ಉಡುಪಿ: ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಮಡೆಸ್ನಾನವನ್ನು ನಿಷೇಧಿಸುವಂತೆ ಒತ್ತಾಯಿಸಿ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಧಾವೆ ಹೂಡಿದ್ದ ನಿಡುಮಾಮಿಡಿ ಶ್ರೀ ಇದೀಗ ಹೈಕೋರ್ಟ್ ಮಡೆಸ್ನಾನಕ್ಕೆ ಅಸ್ತು ಎಂದು ತೀರ್ಪು ನೀಡಿರುವ ಸಂದರ್ಭದಲ್ಲಿ ನ್ಯಾಯಾಂಗ ವಿರೋಧಿ ಹೇಳಿಕೆ ನೀಡುತ್ತಿರುವುದಕ್ಕೆ ತೀವ್ರ ಅಕ್ಷೇಪ ವ್ಯಕ್ತಪಡಿಸಿರುವ ಸಂಸ್ಕಾರ ಭಾರತಿಯ ಸಂಚಾಲಕ ವಾಸುದೇವ ಭಟ್ ಪೆರಂಪಳ್ಳಿ ದೇಶದ ನ್ಯಾಯ ವ್ಯವಸ್ಥೆಯ ಮೇಲೆ ಗೌರವ ಇಲ್ಲದ ನಿಡುಮಾಮಿಡಿ ಶ್ರೀಯನ್ನು ದೇಶದಿಂದ ಗಡೀಪಾರುಮಾಡುವಂತೆ ಸರ್ಕಾರವನ್ನು ಒತ್ತಾಯಿದ್ದಾರೆ.
ಒಂದು ಕಡೆ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನದಲ್ಲಿ ಮಡೆಸ್ನಾನದಂತಹ ಆಚರಣೆಗಳು ಸಂವಿಧಾನದ ಸಾಮಾಜಿಕ ನ್ಯಾಯದ ಮತ್ತು ಸಮಾನತೆಯ ಆಶಯಗಳ ಉಲ್ಲಂಘನೆ ಆಗುತ್ತದೆ ಎಂದು ವಾದಿಸುವ ಇವರು ಇದೀಗ ಅದೇ ಸಂವಿಧಾನದ ನೆಲೆಯಲ್ಲಿ ರೂಪುಗೊಂಡ ನ್ಯಾಯ ವ್ಯವಸ್ಥೆಯ ವಿರುದ್ದ ಮಾತಾಡುತ್ತಿದ್ದಾರೆ. ಒಂದು ವೇಳೆ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಶ್ವಾಸವಿಲ್ಲದಿದ್ದರೆ ನ್ಯಾಯಾಲಯದ ಮೆಟ್ಟಿಲು ಯಾಕೆ ಹತ್ತಬೇಕಿತ್ತು. ಆದ್ದರಿಂದ ಈ ದ್ವಂದ್ವಗಳ ಮೂಲಕ ತಾನೊಬ್ಬ ಎಡಬಿಡಂಗಿ ಎಂಬುದನ್ನು ಸ್ವತಃ ಸಾಬೀತುಪಡಿಸಿದ್ದಾರೆ.
ನಮ್ಮ ಧಾರ್ಮಿಕ ನಂಬಿಕೆಗಳ ಮೇಲಾಗಲಿ, ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಯ ಮೇಲಾಗಲಿ ಗೌರವ ಇಲ್ಲದ ಮೇಲೆ ಇವರೇಕೆ ಈ ದೇಶದಲ್ಲಿರಬೇಕು ಎಂದು ವಾಸುದೇವ ಭಟ್ ಪ್ರಶ್ನಿಸಿದ್ದಾರೆ.
ಇದೇ ಸಂದರ್ಭ ಮಡೆಸ್ನಾನಕ್ಕೆ ಅಸ್ತು ಎಂದಿರುವ ನ್ಯಾಯಾಲಯದ ತೀರ್ಪನಿಂದ ಜನರ ನಂಬಿಕೆ, ಭಾವನೆ, ಶ್ರದ್ದೆಗಳನ್ನು ಗೌರವಿಸಿದಂತಾಗಿದೆ. ಎಂದು ಅವರು ತಿಳಿಸಿದರು.