ನೆಲಮಂಗಲ: ಭೋವಿ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮವೊಂದನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದರು. ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕದ ನೈಸ್ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಸಿದ್ದರಾಮೇಶ್ವರ ಜಯಂತ್ಯುತ್ಸವ ಹಾಗೂ ಭೋವಿ ಬೃಹತ್ ಸಮಾವೇಶವನ್ನು ಕಲ್ಲು ಒಡೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
‘ಭೋವಿ ಜನಾಂಗದ ಅಭಿವೃದ್ಧಿಗೆ ಅಗತ್ಯವಾದ ಅನುದಾನ ನೀಡಲಾಗುತ್ತದೆ. ಸಮಾಜದ ಅಭಿವೃದ್ಧಿಗೆ ಬಿಡುಗಡೆಯಾದ ಹಣ ಬಳಕೆ ಆಗದಿದ್ದಾಗ ಅದನ್ನು ಮುಂದಿನ ವರ್ಷದ ಅನುದಾನದ ಜತೆ ಸೇರಿಸಿ ನೀಡಲಾಗುತ್ತದೆ’ ಎಂದು ಹೇಳಿದರು. ‘ಭೋವಿ ಜನಾಂಗದಲ್ಲಿ ಶಿಕ್ಷಿತರ ಸಂಖ್ಯೆ ಕಡಿಮೆ ಇದ್ದು, ಶಿಕ್ಷಿತರಾದರೆ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದ ಅವರು, ‘ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆ ಹೋಗಿ ಎಲ್ಲರಿಗೂ ಸಂಪತ್ತು, ಅಧಿಕಾರ ಸಮಾನವಾಗಿ ಹಂಚಿಕೆಯಾಗಬೇಕು ಎಂಬುದು ನಮ್ಮ ಸರ್ಕಾರದ ಆಶಯವಾಗಿದೆ’ ಎಂದು ತಿಳಿಸಿದರು. ‘1983ರಿಂದಲೂ ಭೋವಿ ಜನಾಂಗ ನನ್ನ ಜತೆಗಿದೆ’ ಎಂದರು.
ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ‘ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರು ಮೈಸೂರಿನ ಭೋವಿ ಜನಾಂಗಕ್ಕೆ ಮೀಸಲಾತಿ ನೀಡಿದ್ದರು. ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅಖಂಡ ಕರ್ನಾಟಕದ ಭೋವಿ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಿದರು. ಭೋವಿ ಅಭಿವೃದ್ಧಿ ನಿಗಮ ಮೈಸೂರಿನವರಾದ ಸಿದ್ಧರಾಮಯ್ಯ ಅವರಿಂದ ಆಗಬೇಕು’ ಎಂದು ಆಶಿಸಿದರು.
‘ಭೋವಿಗಳು ತಲೆ ಒಡೆದು ಬದುಕುತ್ತಿಲ್ಲ, ಕಲ್ಲು ಒಡೆದು ಬದುಕುತ್ತಿದ್ದಾರೆ. ಪರಿಶಿಷ್ಟ ಜಾತಿ ಪಂಗಡಗಳ ಅಭಿವೃದ್ದಿಗೆ ₨ 11ಸಾವಿರ ಕೋಟಿ ಮೀಸಲಿಡಲಾಗಿದೆ. ಶೇ 11ರಷ್ಟಿರುವ ನಮಗೆ ₨ 1,320 ಕೋಟಿ ಸಿಗಬೇಕಾಗಿತ್ತು. ಅದು ಸಿಗುತ್ತಿಲ್ಲ. ನಮ್ಮ ಪಾಲು ಕೇಳುತ್ತಿದ್ದೇವೆ’ ಎಂದರು.
ಸಣ್ಣ ನೀರಾವರಿ ಸಚಿವ ಶಿವರಾಜ ಎಸ್.ತಂಗಡಗಿ, ‘ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂತ್ರಿ ಮಂಡಲದಲ್ಲಿ ಸಮಾನ ಅವಕಾಶ ನೀಡಿ ನನ್ನನ್ನು ಮಂತ್ರಿ ಮಾಡಿದ್ದಾರೆ. ಭೋವಿ ಜನಾಂಗದವರು ಕೆರೆಗಳನ್ನು ಕಟ್ಟುತ್ತಿದ್ದರು. ಸಣ್ಣ ನೀರಾವರಿ ಖಾತೆ ನೀಡುವ ಮೂಲಕ ಅದೇ ಕೆಲಸ ಕೊಟ್ಟಿದ್ದಾರೆ’ ಎಂದರು.
