ಮನೋರಂಜನೆ

ರಶ್ಮಿಕಾ ಮಂದಣ್ಣಗೆ ಹೈದರಾಬಾದ್‌ಗೆ ವಾಪಸ್‌ ಬಾ’ ಎಂದ ವಿಜಯ್ ದೇವರಕೊಂಡ!

Pinterest LinkedIn Tumblr


‘ರೌಡಿ ಬಾಯ್‌’ ವಿಜಯ್ ದೇವರಕೊಂಡ ಹಾಗೂ ‘ಕಿರಿಕ್ ಬ್ಯೂಟಿ’ ರಶ್ಮಿಕಾ ಮಂದಣ್ಣ ನಡುವೆ ಉತ್ತಮ ಒಡನಾಟ ಇರುವುದು ಸಿನಿಪ್ರಿಯರಿಗೆಲ್ಲ ಗೊತ್ತು. ಆರಂಭದಲ್ಲಿ ‘ಗೀತಾ ಗೋವಿಂದಂ’ ರೀತಿಯ ಹಿಟ್ ಸಿನಿಮಾ ನೀಡಿದ ಈ ಜೋಡಿ, ಆನಂತರ ‘ಡಿಯರ್ ಕಾಮ್ರೇಡ್‌’ನಂತಹ ಬಹುಭಾಷಾ ಸಿನಿಮಾದಲ್ಲೂ ಜೊತೆಯಾಗಿ ನಟಿಸಿತು. ಸದ್ಯ ಲಾಕ್‌ಡೌನ್‌ನಿಂದಾಗಿ ರಶ್ಮಿಕಾ ಕೊಡಗಿನ ತಮ್ಮ ಮನೆಯಲ್ಲಿದ್ದಾರೆ. ಆದರೆ, ಅತ್ತ ವಿಜಯ್‌ ದೇವರಕೊಂಡ ಮಾತ್ರ, ‘ರಶ್ಮಿಕಾ ಹೈದರಾಬಾದ್‌ ಬಾ ಚಿಲ್‌ ಮಾಡೋಣ’ ಎಂದು ಕರೆದಿದ್ದಾರೆ! ಅಷ್ಟಕ್ಕೂ ಈ ಮಾತುಕತೆ ನಡೆದಿದ್ದಾರೂ ಏಕೆ? ಇಲ್ಲಿದೆ ಮಾಹಿತಿ.

ಮೇ 9ರಂದು ವಿಜಯ್ ಜನ್ಮದಿನ
ನಟ ವಿಜಯ್‌ ದೇವರಕೊಂಡಗೆ ಮೇ 9ರಂದು ಜನ್ಮದಿನ. ಅಂದು ಅವರ ಚಿತ್ರರಂಗದ ಆಪ್ತರು, ಸ್ನೇಹಿತರು ಹೀಗೆ ಎಲ್ಲರೂ ವಿಶ್ ಮಾಡಿದ್ದರು. ಅದೇ ರೀತಿ ರಶ್ಮಿಕಾ ಕೂಡ ‘ನನ್ನ ಕಾಮ್ರೇಡ್‌ ವಿಜಯ್‌ ದೇವರಕೊಂಡಗೆ ಜನ್ಮದಿನದ ಶುಭಾಶಯಗಳು’ ಎಂದು ಟ್ವೀಟ್ ಮಾಡಿದ್ದರು. ಇದೀಗ ಆ ಟ್ವೀಟ್‌ಗೆ ವಿಜಯ್ ದೇವರಕೊಂಡ ರಿಪ್ಲೈ ಮಾಡಿದ್ದಾರೆ. ‘ಮಂದಣ್ಣ… ಹೈದರಾಬಾದ್‌ಗೆ ಬಾ.. ಚಿಲ್‌ ಮಾಡೋಣ. ನಮ್ಮ ಗ್ಯಾಂಗ್ ನಿನ್ನನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದೆ..’ ಎಂದು ಹೇಳಿದ್ದಾರೆ.

