ಮಂಗಳೂರು: ತುಳು ಸಾಹಿತ್ಯ ಭಾಷೆ, ಸಂಸ್ಕೃತಿಗೆ ನಾಟಕ ರಂಗದ ಕೊಡುಗೆ ಅನನ್ಯ. ವಿಶ್ವದೆಲ್ಲೆಡೆ ನಾಟಕ ಪ್ರದರ್ಶನಗೊಳ್ಳುವ ಮೂಲಕ ತುಳು ಭಾಷೆ ಎಲ್ಲೆಡೆ ಪಸರಿಸಿದೆ ಎಂದು ಖ್ಯಾತ ನಾಟಕಕಾರ, ಬಯ್ಯಬಲ್ಲಿಗೆ ಖ್ಯಾತಿಯ ಡಾ. ಪಿ.ಸಂಜೀವ ದಂಡೆಕೇರಿ ತಿಳಿಸಿದರು. ಅಖಿಲ ಭಾರತ ತುಳು ಒಕ್ಕೂಟದ ಬೆಳ್ಳಿ ಹಬ್ಬದ ಅಂಗವಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ವಿಶ್ವ ತುಳುವೆರೆ ಪರ್ಬ 2014 ರ ನೆನಪಿನಂಗವಾಗಿ ಅಡ್ಯಾರ್ ಸಹ್ಯಾದ್ರಿ ಕಾಲೇಜ್ ಆವರಣದಲ್ಲಿ ಕೆಮ್ತೂರು ದೊಡ್ಡಣ್ಣ ಶೆಟ್ಟಿ ವೇದಿಕೆಯಲ್ಲಿ ನಡೆದ ತುಳುನಾಟಕ ಪರ್ಬ 2014ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ತುಳು ನಾಡಿನ ಚರಿತ್ರೆಯನ್ನು ಚಾರಿತ್ರಿಕ ನಾಟಕದ ಮೂಲಕ ಎತ್ತಿಹಿಡಿಯಲಾಗುತ್ತಿತ್ತು. ತುಳು ನಾಡಿನ ಆಚಾರ, ವಿಚಾರ, ಪರಂಪರೆ, ವೇಷಭೂಷಣಗಳಿಗೆ ಮಾನ್ಯತೆ ನೀಡಿ ನಮ್ಮ ಸಂಸ್ಕೃತಿಯನ್ನು ಬಿಂಬಿಸಲಾಗುತ್ತಿತ್ತು. ಆದರೆ ಇಂದು ನಾಟಕ ರಂಗ ಕಮರ್ಷಿಯಲ್ನತ್ತ ಸಾಗಿದೆ. ಕಲಾವಿದರಲ್ಲಿ ಅನ್ಯೋನ್ಯತೆಯ ಕೊರತೆ ಕಾಡುತ್ತಿದೆ ಎಂದು ಡಾ. ಸಂಜೀವ ದಂಡೆಕೇರಿ ತಿಳಿಸಿದರು. ಸಮಾರಂಭದಲ್ಲಿ ನಾಟಕಕರ್ತ ಬಿ. ರಾಮ ಕಿರೋಡಿಯನ್ರ ‘ನೆಂಪು’ ಕಾರ್ಯಕ್ರಮ ಜರಗಿತ್ತು. ಹಿರಿಯ ನಾಟಕಕಾರ ಸಂಜೀವ ಅಡ್ಯಾರ್ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಜಯರಾಮ ಶೇಖ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಾಟಕ ಪರ್ಬದ ಪ್ರಾಯೋಜಕರಾದ ಭಂಡಾರಿ ಬಿಲ್ಡರ್ಸ್ನ ಮಾಲಕ ಲಕ್ಷ್ಮೀಶ ಭಂಡಾರಿ, ಅಡ್ಯಾರ್ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀ, ದಿವಾಕರ ನಾಕ್ ಅಡ್ಯಾರ್, ಅಶೋಕ್ ಶೆಟ್ಟಿ ಕೆಮ್ತೂರು, ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಯು.ಎಂ. ಭೂಷಿ ಉಪಸ್ಥಿತರಿದ್ದರು.
ವಿಶ್ವ ತುಳುವೆರೆ ಪರ್ಬ ಸಮಿತಿಯ ಪ್ರದಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಸ್ವಾಗತಿಸಿದರು. ನಾಟಕ ಪರ್ಬ ಸಮಿತಿಯ ಸಂಚಾಲಕ ವಿ.ಜಿ. ಪಾಲ್ ಪ್ರಸ್ತಾವನೆ ಗೈದರು. ಪ್ರದೀಪ್ ಆಳ್ವ ಕದ್ರಿ, ದಯಾನಂದ ಕಟೀಲು, ಕರುಣಾಕರ ಶೆಟ್ಟಿ ಮುಲ್ಕಿ, ತಾರನಾಥ ಶೆಟ್ಟಿ ಬೋಳಾರ್, ತಮ್ಮಲಕ್ಷ್ಮಣ್, ಎಚ್.ಕೆ. ನಯನಾಡು, ಶರತ್ ಶೆಟ್ಟಿ ಪಡು, ಲೀಲಾಕ್ಷ ಕರ್ಕೇರ ಸಹಕರಿಸಿದರು. ಸಮಾರಂಭದಲ್ಲಿ ನಾಟಕಕಾರ ಕೆ.ವಿ.ಭಟ್ ಮತ್ತು ನಿರ್ದೇಶಕ ಎಸ್.ಸಿ. ಅಂಚನ್ ಸುಜೀರ್ರನ್ನು ಗೌರವಿಸಲಾಯಿತು. ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಫರಂಗಿಪೇಟೆ ಮಾನಸ ಕಲಾವಿದರಿಂದ ‘ಆರತಿ’ ನಾಟಕ ಪ್ರದರ್ಶನಗೊಂಡಿತು.