ಮುಂಬಯಿ : 2016ರ ಕೈಲಾಸ ಮಾನಸ ಸರೋವರ ಯಾತ್ರೆಗೆ ಆನ್ಲೈನ್ ಮೂಲಕ ಅರ್ಜಿ ಹಾಕುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ಕೇಂದ್ರ ವಿದೇಶ ವ್ಯವಹಾರಗಳಸಚಿವಾಲಯವು ಪ್ರಕಟಿಸಿದೆ.
ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಈ ವರ್ಷ ಜೂನ್ 12ರಿಂದ ಸೆಪ್ಟಂಬರ್ 9ರ ವರೆಗೆ ಲಿಪುಲೇಖ್ ಮತ್ತು ನಾಥು ಲಾ ಮಾರ್ಗವಾಗಿ ಕೈಗೊಳ್ಳಲು ಉದ್ದೇಶಿಸಲಾಗಿದೆ.
ಉತ್ತರಾಖಂಡದಲ್ಲಿನ ಲಿಪುಲೇಖ್ ಕಣಿವೆ ಮಾರ್ಗವಾಗಿ ಕೈಗೊಳ್ಳಲಾಗುವ ಮಾನಸ ಸರೋವರ ಯಾತ್ರೆಯಯಲ್ಲಿ ಯಾತ್ರಿಕರು ಸುಮಾರು 200 ಕಿ.ಮೀ. ಗಳ ಅತ್ಯಂತ ದುರ್ಗಮ ಎನಿಸಬಹುದಾದ ಟ್ರೆಕ್ಕಿಂಗ್ ನಡೆಸಬೇಕಾಗುವುದು.
ಈ ಯಾತ್ರೆಗೆ ಒಬ್ಬ ವ್ಯಕ್ತಿಗೆ ತಗಲುವ ವಚ್ಚ 1.60 ಲಕ್ಷ ರೂಪಾಯಿ. ಪ್ರತೀ ತಂಡದಲ್ಲಿ 60 ಮಂದಿ ಇರುವಂತೆ ಒಟ್ಟು 18 ತಂಡಗಳಲ್ಲಿ ಈ ಬಾರಿಯ ಯಾತ್ರೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.
ಸಿಕ್ಕಿಂ ನಲ್ಲಿನ ನಾಥು ಲಾ ಕಣಿವೆ ಮಾರ್ಗವಾಗಿ ಕೈಗೊಳ್ಳಲಾಗುವ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ತಲಾ 50 ಯಾತ್ರಿಕರ ಏಳು ತಂಡಗಳಲ್ಲಿ ಆಯೋಜಿಸಲಾಗಿದೆ. ಈ ಮಾರ್ಗವಾಗಿ ಕೈಗೊಳ್ಳಲಾಗುವ ಯಾತ್ರೆಯಲ್ಲಿ ಮೋಟಾರು ವಾಹನ ಬಳಸಲ್ಪಡುತ್ತದೆ. ಹಾಗಾಗಿ ತಲಾ ವ್ಯಕ್ತಿಯ ವೆಚ್ಚ ಸುಮಾರು ಎರಡು ಲಕ್ಷ ರೂ. ಆಗಿರುತ್ತದೆ.
ಆನ್ಲೈನ್ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಗೆ ಅರ್ಜಿ ಹಾಕುವವರು ಈ ಎರಡು ಮಾರ್ಗಗಳಲ್ಲಿ ಯಾವುದನ್ನು ಬೇಕಾದರೂ ಆಯ್ಕೆ ಮಾಡಬಹುದು. ಆದರೆ ನಾಥು ಲಾ ಮಾರ್ಗವಾಗಿ ಕೈಗೊಳ್ಳಲಾಗುವ ಯಾತ್ರೆಗೆ ಹಿರಿಯ ನಾಗರಿಕರ ಅರ್ಜಿಗಳನ್ನು ಆದ್ಯತೆಯಲ್ಲಿ ಪರಿಗಣಿಸಲಾಗುವುದು.
ಕೈಲಾಸ ಮಾನಸ ಸರೋವರ ಯಾತ್ರೆಗೆ ನಿಗದಿ ಪಡಿಸಲಾಗಿರುವ ವಯೋ ಶ್ರೇಣಿ 18ರಿಂದ 70 ವರ್ಷ.
ಆಸಕ್ತರು ಈ ಕೆಳಗಿನ ಲಿಂಕ್ ಬಳಸಿಕೊಳ್ಳಬಹುದಾಗಿದೆ.
-ಉದಯವಾಣಿ