ಕೋಲಾರ: ಮದುಮಗ ಮದುವೆಯ ದಿನವೇ ಅಪಮಾನ ಸಹಿಸಿಕೊಳ್ಳಲಾಗದೆ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇತಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಕಳ್ಳಿಕುಪ್ಪದಲ್ಲಿ ನಡೆದಿದೆ.
ಮೃತರನ್ನು ರಾಮಕೃಷ್ಣ (30)ಎಂದು ಗುರುತಿಸಲಾಗಿದೆ. ರಾಮಕೃಷ್ಣ ಗುರುವಾರ ಮುಳಬಾಗಿಲು ತಾಲೂಕಿನ ಆವಣಿ ಗ್ರಾಮದ ಯುವತಿಯನ್ನು ಮದುವೆ ಆಗಿದ್ದರು. ಸಂಜೆ ಊರಿನಲ್ಲಿ ಶೋಭನದ ಕಾರ್ಯಕ್ರಮ ನಿಗದಿ ಆಗಿತ್ತು. ಮದುವೆ ಮಾಡಿಸಿದ ಆಂಧ್ರ ಪ್ರದೇಶದ ಶಾಂತಿಪುರ ಮಂಡಲ್ನ ವೊಡ ಗಾಂಡ್ಲಹಳ್ಳಿ ಗ್ರಾಮದ ಸ್ವಾಮೀಜಿ ರಾಮಪ್ಪ ಎಂಬುವರು ಹುಡುಗನ ತಾತನ ಬಳಿ, “ರಾಮಕೃಷ್ಣನಿಗೆ ಪುರುಷತ್ವದ ಸಮಸ್ಯೆ ಇದೆ. ಸಂಸಾರ ಮಾಡುವುದು ಕಷ್ಟವಾಗ ಬಹುದು” ಎಂದು ಹೇಳಿದ್ದರೆನ್ನಲಾಗಿದೆ.
ಈ ವಿಷಯವನ್ನು ತಾತ ರಾಮಕೃಷ್ಣನ ಕಿವಿಗೆ ಬೀಳುವ ರೀತಿಯಲ್ಲಿ ಹೇಳಿದ್ದರಿಂದ ಬೇಸತ್ತು ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ತಂದೆ ನಾರಾಯಣಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪ ದಡಿರಾಮಪ್ಪನನ್ನು ಬಂಧಿಸಲಾಗಿದೆ.
“ರಾಮಕೃಷ್ಣನಿಗೆ ಪುರುಷತ್ವದ ಸಮಸ್ಯೆ ಇರುವುದು ತಮಗೆ ಕಳೆದ ಎರಡು ತಿಂಗಳ ಹಿಂದೆಯೇ ಗೊತ್ತಿತ್ತು. ಈ ವಿಷಯವನ್ನು ರಾಮಕೃಷ್ಣನೇ ತಿಳಿಸಿ ಪರಿಹಾರ ತೋರುವಂತೆ ತಿಳಿಸಿದ್ದ. ನಾಟಿ ಔಷಧ ಕೊಡಿಸಲಾಗಿತ್ತು. ಮದುವೆ ಆಗಿರುವ ಹುಡುಗಿಗೆ ಅನ್ಯಾಯವಾಗದಿರಲಿ ಎಂದು ರಾಮಕೃಷ್ಣನ ತಾತನಿಗೆ ಹೇಳಿದ ತಮ್ಮ ವಿರುದ್ಧವೇ ದೂರು ನೀಡಲಾಗಿದೆ” ಎಂದು ಸ್ವಾಮೀಜಿ ರಾಮಪ್ಪ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.