ಕುಂದಾಪುರ: ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಪಡುಕೋಣೆಗೆ ಮರವಂತೆ ಮೂಲಕ ಸೇತುವೆಯಾಗುವುದರಿಂದ ಎರಡು ಗ್ರಾಮಗಳ ಅಭಿವೃದ್ಧಿಯ ಜೊತೆಗೆ ಅಪೂರ್ವ ಪ್ರಾಕೃತಿಕ ಸೊಬಗನ್ನು ಹೊಂದಿರುವ ಮರವಂತೆ ಇನ್ನಷ್ಟು ಪ್ರವಾಸಿಗರ ಸಳೆಯಲಿದೆ. ಅದಕ್ಕೆ ಪೂರಕವಾಗಿ ಮರವಂತೆ ಪ್ರವಾಸಿಗಳ ಆಕರ್ಷಿಸಲು ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಡಿಯಲ್ಲಿ ಕುಂದಾಪುರ ತಾಲೂಕು ಮರವಂತೆ ಗ್ರಾಮದಲ್ಲಿ ಶ್ರೀ ಮಹಾರಾಜ ಸ್ವಾಮಿ ದೇವಸ್ಥಾನದ ಬಳಿ ಸೌಪರ್ಣಿಕ ನದಿಗೆ ಅಡ್ಡಲಾಗಿ ಪಡುಕೋಣೆಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಆಸ್ಕರ್ ಫೆರ್ನಾಂಡೀಸ್ ಅವರು ಕೇಂದ್ರದಲ್ಲಿ ಸಚಿವರಾಗಿದ್ದ ಅಲ್ಪ ಸಮಯದಲ್ಲಿ ೧೬೦೦ ಕೋಟಿ ರಸ್ತೆ ಅಭಿವೃದ್ದಿಗೆ ಕರ್ನಾಟಕಕ್ಕೆ ನೀಡಿದ್ದಾರೆ. ಈ ಭಾಗದಲ್ಲಿ ಚತುಷ್ಪಥ ಕಾಮಗಾರಿ ಕೂಡಾ ಪ್ರಗತಿಯಲ್ಲದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪತವಾಗಿ ಮೇಲ್ದರ್ಜೆಗೇರುತ್ತಿರುವ ಸಂದರ್ಭದಲ್ಲಿ ಎರಡು ಗ್ರಾಮಗಳ ಬೆಸಯುವ ಸೇತುವೆ ಕಾರ್ಯವೂ ನಡೆಯುತ್ತಿದೆ ಎಂದರು.
ಹಿಂದುಳಿದ ಕ್ಷೇತ್ರವೆಂಬ ಹಣೆಪಟ್ಟಿ ತೊಟ್ಟುಕೊಂಡಿದ್ದ ಬೈಂದೂರು ಕ್ಷೇತ್ರ ಶಾಸಕ ಗೋಪಾಲ ಪೂಜಾರಿಯವರ ಸತತ ಪರಿಶ್ರಮದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಈಗಾಗಲೇ ಹಲವಾರು ವರ್ಷಗಳ ಬೇಡಿಕೆಯ ಕನ್ನಡಕುದ್ರು ಸೇತುವೆಗೆ ಶಂಕುಸ್ಥಾಪನೆಯಾಗಿದೆ. ಬಹಳ ಮಹತ್ವಕಾಂಕ್ಷೆಯ ಈ ಸೇತುವೆಗೂ ಈಗ ಶಿಲಾನ್ಯಾಸ ನಡೆದಿದ್ದು, ಕ್ಷಿಪ್ರವಾಗಿ ಕಾಮಗಾರಿ ನಡೆದು ನಿಗದಿತ ಸಮಯದ ಒಳಗೆ ಉದ್ಘಾಟನೆಗೊಳ್ಳಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕೆ.ಗೋಪಾಲ ಪೂಜಾರಿ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ಕೆ.