
ಬೆಂಗಳೂರು: ಕೊರೊನಾ ವೈರಸ್ ಬಾಧಿತರ ಚಿಕಿತ್ಸೆ ವೇಳೆ ಬೇಕಾಗುವ ವೆಂಟಿಲೇಟರ್ ಕೊರತೆ ನೀಗಿಸಲು ‘ಸ್ವಸ್ಥ ವಾಯು’ ಹೆಸರಿನ ಪೋರ್ಟೆಬಲ್ ವೆಂಟಿಲೇಟರ್ ಅನ್ನು ನಗರದ ಸಿಎಸ್ಐಆರ್- ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೆಟರೀಸ್ 36 ದಿನಗಳಲ್ಲಿ ಅಭಿವೃದ್ಧಿಪಡಿಸಿದೆ.
ಬಹುತೇಕ ಎಲ್ಲ ದೇಶೀಯ ಉಪಕರಣ ಬಳಸಿರುವ ಈ ವೆಂಟಿಲೇಟರ್ ಅನ್ನು ನರ್ಸ್ಗಳ ನೆರವಿಲ್ಲದೇ ಬಳಸಬಹುದು. ಮೈಕ್ರೋ ಕಂಟ್ರೋಲರ್ ಆಧಾರಿತ ಕಂಟ್ರೋಲ್ ಸಿಸ್ಟಮ್ ಹೊಂದಿದೆ. ಇದನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಂಬಂಧಪಟ್ಟ ಸಂಸ್ಥೆಗಳಿಗೆ ಅನುಮೋದನೆ ಪಡೆಯಲಾಗುತ್ತಿದೆ. ಇದೇ ವೇಳೆ ಸರಕಾರಿ ಮತ್ತು ಖಾಸಗಿ ಕೈಗಾರಿಕೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಕೂಡ ಸಿಎಸ್ಐಆರ್-ಎನ್ಎಎಲ್ ಮಾತುಕತೆ ನಡೆಸಿದೆ.
ಬಯೋಮೆಡಿಕಲ್ ಪರೀಕ್ಷೆ ಮತ್ತು ಎನ್ಎಎಲ್ನ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಹಂತದ ಕ್ಲಿನಿಕಲ್ ಟ್ರಯಲ್ಗೆ ಒಳಪಟ್ಟಿದೆ. ಎನ್ಎಎಲ್ ನಿರ್ದೇಶಕ ಜೆ. ಜಿತೇಂದ್ರ ಜಾಧವ್ ಮಾತನಾಡಿ, ”ವಾರ್ಡ್ಗಳು, ತಾತ್ಕಾಲಿಕ ಆಸ್ಪತ್ರೆಗಳು, ಡಿಸ್ಪೆನ್ಸರಿಗಳು ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಮನೆಯಲ್ಲೂ ಬಳಕೆ ಮಾಡಲು ಅತ್ಯಂತ ಸೂಕ್ತವಾಗಿದೆ” ಎಂದು ಹೇಳಿದರು.
ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಸಿ.ಎಂ ಆನಂದ, ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಡಿ. ಅಮರ ನಾರಾಯಣ, ಉಸಿರಾಟ ಚಿಕಿತ್ಸಾ ತಜ್ಞ ಡಾ. ವಿರೇನ್ ಸರ್ದಾನಾ ಮತ್ತಿತರರ ತಂಡ ನಿರಂತರವಾಗಿ ಕಾರ್ಯನಿರ್ವಹಿಸಿ ಏರೋಸ್ಪೇಸ್ ವಿನ್ಯಾಸ ಕ್ಷೇತದ ಅನುಭವ ಆಧಾರದ ಮೇಲೆ ‘ಸ್ವಸ್ಥ ವಾಯು’ ವೆಂಟಿಲೇಟರ್ ಅಭಿವೃದ್ಧಿಪಡಿಸಿದೆ.
Comments are closed.