
ನವದೆಹಲಿ: ಚುನಾವಣೆ ಶುರುವಾದಾಗಿನಿಂದ ಒಬ್ಬರಲ್ಲ ಒಬ್ಬ ರಾಜಕಾರಣಿ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಈಗ ಗುಜರಾತ್ನ ಬುಡಕಟ್ಟು ಜನಾಂಗದ ಕಲ್ಯಾಣ ಇಲಾಖೆ ಸಚಿವರ ಸರದಿ. ಬಿಜೆಪಿ ಸಚಿವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಟೀಕಿಸಿದ ಪರಿ ಇದೀಗ ಮತ್ತೊಂದು ವಿವಾದ ಸೃಷ್ಟಿಸಿದೆ.
ಭಾರತೀಯ ಜನತಾ ಪಕ್ಷದ ಸಚಿವ ಗಣ್ಪತ್ ವಾಸಾವಾ ಅವರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆ ನಡೆಸುತ್ತಿದ್ದ ವೇಳೆ ಮಾತನಾಡುತ್ತ, ನರೇಂದ್ರ ಮೋದಿಯವರನ್ನು ಸಿಂಹ ಎಂದು ಕರೆದಿದ್ದಾರೆ. ಆದರೆ ರಾಹುಲ್ ಗಾಂಧಿಯವರನ್ನು ನಾಯಿಮರಿಗೆ (ಪಪ್ಪಿ) ಹೋಲಿಸಿ ವಿವಾದ ಹುಟ್ಟುಹಾಕಿದ್ದಾರೆ.
ಮೋದಿಯವರು ನಿಂತಿದ್ದರೆ ಗುಜರಾತ್ನ ಸಿಂಹ ನಿಂತಿರುವಂತೆ ಭಾಸವಾಗುತ್ತದೆ. ಅದೇ ರಾಹುಲ್ ಗಾಂಧಿಯನ್ನು ನೋಡಿದರೆ ನಾಯಿಯೊಂದರ ಮರಿಯಂತೆ ಕಾಣುತ್ತದೆ. ಈ ನಾಯಿಮರಿ ಪಾಕಿಸ್ತಾನ ತಿಂಡಿ ಕೊಟ್ಟರೆ ಅಲ್ಲಿಗೆ ಹೋಗುತ್ತದೆ, ಚೀನಾ ರೊಟ್ಟಿ ಕೊಟ್ಟರೆ ಅಲ್ಲಿಗೆ ತೆರಳುತ್ತದೆ. ಒಟ್ಟಿನಲ್ಲಿ ಹೊಟ್ಟೆಗೆ ಯಾರು ಕೊಡುತ್ತಾರೋ ಅವರ ಎದುರು ಬಾಲ ಅಲ್ಲಾಡಿಸುತ್ತ ನಿಲ್ಲುತ್ತದೆ ಎಂದು ಟೀಕಿಸಿದ್ದಾರೆ.
ಹಿಂದೆ ರಾಹುಲ್ ಗಾಂಧಿಯನ್ನು ಶಿವನಿಗೆ ಹೋಲಿಸಿದ್ದಕ್ಕೆ ವ್ಯಂಗ್ಯವಾಡಿದ್ದ ಈ ಸಚಿವರು, ರಾಹುಲ್ ಶಿವನಂತೆ ವಿಷ ಕುಡಿದು ಬದುಕಿದರೆ ಮಾತ್ರೆ ನಾವು ಈ ಹೋಲಿಕೆಯನ್ನು ಒಪ್ಪುತ್ತೇವೆ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು.
Comments are closed.