ಬಾಬು ಶೆಟ್ಟಿ, ತಾ.ಪಂ.ಅಧ್ಯಕ್ಷ ಭಾಸ್ಕರ ಬಿಲ್ಲವ, ತಾ.ಪಂ.ಸದಸ್ಯರಾದ ಶಂಕರ ಶೆಟ್ಟಿ ಬೆಳ್ಳಾಡಿ, ಲಕ್ಷ್ಮೀ ಮೆಂಡನ್, ಎಸ್.ರಾಜು ಪೂಜಾರಿ, ಹೆಚ್.ಮಂಜಯ್ಯ ಶೆಟ್ಟಿ, ಮಂಜು ಬಿಲ್ಲವ, ರಮೇಶ ಗಾಣಿಗ ಕೊಲ್ಲೂರು, ಜಿ.ಪಂ.ಸದಸ್ಯ ಅನಂತ ಮೊವಾಡಿ, ಮರವಂತೆ ಗ್ರಾ.ಪಂ.ಅಧ್ಯಕ್ಷೆ ಕೆ.ಎ.ಸುಗುಣ, ನಾಡ ಗ್ರಾ.ಪಂ.ಅಧ್ಯಕ್ಷ ಪ್ರವೀಣ ಶೆಟ್ಟಿ ಕಡ್ಕೆ, ಮರವಂತೆ ಶ್ರೀ ವರಾಹ ಸ್ವಾಮಿ ದೇವಸ್ಥಾನದ ಮೊಕ್ತೇಸರ ರಾಮಚಂದ್ರ ಹೆಬ್ಬಾರ್, ಪಡುಕೋಣೆ ಚರ್ಚ್ನ ಧರ್ಮಗುರು ಜೋಸೆಫ್ ಮಚಾದೊ, ಮುಂಬೈ ಉದ್ಯಮಿ ಸುರೇಶ್ ಎಸ್.ಪೂಜಾರಿ ಪಡುಕೋಣೆ, ಸುರೇಶ ಡಿ.ಪಡುಕೋಣೆ, ಪಾಂಡು ಪೂಜಾರಿ ಪೂನಾ, ಎನ್.ಟಿ.ಪೂಜಾರಿ, ಬೆಂಗಳೂರು ಉದ್ಯಮಿ ವಿಜಯಕೃಷ್ಣ ಪಡುಕೋಣೆ, ಜಿ.ಪಂ.ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಚಂದ್ರಶೇಖರ್ ಸೇತುವೆಯ ತಾಂತ್ರಿಕ ವಿವರಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸೇತುವೆಗೆ ಸ್ಥಳದಾನ ಮಾಡಿದ ಹೆರಿಯ ಕಾಂಚನ್, ಲಕ್ಷ್ಮೀ ಪೂಜಾರಿ, ಪಾಂಡು ಪೂಜಾರಿ, ಶ್ರೀ ವರಾಹ ದೇವಸ್ಥಾನದ ಮೊಕ್ತೇಸರ ರಾಮಚಂದ್ರ ಹೆಬ್ಬಾರ್, ಗಣಪ ಕೂಡ್ಲುಮಕ್ಕಿ, ಮಹಬಲ ಪೂಜಾರಿ ಮುಲ್ಲಿಮನೆ, ಕೃಷ್ಣ ಪೂಜಾರಿ ಮೂಡಾಯಿನಮನೆ ಹಾಗೂ ಸೇತುವೆ ಮಂಜೂರಾತಿಗೆ ಸಹಕರಿಸಿದ ರಾಜೇಶ ಕಾರಂತ, ಸೇತುವೆಯ ಗುತ್ತಿಗೆದಾರರಾದ ಸೈಂಟ್ ಅಂಥೋನಿ ಕನ್ಸ್ಟ್ರಕ್ಷನ್ನ ಫಿಲಿಪ್ ಡಿಕೋಸ್ತಾ ಅವರನ್ನು ಅಭಿನಂದಿಸಲಾಯಿತು. ಸಿಲ್ವೆಸ್ಟರ್ ಅಲ್ಮೇಡಾ ಪಡುಕೋಣೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮರವಂತೆ ಗ್ರಾ.ಪಂ. ಸದಸ್ಯ ಎಸ್.ಜನಾರ್ದನ್ ಮರವಂತೆ ಸ್ವಾಗತಿಸಿ, ತಾ.ಪಂ.ಮಾಜಿ ಸದಸ್ಯ ಸತೀಶ್ ಎಂ.ನಾಯಕ್ ನಾಡಾ ವಂದಿಸಿದರು. ಪತ್ರಕರ್ತ ರಾಜೇಶ್ ಕೆ.ಸಿ ಕಾರ್ಯಕ್ರಮ ನಿರ್ವಹಿಸಿದರು.