ಕರ್ನಾಟಕ

ಉಂಡ ಮನೆಗೆ ಕನ್ನಹಾಕಿದ ! ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಕಟ್ಟಿ ಹಾಕಿ ದರೋಡೆಗೈದ ನಾಲ್ವರು ಆರೋಪಿಗಳ ಬಂಧನ

Pinterest LinkedIn Tumblr

arrest

ಬೆಂಗಳೂರು: ಹಾಡಹಗಲೇ ಮನೆಗೆ ನುಗ್ಗಿ ಒಂಟಿ ಮಹಿಳೆ ಕೈ ಕಾಲು ಕಟ್ಟಿ ಆಕೆಗೆ ಕಾರದ ಪುಡಿ ಎರಚಿ ಮನೆಯಲ್ಲಿದ್ದ ಆಭರಣ ದೋಚಿದ್ದ ಪ್ರಕರಣ ಬೇಧಿಸಿರುವ ಮಲ್ಲೇಶ್ವರಂ ಠಾಣೆ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲ ಬಂಧಿತರಿಂದ ಡೈಮಂಡ್, ಪ್ಲಾಟಿನಂ ಸೇರಿದಂತೆ ರು. 46 ಲಕ್ಷ ಮೌಲ್ಯದ 1.5 ಕೆ.ಜಿ. ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಜಯನಗರ ನಿವಾಸಿ ವಿನಾಯಕ(22), ಮಾಗಡಿ ರಸ್ತೆಯ ರಘು(22), ಚೋಳರಪಾಳ್ಯದ ಅಭಿಷೇಕ್(22) ಮತ್ತು ಕೊಡಗಿನ ಅಯ್ಯಂಗೇರಿಯ ಲಿಜೇಶ್ (19) ಬಂಧಿತರು. ಡಿ.20ರಂದು ಮಲ್ಲೇಶ್ವರಂ 9ನೇ ಕ್ರಾಸ್,6ನೇ ಮುಖ್ಯರಸ್ತೆಯಲ್ಲಿರುವ ಮನೆಗೆ ನುಗ್ಗಿದ ಆರೋಪಿಗಳು ಮಹಿಳೆಯ ಕೈ ಕಾಲು ಕಟ್ಟಿ ಬಳಿಕ ಪೆಪ್ಪರ್ ಸ್ಪ್ರೆ ಮಾಡಿ, ಬೀರುವಿನಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಈ ಸಂಬಂಧ ಉದ್ಯಮಿ ಸಂಪತ್ ಎಂಬುವರು ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳ ನ್ನು ಬಂಧಿಸುವ ಮೂಲಕ ರು. 46 ಲಕ್ಷ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಕೆಲ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೋಲೀಸ್ ಆಯುಕ್ತ ಚರಣ್ ರೆಡ್ಡಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉಂಡ ಮನೆಗೆ ದ್ರೋಹ: ಬಂಧಿತ ವಿನಾಯಕ ಉದ್ಯಮಿ ಸಂಪತ್ ಮನೆಯಲ್ಲಿ ಕಳೆದ ಮೂರು ವರ್ಷಗಳಿಂದ ಕಾರು ಚಾಲಕನಾಗಿದ್ದ. ಸಂಪತ್ ದಂಪತಿ ಈತನನ್ನು ಮನೆಯ ಮಗನಂತೆ ನೋಡಿಕೊಂಡಿದ್ದರು. ಇವರ ಎಲ್ಲ ವ್ಯವಹಾರಗಳ ಬಗ್ಗೆಯೂ ಈತ ತಿಳಿದುಕೊಂಡಿದ್ದ. ಅಷ್ಟೇ ಅಲ್ಲ ಯಜಮಾನರ ಮನೆಯಲ್ಲಿ ಹಣ ಮತ್ತು ಚಿನ್ನಾಭರಣ ಇರುವುದು ಕೂಡ ಗೊತ್ತಿತ್ತು. ಹೇಗಾದರು ಮಾಡಿ ಹಣ, ಚಿನ್ನಾಭರಣ ದೋಚಬೇಕೆಂದು ವಿನಾಯಕ ನಿರ್ಧರಿಸಿದ.

ದರೋಡೆ ನಡೆಸಲು ವಿನಾಯಕ ತನ್ನ ಮೂವರು ಸ್ನೇಹಿತರನ್ನು ಬಳಸಿಕೊಂಡು ಸಂಚು ರೂಪಿಸಿದ. ಕೃತ್ಯ ನಡೆಸಲೆಂದೇ ಆರೋಪಿಗಳೂ ಓಎಲ್ ಎಕ್ಸ್ ನಲ್ಲಿ ಕಾರೊಂದನ್ನು ಖರೀದಿಸಿದ್ದರು. ಡಿ. 20 ರಂದು ಸಂಪತ್ ಅವರ ಮನೆಗೆ ಬಂದು ಅವರ ಪತ್ನಿಗೆ, `ನಿಮ್ಮ ಮನೆಯಲ್ಲಿ ಕೆಲಸ ಮಾಡುವವರಿಗೆ ಅಪಘಾತವಾಗಿದೆ ಎಂದು ಹೇಳಿದ್ದಾರೆ. ಇದರಿಂದ ಗಾಬರಿಯಾದಮಹಿಳೆ ಪತಿ ಸಂಪತ್ ಗೆ ಕರೆ ಮಾಡಿದ್ದಾರೆ.. ಅಷ್ಟರಲ್ಲೇ ಆರೋಪಿಗಳು ಸಂಪತ್ ಪತ್ನಿಯ ಕೈ ಕಾಲು ಕಟ್ಟಿ ಹಾಕಿ, ಕಾರದ ಪುಡಿ ಎರಚಿ ಮನೆಯಲ್ಲಿದ್ದ ಚಿನ್ನಾಭರಣ ಕಲೆ ಹಾಕಿ ಓಡಿ ಹೋಗಲು ಓಡಿಹೋಗಲು ಹೊರಗೆ ಬಂದಿದ್ದಾರೆ. ಅಷ್ಟರಲ್ಲೇ ಸಂಪತ್ ಅವರು ಕೂಡ ಆಗಮಿಸಿದ್ದಾರೆ.

