ಕುಂದಾಪುರ: ಕಾರಂತರ ಹುಟ್ಟೂರಿನಲ್ಲಿ ಕಾರಂತರ ಥೀಂ ಪಾರ್ಕ ಅನಿವಾರ್ಯ ಎನಿಸಿಕೊಳ್ಳುತ್ತದೆ. ಇಲ್ಲಿ ಪ್ರತಿವರ್ಷ ನಡೆಯುವ ಹುಟ್ಟೂರ ಪ್ರಶಸ್ತಿ ಉತ್ಸವದ ಮೂಲಕ ಕಾರಂತರ ನೆನಪು ಸದಾ ಹಸಿರಾಗಿ ಉಳಿದಿದೆ. ಇಂದು ಕಾರಂತರ ಹುಟ್ಟೂರ ಪ್ರಶಸ್ತಿ ಸ್ವೀಕರಿಸುತ್ತಿರುವುದು ನಾನು ಬಯಸದೆ ಬಂದ ಭಾಗ್ಯ ಎಂದು ಪ್ರಸಿದ್ಧ ರಂಗಕರ್ಮಿ ಸ್ವರ್ಣ ಕಮಲ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಸದಾನಂದ ಸುವರ್ಣ ಅಭಿಪ್ರಾಯಪಟ್ಟರು.
ಅವರು ಶನಿವಾರ ಸಂಜೆ ಕೋಟ ಕಾರಂತ ಥೀಂ ಪಾರ್ಕನಲ್ಲಿ ಕೋಟತಟ್ಟು ಪಂಚಾಯಿತಿ, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ.) ಕೋಟ, ಡಾ.ಶಿವರಾಮ ಕಾರಂತ ಟ್ರಸ್ಟ್(ರಿ) ಉಡುಪಿ ಸಹಯೋಗದಲ್ಲಿ 10 ದಿನಗಳ ಆಯೋಜಿಸಲಾದ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 11ನೇ ವರ್ಷದ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಕಾರಂತರು ಅದ್ಬುತ ವ್ಯಕ್ತಿ ಮತ್ತು ಶಕ್ತಿ. ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಿದ್ದ ಸೃಜನಶೀಲರು. ಅವರಿಗೆ ಜ್ಞಾನದ ಹಸಿವಿತ್ತು ಆ ಕಾರಣಕ್ಕೆ ಕಾಲೇಜಿನ ನಾಲ್ಕು ಗೋಡೆಗಳನ್ನು ತ್ಯಜಿಸಿ ಪ್ರಪಂಚವೆಂಬ ಕಾಲೇಜಿಗೆ ಪ್ರವೇಶಿಸಿ ಮಾಡಿದ ಸಾಧನೆ ಇಂದಿನ ಮತ್ತು ಮುಂದಿನ ಪೀಳಿಗೆಗೆ ಪ್ರೇರಣೆ. ಎಲ್ಲಾ ವಿಚಾರಗಳಲ್ಲಿ ಇರುವ ಆಸಕ್ತಿ ಮತ್ತು ಕೂತೂಹಲ ಅವರ ಸಾಧನೆಗೆ ಸಹಕಾರಿಯಾಗಿತ್ತು. ಅವರ ಅನುಭವದ ಬುತ್ತಿಯಿಂದಲೇ ಅಷ್ಟೋಂದು ಕಾದಂಬರಿಗಳು ಹೊರ ಬಂದು ಲೋಕ ಮನ್ನಣೆ ಗಳಿಸಿತು. ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕ ಕಾರಂತರು. ಕಾರಂತರು ಬದುಕಿನ ನಂತರ ಅವರ ಹೆಸರು ಮಾಸಬಹುದು ಎನ್ನುವ ಊಹೆಗಳಿದ್ದವು ಆದರೆ ಕಾರಂತರ ಹುಟ್ಟೂರಿನಲ್ಲಿರುವ ಅಭಿಮಾನಿಗಳು ಕಾರಂತರನ್ನು ಇಂದಿಗೂ ಜೀವಂತವಾಗಿರಿಸಿದ್ದಾರೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಕಾರಂತರ ಬದುಕಿನಲ್ಲಿ ಒಂದಿಷ್ಟು ಕಾಲ ಒಡನಾಡಿಯಾಗಿದ್ದ ಸದಾನಂದ ಸುವರ್ಣರಲ್ಲಿ ಕಾರಂತರ ವ್ಯಕ್ತಿತ್ವ ಗುಣ ನಡೆತೆಗಳು ಮೈಗೂಡಿದೆ ಎಂದೆನಿಸುತ್ತಿದೆ. ಮತ್ತೋಮ್ಮೆ ಕಾರಂತರನ್ನು ನೋಡಿದೇನೋ ಎನ್ನುವ ಭಾವನೆಯನ್ನು ಮೂಡಿಸುತ್ತಿದೆ. ರಾಜ್ಯದ 6 ಸಾವಿರದ 14 ಗ್ರಾಮ ಪಂಚಾಯಿತಿಗಳಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ ಕಾರಂತರ ಹುಟ್ಟೂರ ಪ್ರಶಸ್ತಿ ನೀಡುವ ಮೂಲಕ ವಿಭಿನ್ನವಾಗಿ ವಿಶಿಷ್ಟವಾಗಿ ಗುರುತಿಸಲ್ಪಡುತ್ತಿರುವುದು ಸಂತಸದ ವಿಚಾರ ಏಂದರು. ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಎಚ್.ಪ್ರಮೋದ್ ಹಂದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ನ್ಯಾಯವಾದಿ ಸಾಹಿತಿ ಎ.ಎಸ್.ಎನ್.ಹೆಬ್ಬಾರ್ ಕಾರಂತರಿಗೆ ನುಡಿ ನಮನ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಕಾರಂತರ ಮರಿ ಮೊಮ್ಮಗಳು ನಟಿ ನೀತಾ ಅಶೋಕ್, ತಾಲೂಕು ಪಂಚಾಯಿತಿ ಸದಸ್ಯರಾದ ರಾಘವೇಂದ್ರ ಕಾಂಚನ್, ಭರತಕುಮಾರ್ ಶೆಟ್ಟಿ, ಕೋಟ ಪಂಚಾಯಿತಿ ಅಧ್ಯಕ್ಷೆ ವನಿತಾ ಶ್ರೀಧರ ಆಚಾರ್ಯ, ಕಾರಂತ ರಂಗ ರಥದ ಮಾಲಿನಿ ಮಲ್ಯ, ಉದ್ಯಮಿ ದತ್ತಾನಂದ ಉಪಸ್ಥಿತರಿದ್ದರು. ಆಯ್ಕೆ ಸಮಿತಿಯ ಯು.ಎಸ್.ಶೆಣೈ ಸದಾನಂದ ಸುವರ್ಣ ಅವರನ್ನು ಸಭೆಗೆ ಪರಿಚಯಿಸಿದರು. ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಸುಜಯೀಂದ್ರ ಹಂದೆ ಯಕ್ಷಗಾನ ಶೈಲಿಯಲ್ಲಿ ಸದಾನಂದ ಸುವರ್ಣ ಅವರ ಜೀವನಗಾಥೆಯನ್ನು ಹಾಡಿದರು.
ಇದೇ ವೇದಿಕೆಯಲ್ಲಿ ಕಾರಂತರ ಮರಿ ಮೊಮ್ಮಗಳು ನಟಿ ನೀತಾ ಅಶೋಕ್ ಅವರನ್ನು, ಕಾರ್ಯಕ್ರಮ ಸಂಯೋಜನೆಯಲ್ಲಿ ಬಹು ಮುಖ್ಯ ಪಾತ್ರವಹಿಸಿದ ಗಣ್ಯರನ್ನು ಗೌರವಿಸಲಾಯಿತು. ಕೋಟತಟ್ಟು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಾರ್ವತಿ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್ ಸ್ವಾಗತಿಸಿದರು. ಶಿಕ್ಷಕ ಸತೀಶ್ ವಡ್ಡರ್ಸೆ ಮತ್ತು ಪರಿಪೂರ್ಣ ಕಾರ್ಯಕ್ರಮ ನಿರೂಪಿಸಿದರು. ಪಂಚಾಯಿತಿ ಕಾರ್ಯದರ್ಶಿ ಮೀರಾ ವಂದಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಕೋಟತಟ್ಟು ಪಂಚಾಯಿತಿ ಕಛೇರಿಯಿಂದ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು, ಗಣ್ಯರೊಂದಿಗೆ ಮೆರವಣಿಗೆಯಲ್ಲಿ ಥೀಂ ಪಾರ್ಕಗೆ ಕರೆತರಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಪುಟಾಣಿ ಪಂಟ್ರು ಖ್ಯಾತಿಯ ಪ್ರದೀಶ್ ಭಟ್ ಅವರಿಂದ ಚಿತ್ರ ಸಿಂಚನ, ಯಕ್ಷ ನಾಟ್ಯ ವೈಭವ ಮತ್ತು ಸಂಗೀತ ಗಾನ ಸುಧೆ ನಡೆಯಿತು.




























