
ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಯೋಜನೆಗೆ ಇದೀಗ ಒಂದು ವರ್ಷದ ಸಂಭ್ರಮ . ಜನರು ವಿವಿಧ ಸೌಲಭ್ಯಗಳಿಗೆ ಬೇಡಿಕೆ ಇಡುತ್ತಿದ್ದರೆ, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ‘‘ಚಮಚ, ತಟ್ಟೆ ಕದಿಯಬೇಡಿ’’ ಎಂದು ಜನರನ್ನು ಕೋರಿದ್ದಾರೆ. ಒಂದು ಚಮಚಕ್ಕೆ 15 ರೂ. ಹಾಗೂ ತಟ್ಟೆಗೆ 50 ರೂ. ದರವಿದೆ. ಒಂದು ವರ್ಷದಲ್ಲಿ 1.2 ಲಕ್ಷ ಚಮಚ ಹಾಗೂ 10 ಸಾವಿರ ತಟ್ಟೆಗಳು ಕಳುವಾಗಿವೆ. ಇದರಿಂದಾಗಿ ಸುಮಾರು 20 ಲಕ್ಷ ರೂ. ನಷ್ಟವಾಗಿದೆ. ಜನರು ಊಟ ಮಾಡಿದ ಬಳಿಕ ಸಿಬ್ಬಂದಿಗೆ ಕಾಣದಂತೆ ಚಮಟ, ತಟ್ಟೆಗಳನ್ನು ಎತ್ತಿಕೊಂಡು ಹೋಗುತ್ತಿದ್ದಾರೆ.
ಇಂದಿರಾ ಕ್ಯಾಂಟೀನ್ಗೆ ಸಂದಿತು 1 ವರ್ಷ: ಇದುವರೆಗೆ 6 ಕೋಟಿ ಜನರಿಂದ ಆಹಾರ ಸೇವನೆ
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಯೋಜನೆಗೆ ಇದೀಗ ಒಂದು ವರ್ಷದ ಸಂಭ್ರಮ. ಇಂದಿರಾ ಕ್ಯಾಂಟೀನ್ಗಳು ಆರಂಭಗೊಂಡು ವರ್ಷವಾದರೂ, ಇಲ್ಲಿಗೆ ಊಟ, ತಿಂಡಿಗೆ ಬರುವವರ ಸಂಖ್ಯೆಯಲ್ಲೇನೂ ಕಡಿಮೆ ಆಗಿಲ್ಲ.
ಬಡವರ ಹಸಿವು ನೀಗಿಸುವ ಉದ್ದೇಶದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿದ ಇಂದಿರಾ ಕ್ಯಾಂಟೀನ್ ಯೋಜನೆಯು ಅಭೂತಪೂರ್ವ ಯಶಸ್ಸು ಪಡೆದುಕೊಂಡಿದೆ. ಕಳೆದ ಒಂದು ವರ್ಷದಲ್ಲಿ 6 ಕೋಟಿ ಜನರು ಊಟ, ತಿಂಡಿ ಸೇವಿಸಿರುವುದೇ ಇದಕ್ಕೆ ಸಾಕ್ಷಿ. ಸದ್ಯ 168 ಕ್ಯಾಂಟೀನ್ಗಳು ಕಾರ್ಯ ನಿರ್ವಹಿಸುತ್ತಿದ್ದು, ನಿತ್ಯ ಸುಮಾರು 2.15 ಲಕ್ಷ ಜನರು ಊಟಿ, ತಿಂಡಿಯ ರುಚಿ ಸವಿಯುತ್ತಿದ್ದಾರೆ.