ಕಾಕಾತಾಳಿಯ ಎಂಬಂತೆ ಅಲ್ಲಿಯೇ ಹೊಯ್ಸಳ ವಾಹನವೂ ಇತ್ತು. ಈ ವಿಷಯ ತಿಳಿದ ಪೊಲೀಸರು ಮೂವರು ಆರೋಪಿಗಳನ್ನು ಹಿಂಬಾಲಿಸಿದ್ದಾರೆ. ಅಷ್ಟರಲ್ಲೇ ಮೂವರು ದಿಕ್ಕಾಪಾಲಾಗಿ ಓಡಿ ತಪ್ಪಿಸಿಕೊಂಡಿದ್ದರು. ನಂತರ ಸಂಪತ್ ಅವರು ನೀಡಿದ ಕಾರಿನ ಸಂಖ್ಯೆಯನ್ನಾಧರಿಸಿ ಶೋಧಿಸಿದಾಗ, ಕಾರಿನ ನೋಂದಣಿ ಕೂಡ ನಕಲಿಯಾಗಿರುವುದು ಪತ್ತೆಯಾಗಿತ್ತು ಎಂದು ರೆಡ್ಡಿ ತಿಳಿಸಿದರು. ಈ ಕಾರಿನ ಚಾಲಕ ವಿನಾಯಕನನ್ನು ವಿಚಾರಣೆ ನಡೆಸಿದಾಗ, ಸಂಪತ್ ದಂಪತಿ ಆತನ ಪರವೇ ನಿಂತಿದ್ದರು. ಆದರೆ ತನಿಖೆ ಪೂರ್ಣವಾದಾಗ ಸಂಚಿನ ಪ್ರಮುಖ ರೂವಾರಿ ಎನ್ನುವುದು ಪತ್ತೆಯಾಗಿದೆ ಎಂದು ತನಿಖೆಯ ವಿವರವನ್ನು ರೆಡ್ಡಿ ನೀಡಿದರು.

ಓಎಲ್ ಎಕ್ಸ್ ನಲ್ಲಿ ಕಾರು ಖರೀದಿ!: ಆರೋಪಿಗಳು ಕಳ್ಳತನಕ್ಕಾಗಿಯೇ ಓಎಲ್‍ಎಕ್ಸ್ ನಲ್ಲಿ ರು.68 ಸಾವಿರ ನೀಡಿ ಪೋರ್ಡ್ ಐಕಾನ್ ಕಾರನ್ನು ಖರೀದಿಸಿದ್ದರು. ಕಾರಿಗೆ ಮಹಾರಾಷ್ಟ್ರ ನೋಂದಣಿಯ ನಂಬರ್ ಪ್ಲೇಟ್ ಆಳವಡಿಸಿ ಕೊಂಡು ಕೃತ್ಯ ನಡೆಸಿದ್ದರು. ಡ್ರಿಲ್ಲಿಂಗ್ ಮಷಿನ್, ಕಟ್ಟಿಂಗ್ ಮಷಿನ್, 2 ಚಾಕು, ಕತ್ತರಿಯಿದ್ದ ಬ್ಯಾಗ್ ಅನ್ನು ಕೂಡ ಅಂದು ತಂದಿದ್ದರು. ಅಂದು ಚಿನ್ನಾಭರಣದೊಂದಿಗೆ ಪರಾರಿಯಾಗುವ ವೇಳೆ ಈ ಬ್ಯಾಗ್ ಅಲ್ಲಿಯೇ ಬಿಟ್ಟು ಓಡಿದ್ದರು ಎಂದು ಚರಣ್ ರೆಡ್ಡಿ ವಿವರಿಸಿದರು.

ತನಿಖಾ ತಂಡಕ್ಕೆ ಬಹುಮಾನ: ಪ್ರಕರಣ ಪತ್ತೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ತನಿಖಾ ತಂಡಕ್ಕೆ ಸೂಕ್ತ ಬಹುಮಾನ ನೀಡಲಾಗುವುದು. ಕೇವಲ 11 ದಿನಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವುದರ ಜತೆಗೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ತಂಡ ಯಶಸ್ವಿಯಾ ಗಿದೆ. ಹೀಗಾಗಿ ತಂಡಕ್ಕೆ ನಗದು ಬಹುಮಾನ ನೀಡುವಂತೆ ನಗರ ಪೊಲೀಸ್ ಆಯುಕ್ತರಿಗೆ ಶಿಫಾರಸು ಮಾಡಲಾಗುವುದೆಂದು ಅವರು ತಿಳಿಸಿದರು

Write A Comment