ಕರ್ನಾಟಕ

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ: ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಿದ ದೇವೇಗೌಡ

Pinterest LinkedIn Tumblr

deve

ಬೆಂಗಳೂರು: ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾವಾಗುತ್ತಿದೆ ಎಂದು ಆರೋಪಿಸಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಪ್ರತಿಭಟನೆಗೆ ಇಳಿದಿದ್ದು, ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ನಿನ್ನೆ ರಾತ್ರಿಯೇ ತಮ್ಮ ಪುತ್ರ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಅವರೊಂದಿಗೆ ದೇವೇಗೌಡ ಅವರು ಚರ್ಚಿಸಿದ್ದು, ಕಾವೇರಿ ಹೋರಾಟದಲ್ಲಿ ಕರ್ನಾಟಕದ ಕಾನೂನಾತ್ಮಕ ನಡೆ ಕುರಿತಂತೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಇಂದು ಬೆಳಗ್ಗೆ 6.30ಕ್ಕೆ ಗಾಂಧಿ ಬಜಾರ್ ಬಳಿಯಿರುವ ಕಾರಂಜಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ದೇವೇಗೌಡ ಅವರು, ನಂತರ ಕೋಟೆ ವೆಂಕಟರಮಣ ದೇವಾಲಯಕ್ಕೆ ಪೂಜೆ ಸಲ್ಲಿಸಿ ವಿಧಾನಸೌಧದ ಬಳಿಯಿರುವ ಅಂಬೇಡ್ಕರ್ ಪ್ರತಿಮೆಗೆ ಮಾಡಿದರು.

ಇದೀಗ ಗಾಂಧಿ ಪ್ರತಿಮೆ ಬಳಿ ಕುಳಿತಿರುವ ದೇವೇಗೌಡ ಅವರು ಧರಣಿ ನಡೆಸುತ್ತಿದ್ದಾರೆ. ಅವರಿಗೆ ಪರಿಷತ್ ಸದಸ್ಯ ಟಿಎ ಷರವಣ ಹಾಗೂ ಜೆಡಿಎಸ್ ವಕ್ತಾರ ವೈಎಸ್ ವಿ ದತ್ತಾ ಅವರು ಸಾಥ್ ನೀಡಿದ್ದಾರೆ.

ಈ ವೇಳೆ ಮಾತನಾಡಿದ ದೇವೇಗೌಡ ಅವರು, ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯವಾಗುತ್ತಿದೆ. ಕಾವೇರಿ ವಿಚಾರವಾಗಿ ಈ ಹಿಂದೆ ಘೋಷಣೆಯಾದ ಐ ತೀರ್ಪನ್ನು ವಿರೋಧಿಸಿ ಈಗಾಗಲೇ ಕರ್ನಾಟಕ ಸರ್ಕಾರ ಸಿಎಲ್ ಪಿ ಸಲ್ಲಿಸಿದೆ. ಐ ತೀರ್ಪಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು, ತೀರ್ಪು ಮರುಪರಿಶೀಲಿಸುವಂತೆ ಕೋರಿಕೆ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್ ಕೂಡ ರಾಜ್ಯ ಸರ್ಕಾರದ ಮನವಿಯನ್ನು ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಈ ಹಿಂದೆ ಹೇಳಿತ್ತು. ಇದೇ ಅಕ್ಟೋಬರ್ 18ಕ್ಕೆ ಸಿಎಲ್ ಪಿ ವಿಚಾರಣೆಗೆ ಬರಲಿದೆ. ಇನ್ನು 2013ರಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ನಿರ್ಧರಿಸಲಾಗಿತ್ತು. ಹೀಗಿದ್ದೂ ತಮಿಳುನಾಡು ಸಿಎಂ ಜಯಲಲಿತಾ ಅವರು ಪದೇ ಪದೇ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಅವರ ಈ ನಡೆಯ ಹಿಂದಿನ ಉದ್ದೇಶವೇನೋ ತಿಳಿಯುತ್ತಿಲ್ಲ ಎಂದು ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಅಂತೆಯೇ ಮೊದಲು ಕರ್ನಾಟಕದ ಕಾವೇರಿ ಕೊಳ್ಳದ ಸುಮಾರು 2.3 ಕೋಟಿ ಜನರಿಗೆ ಕುಡಿಯಲು ನೀರು ಕೊಡಿ. ಬಳಿಕ ತಮಿಳುನಾಡು ರೈತರ ಸಾಂಬಾ ಬೆಳೆಗೆ ನೀರು ಬಿಡಿ ಎಂದು ದೇವೇಗೌಡ ಆಗ್ರಹಿಸಿದ್ದಾರೆ.

Comments are closed.