ಉಡುಪಿ: ಪರಿಸರ ಪ್ರೇಮದ ಬಗ್ಗೆ ಕರ್ನಾಟಕದ ಹೆಸರನ್ನು ಜಗದೆತ್ತರಕ್ಕೆ ಬೆಳಗಿಸಿದ ನಿಸರ್ಗದ ಪೀತಿಯ ಸಾಕಾರ ಮೂರ್ತಿ ಸಾಲುಮರದ ತಿಮ್ಮಕ್ಕ ಅವರ ಅನಾರೋಗ್ಯದ ಚಿಕಿತ್ಸೆಗಾಗಿ ಸಮಾನ ಮನಸ್ಕ ಪರಿಸರ ಪ್ರೇಮಿ ಮಿತ್ರರೊಡಗೂಡಿ ಚಿಕಿತ್ಸಾನಿಧಿ ಸಂಗ್ರಹಿಸುವ ಕಾರ್ಯ ಉಡುಪಿ ನಗರದಲ್ಲಿ ಶನಿವಾರ ಸಂಜೆ ನಡೆಯಿತು.
ನಗರದ ಜೋಡುಕಟ್ಟೆಯಲ್ಲಿರುವ ಬಿಗ್ಬಝಾರ್ನಿಂದ ಆರಂಭಗೊಂಡ `ನೆರಳು- ನೆರವು’ ಜಾಥವು ಸರ್ವಿಸ್ ಬಸ್ ನಿಲ್ದಾಣದವರೆಗೆ ನಡೆಯಿತು. ಜಾಥದ ಉದ್ದಕ್ಕೂ ರಿಕ್ಷಾ ಚಾಲಕರು, ಗೂಡಂಗಡಿ, ಸಾರ್ವಜನಿಕರಿಂದ ದೇಣಿಗೆಯನ್ನು ಸಂಗ್ರಹಿಸಲಾಯಿತು.
ಬಿಗ್ಬಝಾರ್ ಎದುರು ನಡೆದ ಕಾರ್ಯಕ್ರಮದಲ್ಲಿ ಉಡುಪಿಯ ರೋಬೊ ಸಾಫ್ಟ್ ಕಂಪೆನಿಯ ಉದ್ಯೋಗಿಗಳು ಸಂಗ್ರಹಿಸಿದ 41 ಸಾವಿರ ರೂ. ದೇಣಿಗೆಯನ್ನು ಈ ಸಂದರ್ಭದಲ್ಲಿ ನೀಡಲಾಯಿತು. ಅದೇ ರೀತಿ ಕರ್ನಾಟಕ ಕಾರ್ಮಿಕ ರಕ್ಷಣಾ ವೇದಿಕೆಯ ರವಿ ಶೆಟ್ಟಿ10 ಸಾವಿರ ಹಾಗೂ ಕಾಂಗ್ರೆಸ್ ಯುವ ಮುಖಂಡ ಅಮೃತ್ ಶೆಣೈ 10 ಸಾವಿರ ರೂ. ದೇಣಿಗೆಯನ್ನು ಘೋಷಿಸಿದರು. ಉಡುಪಿ ನಗರಸಭೆ ಅಧ್ಯಕ್ಷ ಪಿ.ಯುವರಾಜ್, ನೇತ್ರತಜ್ಞ ಡಾ.ಕೃಷ್ಣಪ್ರಸಾದ್, ಮೊದಲಾದವರು ಉತ್ತಮ ನೆರವು ನೀಡುವ ಭರವಸೆಯನ್ನು ನೀಡಿದ್ದರು.
ಅಭೂತಪೂರ್ವ ರೆಸ್ಪಾನ್ಸ್: ನೆರಳು ನೆರವು ಅಭಿಯಾನದಲ್ಲಿ ಸಾರ್ವಜನಿಕರು, ರಿಕ್ಷಾ ಚಾಲಕರು ಮತ್ತು ಮಾಲಕರು, ಹಿರಿಯ ನಾಗರೀಕರು ತಮ್ಮ ಕೈಯಲ್ಲಾದ ದೇಣಿಗೆ ನೀಡಿ ಹಿರಿಯಜ್ಜಿ ತಿಮ್ಮಕ್ಕನ ಚಿಕಿತ್ಸೆಗಾಗಿಸ್ಪಂದನೆ ನೀಡಿದ್ದು ಕಂಡುಬಂತು.
ಅಭಿಯಾನದಲ್ಲಿ ಸಂಗ್ರಹವಾದ ಮೊತ್ತವನ್ನು ಡಿಡಿ ರೂಪದಲ್ಲಿ ತಿಮಕ್ಕ ಅವರಿಗೆ ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ. ಈ ಸಂದರ್ಭ ಸಂಘಟಕರಾದ ಅವಿನಾಶ್ ಕಾಮತ್, ಗುರುರಾಜ್ ಸನಿಲ್, ವಿರಾಜ್ ಕಾಪು, ಶ್ರೀಕಾಂತ್ ಶೆಟ್ಟಿ, ಪ್ರೇಮಾನಂದ ಕಲ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.
ತಿಮ್ಮಕ್ಕ ಅವರ ಬಗ್ಗೆ: ಸರಕಾರ ನೀಡುತ್ತಿರುವ 500 ರೂಪಾಯಿ ವೃದ್ದಾಪ್ಯ ವೇತನ ಹೊರತು ಪಡಿಸಿ ಇವರಿಗೆ ಜೀವನ ನಿರ್ವಹಣೆಗೆ ಬೇರೆ ಯಾವುದೇ ಆರ್ಥಿಕ ಮೂಲಗಳಿಲ್ಲ. 105 ವರ್ಷದ ಈ ಅಜ್ಜಿಯ ಆರೋಗ್ಯವೂ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇವರ ಸಾಕುಮಗ ಉಮೇಶ್ ಅವರನ್ನು ಹೊರತುಪಡಿಸಿ ತಿಮ್ಮಕ್ಕನಿಗೆ ತನ್ನವರು ಎಂಬವರು ಯಾರೂ ಇಲ್ಲ. ವಯೋ ಸಹಜ ಆರೋಗ್ಯ ಸಮಸ್ಯೆಗಳು ಇವರನ್ನು ಕಾಡುತ್ತಿದ್ದು, ಚಿಕಿತ್ಸೆಯ ವೆಚ್ಚ ಭರಿಸಲೂ ಇವರು ಹೆಣಗಾಡುತ್ತಿದ್ದಾರೆ. ಇವರ ಹುಟ್ಟೂರಾದ ಹುಲಿಕಲ್ ನಲ್ಲಿ ಸುಸಜ್ಜಿತ ಆಸ್ಪತ್ರೆಗಳು ಇರದಿರುವ ಕಾರಣ ಸದ್ಯ ತಿಮ್ಮಕ್ಕ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.









