ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು :ಸ್ವಸ್ತಿ ಆರ್ ಎಕ್ಸ್ ಲೈಫ್ ಟ್ರಸ್ಟ್ ಅಶ್ರಯದಲ್ಲಿ 8ನೇ ವರ್ಷದ ಆರ್ ಎಕ್ಸ್ ಲೈಫ್ ಹರ್ಕ್ಯುಲಸ್ ಸೈಕಲ್ ರ್ಯಾಲಿಯು ಡಿಸೆಂಬರ್ 7 ಅದಿತ್ಯವಾರ ದಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಸ್ವಸ್ತಿ ಆರ್ ಎಕ್ಸ್ ಲೈಫ್ ಟ್ರಸ್ಟ್ನ ಟ್ರಸ್ಠಿ ಡಾ. ಗಾಯತ್ರಿ ಭಟ್ ತಿಳಿಸಿದ್ದಾರೆ.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು. ಬಾನುವಾರ ಬೆಳಿಗ್ಗೆ 6.30 ಕ್ಕೆ ಲೇಡಿಹಿಲ್ ವೃತ್ತದಿಂದ ಆರಂಭಗೊಳ್ಳಲ್ಲಿರುವ ಸುಮಾರು 18 ಕಿ.ಮೀ ದೂರದ ಈ ಸೈಕಲ್ ರ್ಯಾಲಿಯನ್ನು ಮಂಗಳೂರು ನಗರ ಪೊಲೀಸ್ ಅಯುಕ್ತಕ ಆರ್. ಹಿತೇಂದ್ರರವರು ಉದ್ಘಾಟಿಸಲಿರುವರು. ರ್ಯಾಲಿಯು ಕೊಟ್ಟಾರ – ಕೂಳೂರು- ತಣ್ಣೀರುಬಾವಿ- ಕೊಟ್ಟಾರ-ಉರ್ವಸ್ಟೋರ್, ಅಶೋಕನಗರ – ಹ್ಯೊಗೈಬೈಲ್- ಸುಲ್ತಾನ್ ಬತ್ತೇರಿ ಮಾರ್ಗವಾಗಿ ಸಾಗಿ ಬೋಳೂರಿನ ಅಮೃತ ವಿದ್ಯಾಲಯಂ ಮೈದಾನದಲ್ಲಿ ಅಂತ್ಯಗೊಂಡು ಬಳಿಕ ಬೆಳಿಗ್ಗೆ ಗಂಟೆ 9.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಈ ಬಾರಿ ಈ ರ್ಯಾಲಿಯಲ್ಲಿ ಸುಮಾರು 2ಸಾವಿರಕ್ಕಿಂತ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ರ್ಯಾಲಿಯ ಮುಖ್ಯ ಉದ್ದೇಶ :
ರಸ್ತೆ ಸುರಕ್ಷತೆ ಈ ಸಲದ ರ್ಯಾಲಿಯ ಉದ್ದೇಶವಾಗಿದ್ದು ” ಸುರಕ್ಷಿತ ರಸ್ತೆ – ಸುರಕ್ಷಿತ ಸವಾರಿ” ಧ್ಯೇಯವಾಕ್ಯ . ನಗರದ ರಸ್ತೆಗಳು ದ್ವಿಚಕ್ರ ವಾಹನ ಸವಾರಿಗೆ ಸುರಕ್ಷಿತವಾಗಿರುವಂತೆ ಸಂಬಂಧ ಪಟ್ಟವರಲ್ಲಿ ಅಗ್ರಹಿಸಲು ಹಾಗೂ ಚತುಷ್ಟಕ್ರ ವಾಹನ ಚಾಲಕರು ಸೈಕಲ್ ಸವಾರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಪ್ರೇರೇಪಿಸಲು ಈ ರ್ಯಾಲಿಯು ಸಹಾಯಕಾರಿಯಾಗಲಿದೆ.
ನಿಯಮ:
ರ್ಯಾಲಿಯು ಯಶಸ್ವಿಯಾಗಿ ನಡೆಯಲು ಅನುಕೂಲವಾಗುವಂತೆ ಅಗತ್ಯ ವ್ಯವಸ್ಥೆಗೊಳಿಸುವ ಹಿನ್ನೆಲೆಯಲ್ಲಿ ಭಾಗವಹಿಸುವ ಸವಾರರು ಮುಂಚಿತವಾಗಿ ನೋಂದಣಿಯನ್ನು ಮಾಡಬೇಕಾಗಿದ್ದು, ಮಣ್ಣಗುಡ್ಡ ಹಾಗೂ ಪಾಂಡೇಶ್ವರದಲ್ಲಿರುವ ಆರ್ ಎಕ್ಸ್ ಲೈಫ್ ನಲ್ಲಿ ಡಿಸೆಂಬರ್ 5 ರ ಮೊದಲು ಹೆಸರು ನೋಂದಾಯಿಸಬೇಕು. (ಫೋನ್ : 0824 – 2457192 / ವೈಬ್ ಸೈಟ್ www.rxlife.in). ಪ್ರತಿ ಸವಾರರಿಗೆ ಹಾಗೂ ಪ್ರತಿ ಸೈಕಲ್ ಗೆ ಪರಿಚಯ ಸಂಖ್ಯೆಯನ್ನು ನೀಡಲಾಗುವುದು. ಹತ್ತು ವರ್ಷ ಮೇಲ್ಪಟ್ಟ ಸೈಕಲ್ ಸವಾರಿ ಬಲ್ಲ ಯಾರೂ ಕೂಡ ಭಾಗವಹಿಸಬಹುದಾಗಿದೆ. ಎಂದು ತಿಳಿಸಿದ ಅವರು ಕಳೆದ ಬಾರಿ ನಡೆದ ರ್ಯಾಲಿಯಲ್ಲಿ 83 ವರ್ಷದ ಹಿರಿಯರು ಭಾಗವಹಿಸಿದ್ದರು ಎಂದು ತಿಳಿಸಿದರು.
