ಕರಾವಳಿ

ಕೋಟೇಶ್ವರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿ ಉದ್ಘಾಟನೆ

Pinterest LinkedIn Tumblr

ಕುಂದಾಪುರ: ರಾಜ್ಯದಲ್ಲಿ ಪ್ರಥಮ ರೈತ ಉತ್ಪಾದಕ ಕೇಂದ್ರ ಯಂತ್ರಶ್ರೀ ಕುಂದಾಪುರದಲ್ಲಿ ಆರಂಭವಾಗಿದೆ. ಈ ಯೋಜನೆಯಿಂದಾಗಿ ಭತ್ತ ಬೇಸಾಯಕ್ಕೆ ಯಂತ್ರಶಕ್ತಿ ಮೂಲಕ ಹೊಸ ಕಾಯಕಲ್ಪ ಸಿಕ್ಕಿದೆ. ರಾಜ್ಯದಲ್ಲಿ ಅತಿಹೆಚ್ಚು ಅಂದರೆ ಸುಮಾರು 7 ಸಾವಿರದಷ್ಟು ಸ್ವಸಹಾಯ ಸಂಘಗಳಿರುವ ಅವಿಭಜಿತ ತಾಲೂಕು ಕುಂದಾಪುರ. ಯೋಜನೆಗೆ ಅತಿ ಹೆಚ್ಚು ಕಾರ್ಯಕರ್ತರನ್ನು ನೀಡಿದ ತಾಲೂಕು ಇದು. ಪ್ರಗತಿನಿಧಿ ಬಳಕೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್. ಮಂಜುನಾಥ್ ಹೇಳಿದರು.

ಅವರು ಸೋಮವಾರ ಹಾಲಾಡಿ ರಸ್ತೆಯ ಗುರುಕೃಪಾ ಕಾಂಪ್ಲೆಕ್ಸ್‌ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂದಾಪುರ ಕಚೇರಿ-೨ನ್ನು ಉದ್ಘಾಟಿಸಿ ಮಾತನಾಡಿದರು.

2002ರಲ್ಲಿ ಕುಂದಾಪುರಕ್ಕೆ ನಗರ ಯೋಜನೆ ಮೂಲಕ ಕಾಲಿರಿಸಿ 2005ರಲ್ಲಿ ಗ್ರಾಮಾಂತರಕ್ಕೆ ವಿಸ್ತಾರಗೊಂಡ ಯೋಜನೆ ಇಂದು ಮನೆಮಾತಾಗಿದೆ. ನಮ್ಮನ್ನು ಬಳಸಿಕೊಳ್ಳಿ ಎಂಬ ಡಾ| ಹೆಗ್ಗಡೆಯವರ ಮಾತಿನಂತೆ ಯೋಜನೆಯ ಬಳಕೆ ಮೂಲಕ ಪ್ರಗತಿ ಸಾಧಿಸಬೇಕಿದೆ. ಯಾಂತ್ರೀಕೃತ ಕೃಷಿಗೆ ಒತ್ತು ನೀಡಬೇಕು. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕು. ಯಂತ್ರಗಳು ಇದ್ದರೆ ಸಾಲದು ಅದನ್ನು ಬಳಸಲು ಸೂಕ್ತ ವ್ಯಕ್ತಿಗಳೂ ಬೇಕೆಂದರು.

ಉಡುಪಿ ಜಿಲ್ಲೆಯಲ್ಲಿ ಕಾಪು, ಹೆಬ್ರಿ, ಕುಂದಾಪುರ-2 ಸೇರ್ಪಡೆ ಮೂಲಕ ಈಗ 9 ಯೋಜನಾ ಕಚೇರಿಗಳಾಗಿದ್ದು ತೆಕ್ಕಟ್ಟೆ, ಕೋಟೇಶ್ವರ, ಕಾಳಾವರ, ಸಿದ್ದಾಪುರ, ಹಾಲಾಡಿ, ಅಮಾಸೆಬೈಲು ವಲಯಗಳಿಗೆ ಪ್ರತ್ಯೇಕವಾಗಿ ಕುಂದಾಪುರ-2 ಕಚೇರಿ ತೆರೆಯಲಾಗಿದೆ.

ಬ್ಯಾಂಕ್ ಆ- ಬರೋಡಾದ ಮೆನೆಜರ್ ಶಂಕರ ಶೆಟ್ಟಿ, ಕಟ್ಟಡದ ಮಾಲಕ ರಮೇಶ್ ಪೂಜಾರಿ, ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್, ಪ್ರಗತಿಬಂಧು ಕೇಂದ್ರ ಸಮಿತಿ ಅಧ್ಯಕ್ಷೆ ಶೋಭಾಚಂದ್ರ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ| ಎಲ್. ಎಚ್. ಮಂಜುನಾಥ್ ಅವರನ್ನು ಜನಜಾಗೃತಿ ವೇದಿಕೆ, ಪ್ರಗತಿಬಂಧು ತಂಡಗಳು, ಯೋಜನೆಯ ಸಿಬಂದಿ ಪರವಾಗಿ ಪ್ರತ್ಯೇಕವಾಗಿ ಸನ್ಮಾನಿಸಲಾಯಿತು.

ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಸ್ವಾಗತಿಸಿ, ತಾಲೂಕು ಯೋಜನಾಧಿಕಾರಿ ನಾರಾಯಣ ಪಾಲನ್ ವಂದಿಸಿದರು.

Comments are closed.