ಇನ್ನು, ವಿಜಯ್‌ ಈ ರೀತಿ ಟ್ವೀಟ್ ಮಾಡುತ್ತಿದ್ದಂತೆಯೇ ಅದಕ್ಕೆ ರಶ್ಮಿಕಾ ಕೂಡ ಸಖತ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ‘ನೀವು ನನ್ನ ಬಿಟ್ಟು ಯಾವುದೇ ಫನ್‌ ಮಾಡದಿರುವುದೇ ಉತ್ತಮ’ ಎಂದಿದ್ದಾರೆ. ಸದ್ಯ ರಶ್ಮಿಕಾ ಮತ್ತು ವಿಜಯ್ ಯಾವುದೇ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸುತ್ತಿಲ್ಲ. ಆದರೂ, ಇಬ್ಬರ ನಡುವೆ ಒಳ್ಳೆಯ ಗೆಳೆತನವಿದೆ. ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ರಶ್ಮಿಕಾ ಹೈದರಾಬಾದ್‌ಗೆ ಹೋಗಲು ಸಾಧ್ಯವಿಲ್ಲ ಅನ್ನೋದಂತು ಸತ್ಯ.

ಕನ್ನಡದಲ್ಲಿ ‘ಕಿರಿಕ್ ಪಾರ್ಟಿ’ ಮಾಡುತ್ತಲೇ ರಶ್ಮಿಕಾಗೆ ತೆಲುಗಿನಿಂದ ಸಾಕಷ್ಟು ಆಫರ್‌ಗಳು ಬರುವುದಕ್ಕೆ ಶುರುವಾದವು. ಮೊದಲಿಗೆ ‘ಛಲೋ’ ಸಿನಿಮಾದಲ್ಲಿ ನಟಿಸಿದರು. ನಂತರ ವಿಜಯ್ ದೇವರಕೊಂಡ ಜೊತೆ ‘ಗೀತಾ ಗೋವಿಂದಂ’ ಮಾಡಿದರು. ಆ ಸಿನಿಮಾ ಹಿಟ್ ಆಗುತ್ತಲೇ ವಿಜಯ್‌-ರಶ್ಮಿಕಾ ಅವರದ್ದು ಹಿಟ್‌ ಜೋಡಿ ಎಂಬ ಮಾತು ಟಾಲಿವುಡ್‌ನಲ್ಲಿ ಚಾಲ್ತಿಗೆ ಬಂತು. ಇಬ್ಬರ ಮಧ್ಯೆ ಉತ್ತಮ ಹೊಂದಾಣಿಕೆ ಇದ್ದಿದ್ದರಿಂದ ‘ಡಿಯರ್ ಕಾಮ್ರೇಡ್‌’ ಸಿನಿಮಾದಲ್ಲೂ ಜೊತೆಯಾಗಿ ನಟಿಸಿದರು.

ವಿಜಯ್‌ ಈಗ ಅನನ್ಯಾ ಪಾಂಡೇ ಜೊತೆ ‘ಫೈಟರ್‌’ ಸಿನಿಮಾ ಮಾಡುತ್ತಿದ್ದರೆ, ರಶ್ಮಿಕಾ ತೆಲುಗು, ತಮಿಳು, ಕನ್ನಡದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಅಲ್ಲು ಅರ್ಜುನ್‌ ಜೊತೆ ‘ಪುಷ್ಪ’ ಮಾಡಬೇಕಿದೆ. ಧ್ರುವ ಸರ್ಜಾ ಜೊತೆ ‘ಪೊಗರು’ ಚಿತ್ರದ ಶೂಟಿಂಗ್‌ ಅನ್ನು ಈಗಾಗಲೇ ಮುಗಿಸಿರುವ ಅವರು, ತಮಿಳಿನಲ್ಲಿ ‘ಸುಲ್ತಾನ್‌’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Comments are closed.