ಕೊಲ್ಲೂರು,ನ.29: ಅಂಗನವಾಡಿಯಲ್ಲಿ ಪುಸ್ತಕ ಬಿಡುಗಡೆ ಇದೊಂದು ವಿಶಿಷ್ಟ ಪರಿಕಲ್ಪನೆ. ಇಂತಹ ಯೋಚನೆ ಹೊಳೆಯುವುದೇ ವಿರಳ. ಅದು ಕೂಡಾ ಅದೇ ಊರಿನ ಬಗೆಗಿನ ಕೊಲ್ಲೂರು ಡೈರಿ ಈ ರೀತಿ ಪುಟಾಣಿ ಮಕ್ಕಳೆದುರು ಬಿಡುಗಡೆಯಾಗುತ್ತಿರುವುದು ಅಭಿನಂದನೀಯ ಎಂದು ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾರಾಯಣ ಖಾರ್ವಿ ಹೇಳಿದರು. ಅವರು ಸೌಪರ್ಣಿಕಾ ನದಿ ರಸ್ತೆಯ ಅಂಗನವಾಡಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಸರಳ ಕಾರ್ಯಕ್ರಮದಲ್ಲಿ ಪತ್ರಕರ್ತ ಶೇಖರ ಅಜೆಕಾರು ಅವರ “ಕೊಲ್ಲೂರು ಡೈರಿ”ಯನ್ನು ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ರೀತಿ ಊರನ್ನು ಕಟ್ಟಿ ಕೊಡುವ ಪ್ರಯತ್ನ ಒಂದು ಒಳ್ಳೆಯ ಕೆಲಸ. ಅದು ಇನ್ನಷ್ಟು ಪರಿಷ್ಕೃತವಾಗಿ ಆವೃತ್ತಿಗಳನ್ನು ಕಾಣುವಂತೆ ಆಗ ಬೇಕು ಎಂದ ಅವರು ಮಕ್ಕಳಿಗೆ ಶುಭ ಹಾರೈಸಿದರು.
ಇಂದಿನ ಮಕ್ಕಳೇ ನಾಳಿನ ಜನಾಂಗ ಎಂಬ ಮಾತಿಗೆ ಈ ಕಾರ್ಯಕ್ರಮ ಒತ್ತು ನೀಡಿದೆ. ಅವರೆದುರು ಊರಿನ ಕುರಿತ ಪುಸ್ತಕ ಬಿಡುಗಡೆ ಅವರಿಗೆ ಮುಂದಿನ ಜೀವನಕ್ಕೆ ಅನುಕೂಲ ಮಾಡಿ ಕೊಡಲಿದೆ. ಅವರಿಗೂ, ನಮಗೂ ಇದೊಂದು ವಿಶೇಷ ಅನುಭವ, ವಿಶೇಷ ಕಾರ್ಯಕ್ರಮ ಎಂದು ಅಭಿಮೋನ್ ರೆಸಿಡೆನ್ಸಿಯ ಪ್ರದೀಪ್ ಕುಮಾರ್ ಪಿಳ್ಳೈ ಅಭಿಪ್ರಾಯ ಪಟ್ಟರು.ಹಿರಿಯ ಕಾಷ್ಟ ಶಿಲ್ಪಿ ಶಂಕರ ಆಚಾರ್ಯ ಅಜೆಕಾರು ಅವರು ಮಕ್ಕಳಿಗೆ ಸಿಹಿ ವಿತರಿಸಿ ಶುಭ ಹಾರೈಸಿದರು. ಕೃತಿಯ ಲೇಖಕ ಶೇಖರ ಅಜೆಕಾರು ಕಾರ್ಯಕ್ರಮ ಸಂಯೋಜಿಸಿ, ವಂದಿಸಿದರು.