
ದೆಹಲಿ : “ದೇಶದ ಬಹುದೊಡ್ಡ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಅವರು ಅಸ್ತಂಗತರಾದ ಸುದ್ದಿ ನನ್ನನ್ನು ಮೂಕನಾಗಿಸಿದೆ. ನನ್ನ ಅತೀವ ದುಃಖ ಮತ್ತು ಸಂತಾಪ ಸೂಚಿಸಲು ಈ ದಿನ ಪದಗಳೇ ಸಿಗುತ್ತಿಲ್ಲ. ಅಟಲ್ ಜೀ ನನ್ನ ಹಿರಿಯ ಸಹೋದ್ಯೋಗಿ, ಅದಕ್ಕಿಂತ ಹೆಚ್ಚಿಗೆ ಹೇಳಬೇಕೆಂದರೆ ನನ್ನ 65 ವರ್ಷಗಳ ಆತ್ಮೀಯ ಸ್ನೇಹಿತರು,”
ಹೀಗೆ ಭಾವುಕರಾಗಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ವಾಜಪೇಯಿ ಅವರ ಏಳು ದಶಕಗಳ ಗೆಳೆಯ, ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾನಿ.
“ದೀರ್ಘ ಕಾಲದಿಂದ ಒಡನಾಡಿಗಳಾಗಿದ್ದ ನಾವು ಆರ್ಎಸ್ಎಸ್ ಪ್ರಚಾರಕರಾಗಿದ್ದ ದಿನಗಳಿಂದ ಪರಿಚಿತರು. ತುರ್ತುಪರಿಸ್ಥಿತಿ ವಿರೋಧಿಸಿ ಇಬ್ಬರು ಕತ್ತಲ ಕೋಣೆಯಲ್ಲಿ ಬಂಧಿಗಳಾಗಿದ್ದೇವು. ಆ ವೇಳೆ ಜನತಾ ಪಕ್ಷ ಮುನ್ನಡೆಸುತ್ತಿದ್ದ ಅವರು ತುರ್ತುಪರಿಸ್ಥಿತಿ ನಂತರ 1980ರಲ್ಲಿ ಭಾರತೀಯ ಜನತಾ ಪಕ್ಷ ಸ್ಥಾಪಿಸಿದರು,”
“ಸ್ವತಂತ್ರ ಭಾರತದ ನಂತರ ದೇಶದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರ ಹಿಡಿಯಲು ಕಾರಣಕರ್ತರಾದರು ಅಟಲ್ ಜೀ. ಅವರ ಸರ್ಕಾರದಲ್ಲಿ ಆರು ವರ್ಷಗಳ ಕಾಲ ಉಪಪ್ರಧಾನಿಯಾಗಿ ಕೆಲಸ ಮಾಡಿದ ದಿನಗಳು ಅವಿಸ್ಮರಣೀಯ. ನನಗಿಂತಲೂ ಹಿರಿಯರಾದ ಅವರು ಯಾವಾಗಲೂ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು ಮತ್ತು ಮಾರ್ಗದರ್ಶಕರಾಗಿದ್ದರು.”
ಅವರ ಆದರ್ಶ ಗುಣಗಳು, ನಾಯಕತ್ವ ಶಕ್ತಿ, ಮಾತಿನ ಶೈಲಿ, ದೇಶಪ್ರೇಮ ಮತ್ತು ಎಲ್ಲವುದಕ್ಕಿಂತ ಮಿಗಿಲಾದ ಅವರ ಮಾನವೀಯ ಗುಣ, ದಯೆ, ಮಾರ್ಗದರ್ಶನದಿಂದ ನಾನು ಪುಳಕಿತನಾಗಿದ್ದೆ. ಅವರ ಎಲ್ಲ ಸಿದ್ಧಾಂತ, ಗುಣಗಳು ನನ್ನ ಜೀವನದ ಮೇಲೆ ಗಾಢ ಪರಿಣಾಮ ಬೀರಿವೆ.
“ನಾನು ಅಟಲ್ಜೀ ಅವರನ್ನು ಅಪಾರವಾಗಿ ಕಳೆದುಕೊಂಡಿದ್ದೇನೆ….” ಎಂದು ಆಡ್ವಾನಿ ಅವರು ತಮ್ಮ ದೀರ್ಘಕಾಲದ ಗೆಳೆಯನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Comments are closed.