಕೆ.ಮುಹಮ್ಮದ್ ಮಂದಗದ್ದೆ (ದೇಶ ರಕ್ಷಣೆ), ಮುಹಮ್ಮದ್ ಇಕ್ಬಾಲ್ ಕಾಟಿಪಳ್ಳ (ಗಾಯನ), ವೈದ್ಯ ಮೊಯ್ದಿನ್ ಕುಂಞಿ ಗರ್ಡಾಡಿ (ಆರೋಗ್ಯ), ಬಿ.ಎಚ್.ನೂರ್ ಮುಹಮ್ಮದ್ (ಸಮಾಜ ಸೇವೆ), ಡಾ.ಎ.ಎಂ.ಶ್ರೀಧರನ್ (ಸಾಹಿತ್ಯ) ಆಯ್ಕೆಯಾಗಿದ್ದಾರೆ ಎಂದು ವಿವರಿಸಿದರು .
ಚಿಕ್ಕಮಗಳೂರಿನ ಜಿಲ್ಲಾ ಬ್ಯಾರಿ ಒಕ್ಕೂಟದ ಸಹಕಾರದೊಂದಿಗೆ 2015ರ ಜ.10ರಂದು ಬೆಳಗ್ಗೆ 10ಕ್ಕೆ ಚಿಕ್ಕಮಗಳೂರಿನ ಒಕ್ಕಲಿಗರ ಸಭಾಭವನದಲ್ಲಿ ಬ್ಯಾರಿ ಭಾಷಾ ಸಮ್ಮೇಳನ ಮತ್ತು ಅಪರಾಹ್ನ 3ಕ್ಕೆ ಗೌರವ ಪ್ರಶಸ್ತಿ ಮತ್ತು ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ.
ರಾಜ್ಯದ ಸಚಿವರು, ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳು ಚುನಾಯಿತ ಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು, ಬ್ಯಾರಿ ಸಂಘಟನೆಗಳ ಸಹಿತ ವಿವಿಧ ಜಿಲ್ಲೆಯ 5,000 ಬ್ಯಾರಿಗಳು ಭಾಗವಹಿಸುವ ನಿರೀಕ್ಷೆಯಿದೆ. ಸಮ್ಮೇಳನದಲ್ಲಿ ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಹಾಗೂ ಬ್ಯಾರಿ ಭಾಷಿಗರ ಸಮಸ್ಯೆಗಳ ಕುರಿತು ವಿವಿಧ ಗೋಷ್ಠಿಗಳು, ಪುಸ್ತಕ ಬಿಡುಗಡೆ ಹಾಗೂ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು..
ಪತ್ರಿಕಾಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಉಮರಬ್ಬ, ಸದಸ್ಯರಾದ ಅಬ್ಬಾಸ್ ಕಿರುಗುಂದ, ಇದಿನಬ್ಬ ಬ್ಯಾರಿ, ಎಂ.ಇ.ಮುಹಮ್ಮದ್ ಫಿರ್ದೌಸ್, ಅಬ್ದುಲ್ ಹಮೀದ್ ಗೋಳ್ತಮಜಲು, ಯೂಸುಫ್ ವಕ್ತಾರ್, ಟಿ.ಎ.ಆಲಿಯಬ್ಬ ಜೋಕಟ್ಟೆ ಉಪಸ್ಥಿತರಿದ್ದರು.