ಬೀದಿ ಬದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು, ಆಟೊ, ಟ್ಯಾಕ್ಸಿ ಚಾಲಕರಿಗೆ 25 ರೂ.ಗಳಿಗೆ ಮೂರು ಹೊತ್ತಿನ ಊಟ, ತಿಂಡಿ ಲಭಿಸುತ್ತಿದೆ. ಹೀಗಾಗಿ, ಈ ಜನರು ಹೊಟ್ಟೆ ಹಸಿವು ನೀಗಿಸಿಕೊಳ್ಳಲು ಅಧಿಕ ಹಣ ತೆರುವುದು ತಪ್ಪಿದೆ. ಯೋಜನೆಯ ಆರಂಭದಿಂದಲೂ ಆಹಾರದ ಗುಣಮಟ್ಟ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಹಾಗೆಯೇ, ರಾಗಿ ಮುದ್ದೆ ಊಟ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೆಲ ವಾರ್ಡ್ಗಳಲ್ಲಿನ ಇಂದಿರಾ ಕ್ಯಾಂಟೀನ್ಗಳಲ್ಲಿ ಪ್ರಾಯೋಗಿಕವಾಗಿ ರಾಗಿ ಮುದ್ದೆ ವಿತರಿಸಲಾಯಿತು. ಆದರೆ, ಬೇಡಿಕೆಗೆ ಅನುಗುಣವಾಗಿ ಪೂರೈಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಎಲ್ಲೆಡೆ ರಾಗಿ ಮುದ್ದೆ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ.
ಕ್ಯಾಂಟೀನ್ನಲ್ಲಿ ಬೆಳಗ್ಗೆ ತಿಂಡಿಗೆ ಇಡ್ಲಿ, ಪೊಂಗಲ್, ವಾಂಗೀಬಾತ್, ಖಾರಾಬಾತ್ ನೀಡಲಾಗುತ್ತಿದೆ. ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ತರಕಾರಿ ಸಾಂಬಾರ್, ಅನ್ನ, ಮೊಸರನ್ನ, ಪಲಾವ್ ನೀಡಲಾಗುತ್ತಿದೆ. ಆದರೆ ಮಧ್ಯಾಹ್ನ ಹೊಟ್ಟೆಯನ್ನು ತಂಪು ಮಾಡುವ ರಾಗಿಮುದ್ದೆ ಸಿಕ್ಕರೆ ಚೆನ್ನಾಗಿರುತ್ತದೆ ಎಂಬುದು ನಿತ್ಯ ಕ್ಯಾಂಟೀನ್ನಲ್ಲಿ ಊಟ ಮಾಡುವವರ ಕೋರಿಕೆ. ಕೆಲವು ಬಾರಿ ಅನ್ನದ ಗುಣಮಟ್ಟ ಚೆನ್ನಾಗಿರುವುದಿಲ್ಲ. ಅನ್ನ ಸರಿಯಾಗಿ ಬೇಯಿಸಿರುವುದಿಲ್ಲ. ಪಾಲಿಕೆಯ ಅಧಿಕಾರಿಗಳು ಪ್ರತಿ ದಿನ ಆಹಾರವನ್ನು ಪರಿಶೀಲಿಸಿ, ಗುಣಮಟ್ಟವನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂಬುದು ಜನರ ಸಲಹೆ.
ಮೈಸೂರಿನ ಕೇಂದ್ರ ಆಹಾರ ಸಂಶೋಧನಾ ತಾಂತ್ರಿಕ ಸಂಸ್ಥೆಯಲ್ಲಿ (ಸಿಎಫ್ಟಿಆರ್ಐ) ಗಂಟೆಗೆ 250 ರಾಗಿಮುದ್ದೆಯನ್ನು ತಯಾರಿಸುವ ಯಂತ್ರವನ್ನು ಬಿಬಿಎಂಪಿ ಈಗಾಗಲೇ ಪರಿಶೀಲಿಸಿದೆ. ಇದರಿಂದ ಕ್ಯಾಂಟೀನ್ನಲ್ಲಿ ವೇಗವಾಗಿ ಆಹಾರ ಪೂರೈಸಲು ಸಾಧ್ಯವಿಲ್ಲ. ಹೀಗಾಗಿ ಹೆಚ್ಚು ಸಾಮರ್ಥ್ಯದ ಯಂತ್ರ ತಯಾರಿಸಲು ಅಥವಾ ಅದಕ್ಕಾಗಿ ಹುಡುಕಾಟ ನಡೆಸಲು ಕೋರಲಾಗಿದೆ.