‘ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಿದ್ಧರಾಮೇಶ್ವರರ ಜಯಂತಿಆಚರಣೆಗೆ ತರಲಾಯಿತು, ಭೋವಿ ನಿಗಮ ಸ್ಥಾಪನೆಗೂ ಚಾಲನೆ ನೀಡಲಾಗಿತ್ತು’ ಎಂದು ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ತಿಳಿಸಿದರು. ಇಂಧನ ಸಚಿವ ಡಿ.ಕೆ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಮಾತನಾಡಿದರು.
ಕೋಲಾರ ಕೇಶವ, ಸಂಸದ ಕೆ.ಎಚ್.ಮುನಿಯಪ್ಪ, ಶಾಸಕರಾದ ಶ್ರೀನಿವಾಸಮೂರ್ತಿ, ರಘು, ರಾಘವೇಂದ್ರ ಹಿಟ್ನಾಳ್, ಮಾನಪ್ಪ ವಜ್ಜಲ್, ಮುಖಂಡರಾದ ವೆಂಕಟಸ್ವಾಮಿ, ಎಂ.ವಿ.ನಾಗರಾಜು, ಬಸವರಾಜು, ಭೋವಿ ಸಮಾಜದ ಕಾರ್ಯಾಧ್ಯಕ್ಷ ಮಾಕಳಿ ರವಿ, ಕೆಪಿಸಿಸಿ ಪರಿಶಿಷ್ಟ ಪಂಗಡದ ಎಂ.ರಾಮಪ್ಪ, ಹರಿಕುಮಾರ್ ವೇದಿಕೆಯಲ್ಲಿದ್ದರು. ಡಾ.ಚೌಡಯ್ಯ ಅವರ ‘ಭೋವಿ ರತ್ನಗಳು’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು ಮತ್ತು ಭೋವಿ ಜನಾಂಗದ ಅಂತರ್ಜಾಲ ತಾಣ ಬಿಡುಗಡೆ ಮಾಡಲಾಯಿತು. www.sjsbhovigurupeeta.com.
ಮುನಿಯಪ್ಪಗೆ ಸಿಗದ ಅವಕಾಶ
ಸಮಾರಂಭದಲ್ಲಿ ಸಂಸದ ಕೆ. ಎಚ್. ಮುನಿಯಪ್ಪ ಅವರು ಮಾತನಾಡಲು ಮುಂದಾದಾಗ ಅವರಿಗೆ ಅವಕಾಶ ಕೊಡಲಿಲ್ಲ. ಭೋವಿ ಸಮಾಜವನ್ನು ಪರಿಶಿಷ್ಟ ಪಂಗಡದಿಂದ ತೆಗೆಯಲು ಯತ್ನಿಸಿದವರನ್ನು ಮುಖ್ಯ ಅತಿಥಿಗಳಾಗಿ ಕರೆದು ವೇದಿಕೆ ಮೇಲೆ ಕೂರಿಸಲಾಗಿದೆ. ಸಮಾಜಕ್ಕೆ ದುಡಿದವರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ಮುಖಂಡ ಕೋಲಾರ ಕೇಶವ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದರು.
ಕೆಟ್ಟ ಶಕ್ತಿಗಳನ್ನು ತೊಡೆಯಬೇಕು
ಸಿದ್ದರಾಮಯ್ಯನವರ ನಾಯಕತ್ವವನ್ನು ಅಲುಗಾಡಿಸಲು ಕೆಟ್ಟ ಶಕ್ತಿಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ಅಂತಹ ಕೆಟ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಹಿಂದುಳಿದ ವರ್ಗಗಳು ಒಂದಾಗಿ ನಿಲ್ಲಬೇಕು
–ಸಚಿವೆ ಉಮಾಶ್ರೀ