
ಬೆಂಗಳೂರು: ಕೋವಿಡ್-19 ಭೀತಿಯಿಂದಾಗಿ ಕೇರಳ ಮೂಲದ ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗಳು ದಾಖಲು ಮಾಡಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿಆಟೋರಿಕ್ಷಾದಲ್ಲೇ ಹೆರಿಗೆಯಾದ ಘಟನೆ ನಡೆದಿದೆ.
ಶಬನಂ (25) ಆಟೋರಿಕ್ಷಾದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ. ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಕೇರಳದ ಕೆಲವು ಸಂಘ- ಸಂಸ್ಥೆಗಳ ನೆರವಿನೊಂದಿಗೆ ಮಹಿಳೆಯನ್ನು ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಏನಿದು ಘಟನೆ?
ಶಬನಂ ಅವರು ಕೇರಳದ ಕಣ್ಣೂರು ಜಿಲ್ಲೆ ಪಳಯಂಗಡಿ ಮೂಲದವರಾಗಿದ್ದು, ಗೋರಿಪಾಳ್ಯದಲ್ಲಿ ನೆಲೆಸಿದ್ದರು. ಶನಿವಾರ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮೊದಲು ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಲು ಆಕೆಯ ತಾಯಿ ಮತ್ತು ಸಹೋದರ ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋಗಿದ್ದಾರೆ. ಕೋವಿಡ್-19ನಿಂದಾಗಿ ಯಾವುದೇ ಹೊಸ ರೋಗಿಗಳನ್ನು ದಾಖಲಿಸಿಕೊಳ್ಳದಂತೆ ಸೂಚಿಸಿರುವ ಕಾರಣ, ಮಹಿಳೆಯನ್ನು ಹೆರಿಗೆಗೆ ದಾಖಲಿಸಿಕೊಳ್ಳಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ.
ನಂತರ ಜಯನಗರದ ಸಂಜಯಗಾಂಧಿ ಆಸ್ಪತ್ರೆಯಲ್ಲೂ ದಾಖಲಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯನ್ನು ಎಡತಾಕಿದ್ದಾರೆ. ಅಲ್ಲೂ ಮಹಿಳೆಯನ್ನು ದಾಖಲು ಮಾಡಿಕೊಳ್ಳದ ಕಾರಣ, ಬೇರೊಂದು ಆಸ್ಪತ್ರೆಯತ್ತ ಹೊರಟಿದ್ದಾರೆ. ಈ ವೇಳೆ ಸಿದ್ದಾಪುರ ಬಳಿ ಶಬನಂ ಅವರಿಗೆ ಆಟೋರಿಕ್ಷಾದಲ್ಲೇ ಹೆರಿಗೆ ಆಗಿದೆ.
ಲಾಕ್ಡೌನ್ನಿಂದಾಗಿ ಕೇರಳದ ಕಣ್ಣೂರಿನಲ್ಲಿರುವ ಶಬನಂ ಅವರ ಪತಿ ಜಸ್ಮೀರ್ಗೆ ನಗರಕ್ಕೆ ಬರಲು ಸಾಧ್ಯವಾಗಿಲ್ಲ. ಈ ವೇಳೆ ನಗರದಲ್ಲಿ ಕಾರ್ಯಾಚರಿಸುತ್ತಿರುವ ಕೇರಳದ ಕೆಲವು ಸಂಘಟನೆಗಳಿಗೆ ವಿಷಯ ತಿಳಿಯುತ್ತಿದ್ದಂತೆಯೇ ನೆರವಿಗೆ ಧಾವಿಸಿದ್ದಾರೆ. ಮಗು ಮತ್ತು ತಾಯಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ಕೊಡಿಸಿದ್ದಾರೆ. ”ಹೆರಿಗೆ ನೋವಿನಿಂದಾಗಿ ವಾಣಿ ವಿಲಾಸ ಆಸ್ಪತ್ರೆ, ಸಂಜಯಗಾಂಧಿ ಆಸ್ಪತ್ರೆ ಹಾಗೂ ಒಂದು ಖಾಸಗಿ ಆಸ್ಪತ್ರೆಗೆ ಬಾಗಿಲು ಬಡಿದರೂ ಕರುಣೆ ತೋರಲಿಲ್ಲ. ಹೆರಿಗೆಗೆ ದಾಖಲು ಮಾಡಿಕೊಳ್ಳಲಿಲ್ಲ,” ಎಂದು ಘಟನೆ ಬಗ್ಗೆ ಶಬನಂ ನೊಂದು ನುಡಿದರು.
Comments are closed.