
ವಿಜಯಪುರ: ಟಿಪ್ಪು ಓರ್ವ ಮತಾಂಧ, ಕನ್ನಡ ದ್ರೋಹಿ. ಅಂತವನ ಜಯಂತಿ ಆಚರಣೆ ಮಾಡುತ್ತಿರುವುದು ದುರದೃಷ್ಟದ ಸಂಗತಿಯೆಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಮತಗಳ ಓಲೈಕೆಗಾಗಿ ಕಾಂಗ್ರೆಸ್ ಟಿಪ್ಪು ಜಯಂತಿಯನ್ನು ಶುರು ಮಾಡುತ್ತಿದೆ. ಬಿಜೆಪಿಯು ಸಹ ಇದನ್ನು ಸಮಯಕ್ಕೆ ತಕ್ಕ ಹಾಗೆ ಬಳಸಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡಲು ಸಿದ್ಧತೆ ನಡೆಸಿದ್ದರೂ, ಸಿಎಂ ಕುಮಾರಸ್ವಾಮಿ ಜಯಂತಿಯಿಂದ ದೂರ ಉಳಿದಿದ್ದು ಒಳ್ಳೆಯ ಸಂಗತಿ. ಕನ್ನಡಿಗರ ಮಾನ ಉಳಿಸಿದ್ದಕ್ಕೆ ನಾನು ಸಿಎಂ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಕಳೆದ ಎರಡು ವರ್ಷಗಳಿಂದಲೂ ನಾನು ಟಿಪ್ಪು ಜಯಂತಿ ವಿರೋಧಿಸುತ್ತಾ ಬಂದಿದ್ದೇನೆ. ಏಕೆಂದರೆ ಟಿಪ್ಪು ಒಬ್ಬ ಮತಾಂಧ, ತನ್ನ ಅಧಿಕಾರದ ಅವಧಿಯಲ್ಲಿ ಸಾವಿರಾರು ಹಿಂದೂ ದೇವಸ್ಥಾನಗಳನ್ನು ಕೆಡವಿ, ಮಸೀದಿಗಳನ್ನು ಕಟ್ಟಿಸಿದ್ದ. ಅಲ್ಲದೇ ಲಕ್ಷಾಂತರ ಹಿಂದೂಗಳು ಹಾಗೂ ಕ್ರಿಶ್ಚಿಯನ್ನರನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಿದ್ದ. ಈಗಲೂ ಸಹ ಕೊಡಗು, ದಕ್ಷಿಣ ಕನ್ನಡ ಹಾಗೂ ಕೇರಳದ ಮಲಬಾರ್ ಗಳಲ್ಲಿ ಮತಾಂತರವಾಗಿದ್ದವರನ್ನು ನೋಡಬಹುದು. ಇದಲ್ಲದೇ ಮೈಸೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಉರ್ದು ಹೆಸರನ್ನಿಡುವ ಮೂಲಕ ಕನ್ನಡಕ್ಕೆ ಅಪಮಾನ ಮಾಡಿದ್ದ. ಅವನೊಬ್ಬ ಕನ್ನಡ ದ್ರೋಹಿ. ಅವನು ಯಾವುದೇ ಮಹಾತ್ಮನಲ್ಲ, ಅವನೊಬ್ಬ ಕ್ರೂರಿ ಎಂದು ಆಕ್ರೋಶ ಹೊರಹಾಕಿದರು.
ಮುಸ್ಲಿಂ ಬಾಂಧವರಲ್ಲಿ ನಾನು ಕೇಳುವುದೇನೆಂದರೆ, ಇಸ್ಲಾಂ ಹಾಗೂ ಕುರಾನ್ ನಲ್ಲಿ ನೀವುಗಳು ಅಲ್ಲಾನನ್ನು ಹೊರತು ಪಡಿಸಿ, ಯಾರೊಬ್ಬರ ಜಯಂತಿಯನ್ನು ಆಚರಣೆ ಮಾಡುವಂತಿಲ್ಲ. ಆದರೆ ಈಗ ಟಿಪ್ಪು ಜಯಂತಿ ಆಚರಣೆ ಮಾಡುವ ಮೂಲಕ ಅಲ್ಲಾನಿಗೆ ದ್ರೋಹ ಮಾಡುತ್ತಿದ್ದೀರಿ. ಸಾಮಾಜಿಕ ಜಾಲತಾಣದಲ್ಲಿ ಟಿಪ್ಪು ಜಯಂತಿ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ತನ್ನ ದಬ್ಬಾಳಿಕೆಯ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡುತ್ತಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ನೀಡಿದ್ದ ಸ್ವಾತಂತ್ರ್ಯವನ್ನು ಕಾಂಗ್ರೆಸ್ ದಬ್ಬಾಳಿಕೆಯಿಂದ ಕಿತ್ತುಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ರಾಜ್ಯಾದ್ಯಂತ ಶ್ರೀರಾಮ ಸೇನೆಯು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಟಿಪ್ಪು ಜಯಂತಿ ಮಾಡದಂತೆ ಮನವಿ ಪತ್ರಗಳನ್ನು ಸಲ್ಲಿಸಿದೆ. ಅಲ್ಲದೇ ಖುದ್ದು ಸಿಎಂ ಕುಮಾರಸ್ವಾಮಿಯವರಿಗೆ ಟಿಪ್ಪು ಜಯಂತಿ ತಡೆ ಬಗ್ಗೆ ಕೇಳಿಕೊಂಡಿದ್ದೇವೆ. ನಮ್ಮ ಹೋರಾಟದಿಂದಾಗಿ ರಾಜ್ಯ ಸರ್ಕಾರ ಟಿಪ್ಪು ಜಯಂತಿಯ ಸಾರ್ವಜನಿಕ ಸಭೆ ಹಾಗೂ ಮೆರವಣಿಗೆಗಳನ್ನು ತಡೆ ಹಿಡಿದಿದ್ದಾರೆ. ಮುಂಬರುವ ದಿನಗಳಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಸಂಪೂರ್ಣವಾಗಿ ನಿಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Comments are closed.