ವಿಶೇಷ ವರದಿ(ಉಡುಪಿ): ಬಡ ಹಾಗೂ ಮಧ್ಯಮ ವರ್ಗದ ಜನರಿಗೂ ಉಚಿತವಾಗಿ ಉತ್ತಮ ಆರೋಗ್ಯ ಸೇವೆ ದೊರಕಬೇಕೆನ್ನುವ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಪ್ರಸ್ತುತ ಆರೋಗ್ಯ ಕರ್ನಾಟಕ ಯೋಜನೆಯೊಂದಿಗೆ ಇದನ್ನು ಸಂಯೋಜನೆಗೊಳಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ, 2018 ಅಕ್ಟೋಬರ್ ತಿಂಗಳಿನಿಂದ 2019 ಮಾರ್ಚ್ ವರೆಗೆ 1791 ಫಲಾನುಭವಿಗಳು ಈ ಯೋಜನೆಯ ಲಾಭ ಪಡೆದಿದ್ದಾರೆ. ಪ್ರಸಕ್ತ ಸಾಲಿನ ನವೆಂಬರ್ ಅಂತ್ಯದವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 7706 ಫಲಾನುಭವಿಗಳು 2354.13 ಲಕ್ಷದಷ್ಟು ಮೊತ್ತದ ಚಿಕಿತ್ಸೆಯನ್ನು ಪಡೆದಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಕಾರ್ಕಳ ತಾಲೂಕಿನಲ್ಲಿ 1436 ಫಲಾನುಭವಿಗಳಿಗೆ 394.76 ಲಕ್ಷ, ಕುಂದಾಪುರದಲ್ಲಿ 3257 ಫಲಾನುಭವಿಗಳಿಗೆ 1004.79 ಲಕ್ಷ ಮತ್ತು ಉಡುಪಿ ತಾಲೂಕಿನಲ್ಲಿ 3013 ಫಲಾನುಭವಿಗಳಿಗೆ 954.58 ಲಕ್ಷದಷ್ಟು ಮೊತ್ತದ ಚಿಕಿತ್ಸೆಯನ್ನು ನೀಡಲಾಗಿದೆ.
ರೆಫರಲ್ ಇಲ್ಲದೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ 2550, ಕಾರ್ಕಳದಲ್ಲಿ 490 ಮತ್ತು ಕುಂದಾಪುರದಲ್ಲಿ 952 ಫಲಾನುಭವಿಗಳು ಸರ್ಜರಿ, ಮತ್ತಿತರ ವೈದ್ಯಕೀಯ ಚಿಕಿತ್ಸೆಯನ್ನು ಪಡೆದಿದ್ದಾರೆ.
ದ.ಕ ಜಿಲ್ಲೆಯಲ್ಲಿ ವೆನ್ಲಾಕ್, ಅಂಕೋಲಜಿ ಆಸ್ಪತ್ರೆ, ಎ.ಜೆ ಶೆಟ್ಟಿ ಮತ್ತು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಕೆ.ಎಮ್.ಸಿ ಮಣಿಪಾಲ, ಆದರ್ಶ ಆಸ್ಪತ್ರೆ, ಪ್ರಸಾದ್ ನೇತ್ರಾಲಯ, ಹೈಟೆಕ್ ಆಸ್ಪತ್ರೆಗಳು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ರೆಫರಲ್ ವ್ಯವಸ್ಥೆ ಅಡಿ ನೋಂದಾಯಿಸಲ್ಪಟ್ಟಿದ್ದು, ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದ ಸೌಲಭ್ಯಗಳನ್ನು ಈ ಆಸ್ಪತ್ರೆಗಳಲ್ಲಿ ರೆಫರಲ್ ವ್ಯವಸ್ಥೆಯಡಿ ಪಡೆದುಕೊಳ್ಳಬಹುದು.
ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ಬಡವರಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದೇ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಮುಖ್ಯ ಉದ್ದೇಶ. ಈ ಯೋಜನೆಯಡಿ ಚಿಕಿತ್ಸೆ ಪಡೆದುಕೊಂಡ ಫಲಾನುಭವಿಗಳ ಸಂಖ್ಯೆಯಲ್ಲಿ ಉಡುಪಿ ಜಿಲ್ಲಾಸ್ಪತ್ರೆಯು ರಾಜ್ಯದಲ್ಲಿ ಎಂಟನೇ ಸ್ಥಾನದಲ್ಲಿದ್ದು, ಜಿಲ್ಲೆಯಲ್ಲಿ ಇದುವರೆಗೆ ಮೂರು ಲಕ್ಷಕ್ಕೂ ಮಿಕ್ಕಿ ಆಯುಷ್ಮಾನ್ ಎಬಿ-ಎ ಆರ್ ಕೆ ಕಾರ್ಡ್ ವಿತರಣೆ ಮಾಡಲಾಗಿದ್ದು, ಕಾರ್ಡ್ ವಿತರಣೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನದಲ್ಲಿದೆ ಎಂದು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಜಿಲ್ಲಾ ವ್ಯವಸ್ಥಾಪಕ ಜಗನ್ನಾಥ್ ಅವರು ತಿಳಿಸಿದರು.
Comments are closed.