ಪಾಟ್ನಾ: ಪಕ್ಷದ ನಾಯಕತ್ವದ ವಿರುದ್ಧವೇ ವಾಗ್ದಾಳಿ ನಡೆಸಿರುವ ಬಾಲಿವುಡ್ ಹಿರಿಯ ನಟ ಹಾಗೂ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರು ‘ನನ್ನನ್ನು ಪಕ್ಷದಿಂದ ಹೊರಹಾಕುವ ತಾಕತ್ತು ಅಥವಾ ಡಿಎನ್ ಎ ಯಾರಿಗೂ ಇಲ್ಲ ಎಂದು ಬುಧವಾರ ಹೇಳಿದ್ದಾರೆ.
ಪಕ್ಷದಲ್ಲಿನ ಹಿರಿಯರನ್ನು ಕಡೆಗಣಿಸಿರುವ ಬಿಜೆಪಿಯಲ್ಲಿನ ಕೆಲವು ಸ್ಥಾಪಿತ ಹಿತಾಸಕ್ತಿಗಳು ಬಿಹಾರ ಸೋಲಿನಿಂದ ಪಾಠ ಕಲಿಯುತ್ತಿಲ್ಲ ಮತ್ತು ಸೋಲಿಗೆ ಸಾಮೂಹಿಕ ಹೊಣೆಗಾರಿಕೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ ಸೋಲಿಗೆ ಯಾರ ಕಾರಣ ಎಂಬುದನ್ನು ಗುರುತಿಸಿ ತಲೆದಂಡ ಪಡೆಯುವುದೇ ಮುಖ್ಯ ಎಂದಿದ್ದಾರೆ.
ಪಕ್ಷದ ವಿರುದ್ಧ ನಾನು ಬಹಿರಂಗವಾಗಿ ಇಷ್ಟೆಲ್ಲ ಚುಚ್ಚು ಮಾತುಗಳನ್ನು ಆಡುತ್ತಿದ್ದರೂ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳುವ ಧೈರ್ಯ ಯಾರಿಗೂ ಇಲ್ಲ; ಅಂತಹ ಡಿಎನ್ಎ ಕೂಡ ಯಾರಲ್ಲೂ ಇಲ್ಲ’ ಎಂದು ಶತ್ರುಘ್ನ ಸಿನ್ಹಾ ಅವರು ಕಿಡಿ ಕಾರಿದ್ದಾರೆ.
ಮಾಜಿ ಗೃಹ ಕಾರ್ಯದರ್ಶಿ ಆರ್ ಕೆ ಸಿಂಗ್ ಮತ್ತು ಹೆಮ್ಮೆಯ ಬಿಹಾರಿ ಶೇರ್ (ತಾನು) ಯಾವತ್ತೂ ತಪ್ಪೆಸಗುವವರಲ್ಲ. ಅಂತೆಯೇ ನಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುವ ಧೈರ್ಯ ಯಾರಿಗೂ ಇಲ್ಲ’ ಎಂದು ಶತ್ರುಘ್ನ ಸಿನ್ಹಾ ಟ್ವೀಟ್ ಮಾಡಿದ್ದಾರೆ.