ಮಂಗಳೂರು,ನ.18 : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ನೀಡಲಾಗುವ ‘ಆಳ್ವಾಸ್ ನುಡಿಸಿರಿ ಪ್ರಶಸ್ತಿ‘ಗೆ ಕನ್ನಡ ನಾಡು-ನುಡಿ, ಸಂಸ್ಕೃತಿಗೆ ಶ್ರಮಿಸಿ ಸಾಧನೆಗೈದ ಸಾಹಿತಿ ಬನ್ನಂಜೆ ಗೋವಿಂದಾಚಾರ್ಯ, ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಒಟ್ಟು 10 ಮಂದಿ ಆಯ್ಕೆಯಾಗಿದ್ದಾರೆ. ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ನವೆಂಬರ್ 26ರಿಂದ 29ರವರೆಗೆ ವಿದ್ಯಾಗಿರಿಯಲ್ಲಿ ನಡೆಯುವ ಆಳ್ವಾಸ್ ನುಡಿಸಿರಿಯಲ್ಲಿ ಪ್ರದಾನ ಮಾಡಿ, ವಿಜೇತರನ್ನು ಗೌರವಿಸಲಾಗುವುದು. ಪ್ರಶಸ್ತಿಯು 25 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ತಿಳಿಸಿದ್ದಾರೆ
ಆಳ್ವಾಸ್ ನುಡಿಸಿರಿಯ ಅಧ್ಯಕ್ಷರಾಗಿ ಕನ್ನಡ ಸಂಶೋಧನಾ ಕ್ಷೇತ್ರದ ಗಣ್ಯ ಸಾಹಿತಿಯಾದ ಡಾ.ಟಿ.ವಿ. ವೆಂಕಟಾಚಲ ಶಾಸ್ತ್ರೀ, ಉದ್ಘಾಟಕರಾಗಿ ಸ್ತ್ರೀ ಸಂವೇದನಾ ಶೀಲ ಬರಹಗಾರರಾದ ಡಾ. ವೀಣಾ ಶಾಂತೇಶ್ವರ ಆಗಮಿಸಲಿದ್ದಾರೆ.
ಆಳ್ವಾಸ್ ನುಡಿಸಿರಿ ಪ್ರಶಸ್ತಿಗೆ ಆಯ್ಕೆಯಾದ ಸಾಧಕರು:
* ಸಾಹಿತಿ ಬನ್ನಂಜೆ ಗೋವಿಂದಾಚಾರ್ಯ
* ವಿಮರ್ಶಕ, ಮಕ್ಕಳ ಸಾಹಿತಿ ಡಾ. ಸಮತೀಂದ್ರ ನಾಡಿಗ
* ಚಲನಚಿತ್ರ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು
* ಗಾಯಕ ವಿದ್ವಾನ್ ಆರ್.ಕೆ ಪದ್ಮನಾಭ
* ವಿಮರ್ಶಕಿ ಡಾ. ಬಿ.ಎನ್ ಸುಮಿತ್ರಾ ಬಾಯಿ
* ಹಿರಿಯ ಪತ್ರಕರ್ತ ಈಶ್ವರ ದೈತೋಟ
* ಮಹಿಳಾ ಭಾಗವತರಾದ ಲೀಲಾವತಿ ಬೈಪಡಿತ್ತಾಯ
* ಪ್ರಗತಿಪರ ಕೃಷಿಕ ವರ್ತೂರು ನಾರಾಯಣ ರೆಡ್ಡಿ
* ಲೋಹ ಶಿಲ್ಪಿ ಹೊನ್ನಪ್ಪಾಚಾರ್
* ನೃತ್ಯ ಕಲಾವಿದ ಸೈಯದ್ ಸಲ್ಲಾವುದ್ದೀನ್ ಪಾಷ