200 ಸ್ವಯಂ ಸೇವಕರು:
ಸುಮಾರು 200ಸ್ವಯಂ ಸೇವಕರು ಈ ರ್ಯಾಲಿಯ ವ್ಯವಸ್ಥೆಯಲ್ಲಿ ಶ್ರಮಿಸಲಿದ್ದಾರೆ. YHAI, ಟೀಂ ಮಂಗಳೂರು, ಸಿ.ಎ ಸ್ಟೂಡೆಂಟ್ಸ್ ಅಸೋಸಿಯೇಶನ್, ಆರ್ ಎಕ್ಸ್ ಲೈಫ್ ಫ್ಯಾಮಿಲಿ ಹಾಗೂ ಪ್ರಮುಖವಾಗಿ ಮಂಗಳೂರು ಹಾಗೂ ಸುರತ್ಕಲ್ ವಿಭಾಗದ ಪೊಲೀಸರ ಸಹಕಾರದಿಂದ ಈ ರ್ಯಾಲಿಯನ್ನು ಅಯೋಜಿಸಲಾಗುತ್ತಿದೆ. ಪ್ರತಿ ಸೈಕಲ್ ಗಳಿಗೂ ನೇತ್ರಾವತಿ ಉಳಿಸಿ ಎಂಬ ಸ್ಟಿಕ್ಕರನ್ನು ಅಂಟಿಸಿ ನೇತ್ರಾವತಿ ನದಿ ತಿರುವು ಯೋಜನೆಯ ವಿರುದ್ಧ ಚಿಕ್ಕದಾದ ಜಾಗೃತಿಯನ್ನು ಮೂಡಿಸಲಾಗುವುದು ಎಂದರು.
ಫೋಟೊ ಸ್ಪರ್ಧೇ : ವಿಜೇತರಿಗೆ ನಗದು ಬಹುಮಾನ
ಈ ಬಾರಿಯ ರ್ಯಾಲಿಯ ಸಂದರ್ಭ ಫೋಟೊ ಸ್ಪರ್ಧೇಯನ್ನು ಅಯೋಜಿಸಲಾಗಿದ್ದು, ರ್ಯಾಲಿಯ ಅತ್ಯೂತ್ತಮ ಮೂರು ಛಾಯಚಿತ್ರಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ (ನಗದು) ಬಹುಮಾನ ನೀಡಲಾಗುವುದು. ಒಬ್ಬರಿಗೆ ಮೂರು ಚಿತ್ರಗಳನ್ನು ಕಳಿಸಲು ಅವಕಾಶವಿದೆ. ಫೋಟೊವನ್ನು ಡಿಸೆಂಬರ್ 10ರ ಒಳಗೆ ಆರ್.ಎಕ್ಸ್ ಸಂಸ್ಥೆಯ ಕಚೇರಿಗೆ ತಲುಪಿಸಬೇಕು. ಈ ಫೋಟೊ ಸ್ಪರ್ಧೇಯಲ್ಲಿ ಎಲ್ಲರೂ ಮುಕ್ತವಾಗಿ ಭಾಗವಹಿಸ ಬಹುದು. ಆದರೆ ಮೊಬೈಲ್ ನಲ್ಲಿ ತೆಗೆದ ಚಿತ್ರಗಳಿಗೆ ಅವಕಾಶವಿಲ್ಲ.ಸ್ಫರ್ಧೆಗೆ ಯಾವೂದೇ ಪ್ರವೇಶ ಶುಲ್ಕ ಇರುವುದಿಲ್ಲ. ಡಿಸೆಂಬರ್ 20ರಂದು ತೀರ್ಪು ಪ್ರಕಟಿಸಿ, ಬಹುಮಾನ ವಿತರಿಸಲಾಗುವುದು. ದುಬೈಯ ಪ್ರಸಿದ್ಧ ಅಂತಾರ್ಜಾಲ ತಾಣ www.kannadigaworld.com ಈ ನಗದು ಬಹುಮಾನದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ ಎಂದು ಅವರು ತಿಳಿಸಿದರು.
File Photos
ಸಂಯೋಜಕರಾದ ಗಿರಿಧರ್ ಕಾಮಾತ್ ಹಾಗೂ ನರೇಂದ್ರ ನಾಯಕ್ ಅವರು ರ್ಯಾಲಿಗೆ ಸಮ್ಮಂದ ಪಟ್ಟ ಪೂರಕ ಮಾಹಿತಿಗಳನ್ನು ನೀಡಿದರು.