Uncategorized

ಹಿರಿಯ ನಿರ್ದೇಶಕ, ರಂಗಕರ್ಮಿ ಟಿ.ಎಸ್‌.ರಂಗಾ ನಿಧನ

Pinterest LinkedIn Tumblr


ಬೆಂಗಳೂರು: ಕನ್ನಡದ ಹಿರಿಯ ನಿರ್ದೇಶಕ, ರಂಗಕರ್ಮಿ ಟಿ.ಎಸ್‌. ರಂಗಾ (69) ಬೆಂಗಳೂರಿನ ಎನ್‌.ಆರ್‌.ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ.

ಹಲವು ವರ್ಷಗಳಿಂದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಪತ್ನಿ ಅಶ್ವಿನಿ, ಮಗಳು ತನ್ವಿತಾ, ಅಳಿಯ ಮತ್ತು ಅಪಾರ ಅಭಿಮಾನಿಗಳು, ಶಿಷ್ಯವೃಂದವನ್ನು ಅವರು ಅಗಲಿದ್ದಾರೆ.

ಹಿರಿಯ ನಟ ಸುಂದರ್‌ರಾಜ್‌, ನಿರ್ದೇಶಕ ಟಿ.ಎಸ್‌.ನಾಗಾಭರಣ ಸೇರಿದಂತೆ ಸಿನಿಮಾ ರಂಗದಲ್ಲಿ ಹಲವು ಗಣ್ಯರು ಅಂತಿಮ ದರ್ಶನ ಪಡೆದರು. ಭಾನುವಾರ ಸಂಜೆಯೇ ಬೆಂಗಳೂರಿನಲ್ಲಿ ಮೃತರ ಅಂತ್ಯಕ್ರಿಯೆ ಕೂಡ ನೆರವೇರಿತು.

ರಂಗಭೂಮಿಯ ಮೂಲಕ ರಂಗಾ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು. ಬಿ.ವಿ.ಕಾರಂತ್‌ ಗರಡಿಯಲ್ಲಿ ಪಳಗಿದ್ದ ಇವರು, ಹಯವದನ, ಸತ್ತವರ ನೆರಳು ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪ್ರಯೋಗ ಎಂಬ ತಮ್ಮದೇ ತಂಡ ಕಟ್ಟಿಕೊಂಡು ಹಲವು ನಾಟಕಗಳನ್ನೂ ಆಡಿದ್ದಾರೆ.

ರಂಗಭೂಮಿ ಜತೆಗೆ ಸಿನಿಮಾ ರಂಗದ ನಂಟೂ ಹೊಂದಿದ್ದ ಇವರು, ‘ಗೀಜಗನ ಗೂಡು’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶ ಮಾಡಿದರು. ಇದು ಇವರ ಚೊಚ್ಚಲು ನಿರ್ದೇಶನದ ಸಿನಿಮಾ. ಈ ಸಿನಿಮಾ ಭಾರತೀಯ ಪನೋರಮಾ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಮೊದಲ ಚಿತ್ರ. ಉತ್ತರ ಕರ್ನಾಟಕದ ಬಗ್ಗೆ ಅಪಾರ ಒಲವು ಹೊಂದಿದ್ದ ಇವರು, ‘ಸಾವಿತ್ರಿ’ ಚಿತ್ರದ ಮೂಲಕ ಅಲ್ಲಿನ ಜನರ ಸ್ಥಿತಿಗತಿ ಹಿಡಿದಿಟ್ಟಿದ್ದರು.

ಕನ್ನಡದಲ್ಲಿ ಮಾತ್ರವಲ್ಲ, ಬಾಲಿವುಡ್‌ನಲ್ಲೂ ಒಂದು ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಗಿಧ್‌ (ರಣಹದ್ದುಗಳು) ಹೆಸರಿನಲ್ಲಿ ಮೂಡಿ ಬಂದ ಚಿತ್ರದಲ್ಲಿ ಓಂ ಪುರಿ, ನಾನಾ ಪಾಟೇಕರ್‌, ಸ್ಮಿತಾ ಸೇರಿದಂತೆ ಖ್ಯಾತ ಕಲಾವಿದರು ನಟಿಸಿದ್ದಾರೆ. ಟಿ.ಎಸ್‌.ನಾಗಾಭರಣ ನಿರ್ದೇಶನದ, 1978ರಲ್ಲಿ ತೆರೆಕಂಡ ‘ಗ್ರಹಣ’ ಸಿನಿಮಾದ ಚಿತ್ರಕಥೆಗಾಗಿ ರಂಗಾ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಲ್ಲದೇ, ಹಲವು ಸಾಕ್ಷ್ಯ ಚಿತ್ರಗಳ ನಿರ್ಮಾಣದ ಜತೆಗೆ ನಿರ್ದೇಶನ ಕೂಡ ಮಾಡಿದ ಹೆಗ್ಗಳಿಕೆ ಇವರದ್ದು.

Comments are closed.