ನೆರಳಿನ ವ್ಯವಸ್ಥೆ ಮಾಡಲು ಆಗ್ರಹ
ಇಂದಿರಾ ಕ್ಯಾಂಟೀನ್ನಲ್ಲಿ ಹೊರಗೆ ನಿಂತು ಊಟ ಮಾಡುವ ಜನರು ಬಿಸಿಲ ಬೇಗೆಗೆ ಬಸವಳಿಯುತ್ತಿದ್ದಾರೆ. ಪ್ರಕಾಶ್ ನಗರ ವಾರ್ಡ್ನ ಕ್ಯಾಂಟೀನ್ನಲ್ಲಿ ಸುತ್ತಲೂ ಉದ್ಯಾನವಿದ್ದು, ವಾತಾವರಣ ತಂಪಾಗಿದೆ. ಕೆ.ಆರ್.ಮಾರುಕಟ್ಟೆಯಲ್ಲಿರುವ ಧರ್ಮರಾಯಸ್ವಾಮಿ ವಾರ್ಡ್ನ ಕ್ಯಾಂಟೀನ್, ಚಾಮರಾಜಪೇಟೆ ಬಳಿಯ ಕ್ಯಾಂಟೀನ್, ಬಿಬಿಎಂಪಿ ಸಮೀಪದ ಸಂಪಂಗಿರಾಮನಗರ ಕ್ಯಾಂಟೀನ್ನಲ್ಲಿ ಹೊರಗೆ ತಂಪು ವಾತಾವರಣ ಇಲ್ಲ. ಸದ್ಯಕ್ಕೆ ನಗರದಲ್ಲಿ ಮಳೆಗಾಲದಿಂದಾಗಿ ಮೋಡ ಕವಿದ ವಾತಾವರಣವಿರುವುದರಿಂದ ಸಮಸ್ಯೆ ಇಲ್ಲ. ಆದರೆ, ಬೇಸಿಗೆ ಬಂದರೆ ಹೊರಗೆ ನಿಂತು ತಿನ್ನಲು ಸಾಧ್ಯವಾಗುವುದಿಲ್ಲ. ಸಾಧ್ಯವಾದರೆ ರೆಸ್ಟೋರೆಂಟ್ಗಳಲ್ಲಿರುವಂತೆ ಅಗಲವಾದ ಛತ್ರಿಯನ್ನು ಅಳವಡಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
“ಕಾಸು ಕಡಿಮೆ ಇದ್ದಾಗ ಮಾತ್ರ ಕ್ಯಾಂಟೀನ್ನಲ್ಲಿ ಊಟ ಮಾಡುತ್ತೇನೆ. ಆದರೆ ಎಲ್ಲ ಸಮಯದಲ್ಲಿ ಊಟ ರುಚಿಯಾಗಿರುವುದಿಲ್ಲ. ಗುಣಮಟ್ಟದ ಬಗ್ಗೆ ಗಮನಹರಿಸಬೇಕು.” –ಜಗದೀಶ್, ಕಾರ್ಮಿಕ
“ಬೆಳಗ್ಗೆ ಮತ್ತು ಮಧ್ಯಾಹ್ನ ಆಹಾರ ಸೇವಿಸುತ್ತೇನೆ. ಇಷ್ಟು ಕಡಿಮೆ ದರಕ್ಕೆ ಊಟ ಸಿಗುವುದೇ ದೊಡ್ಡ ವಿಚಾರ.” –ವೆಂಕಟಪ್ಪ, ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ
“ಅತಿ ಕಡಿಮೆ ದರದಲ್ಲಿ ಊಟ ಮಾಡುತ್ತಿರುವುದರಿಂದ ಹಣ ಉಳಿತಾಯವಾಗುತ್ತಿದೆ. ಹೋಟೆಲ್ಗಳಲ್ಲಿ 30-40 ರೂ. ನೀಡಿ ಊಟ ಮಾಡುವುದಕ್ಕಿಂತ ಇದು ಉತ್ತಮ.” –ಹುಸೇನ್, ಕಾರ್ಮಿಕ
Comments are closed.